ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಬದುಕಿನುದ್ದಕ್ಕೂ ಬರುವಂತಹ ಸವಾಲುಗಳನ್ನು ಸಮರ್ಥವಾಗಿ ಎದುರಿಸಲು ಆತ್ಮವಿಶ್ವಾಸ ಮತ್ತು ಧೈರ್ಯ ಇವೆರಡೂ ಅಗತ್ಯವಾಗಿರುತ್ತದೆ ಎಂದು ಲಯನ್ಸ್ ಕ್ಲಬ್ ಕುಂದಾಪುರ ಇದರ ಅಧ್ಯಕ್ಷರಾದ ಸದಾನಂದ ನಾವಡ ಹೇಳಿದರು.
ಅವರು ಶನಿವಾರ ಇಲ್ಲಿನ ಭಂಡಾರ್ಕಾರ್ಸ್ ಪದವಿ ಪೂರ್ವ ಕಾಲೇಜು, ಲಯನ್ಸ್ ಕ್ಲಬ್ ಕುಂದಾಪುರ ಮತ್ತು ಟಿಸಿಹೆಚ್ಆರ್ ಆಪ್ ಬೆಂಗಳೂರು ಇವರು ಸಹಯೋಗದಲ್ಲಿ ನಡೆದ ಕುಂದಾಪುರ ಮತ್ತು ಬೈಂದೂರು ವಲಯ ಮಟ್ಟದ ಅಂತರ್ ಪ್ರೌಢಶಾಲೆಗಳ ಮಟ್ಟದ “ಜಾನಪದ ನೃತ್ಯ ವೈಭವ” ಸ್ಪರ್ಧೆಯನ್ನು ಉದ್ಘಾಟಿಸಿ ಮಾತನಾಡಿದರು.

ಬದುಕಿನಲ್ಲಿ ಸವಾಲುಗಳನ್ನು ಸ್ವೀಕರಿಸಲು ಕೇವಲ ಪುಸ್ತಕದ ಓದು ಸಾಲದು. ನಿಮ್ಮ ವಿದ್ಯಾರ್ಥಿ ಜೀವನದ ಪಾಠೇತರ ಚಟುವಟಿಕೆಗಳು, ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದರಿಂದ ವ್ಯಕ್ತಿತ್ವ ವಿಕಸನವಾಗುತ್ತದೆ. ಅದು ನಿಮ್ಮ ಬದುಕಿನಲ್ಲಿ ಸುಗಮ ರೀತಿಯಲ್ಲಿ ನಡೆಸಲು ಅನುಕೂಲವಾಗುತ್ತದೆ ಎಂದು ಹೇಳಿದರು.
ಕಾರ್ಯಕ್ರಮದ ಇನ್ನೋರ್ವ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಕರ್ನಾಟಕ ಮಾಧ್ಯಮ ಅಕಾಡೆಮಿಯ ಮಾಜಿ ಕಾರ್ಯದರ್ಶಿ ಸಹನಾ ಅವರು ಮಾತನಾಡಿ, ಜೀವನದಲ್ಲಿ ಬರುವ ಸವಾಲುಗಳು ದೊಡ್ಡದಿರುತ್ತದೆ. ಈ ವಿದ್ಯಾರ್ಥಿ ಜೀವನ ಎನ್ನುವುದು ಬದುಕಿನ ಅತ್ಯಂತ ಸುಂದರ ಸಮಯವಾಗಿದೆ. ಇದನ್ನು ಪ್ರೀತಿಸಿ, ಆಸ್ವಾದಿಸಿ ಮತ್ತು ಅನುಭವಿಸಿ. ನಿಮ್ಮ ಏಳಿಗೆಗೆ ನೀವೆ ಶಿಲ್ಪಿಗಳು. ಮಹತ್ವಾಕಾಂಕ್ಷಿಯಾಗಿರಿ. ಅದಕ್ಕೆ ತಕ್ಕ ತಯಾರಿ ಮಾಡಿಕೊಳ್ಳಿ, ಅಲ್ಲದೆ ಪಾಠೇತರ ಚಟುವಟಿಕೆಗಳಲ್ಲಿ ನಿಮ್ಮನ್ನು ನೀವು ತೊಡಗಿಸಿಕೊಳ್ಳುವುದರಿಂದ ಉತ್ತಮ ಸಂಬಂಧ ಮತ್ತು ಸಂವಹನ ಕಲೆ ಕರಗತವಾಗುತ್ತದೆ ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಭಂಡಾರ್ಕಾರ್ಸ್ ಕಾಲೇಜಿನ ವಿಶ್ವಸ್ಥ ಮಂಡಳಿಯ ಉಪಾಧ್ಯಕ್ಷರಾದ ಕೆ ಶಾಂತಾರಾಮ್ ಪ್ರಭು ಮಾತನಾಡಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಭಂಡಾರ್ಕಾರ್ಸ್ ಕಾಲೇಜಿನ ಆಡಳಿತ ಮಂಡಳಿಯ ಕಾರ್ಯದರ್ಶಿಗಳಾದ ಯು.ಎಸ್.ಶೆಣೈ, ಪದವಿ ಕಾಲೇಜಿನ ಪ್ರಾಂಶುಪಾಲರಾದ ಡಾ.ಶುಭಕರಾಚಾರಿ, ಪೂರ್ವ ಕಾಲೇಜಿನ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಡಾ.ಸರೋಜ.ಎಮ್ ಉಪಸ್ಥಿತರಿದ್ದರು.
ಭಂಡಾರ್ಕಾರ್ಸ್ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಡಾ. ಜಿ. ಎಮ್.ಗೊಂಡ ಪ್ರಾಸ್ತಾವಿಕವಾಗಿ ಮಾತನಾಡಿದರು. ಉಪನ್ಯಾಸಕಿ ರೇಣುಕಾ ಕಾರ್ಯಕ್ರಮ ನಿರೂಪಿಸಿ, ಸ್ವಾಗತಿಸಿ, ಉಪನ್ಯಾಸಕ ವಿದ್ಯಾಧರ ವಂದಿಸಿದರು.















