ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೋಟ: ಕೋಟತಟ್ಟು ಗ್ರಾಮ ಪಂಚಾಯತ್ ವತಿಯಿಂದ ದಾನಿಗಳ ಸಹಕಾರದೊಂದಿಗೆ ರೂಪಾಯಿ 90ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿರುವ ಕೊರಗ ಕಾಲೋನಿಯ ಎಂಟು ಹೊಸ ಮನೆ ನಿರ್ಮಾಣಕ್ಕೆ ಮುಂಬೈನ ಓಎನ್ಜಿಸಿ ನಿವೃತ್ತ ಚೀಪ್ ಜನರಲ್ ಮ್ಯಾನೇಜರ್ ಬನ್ನಾಡಿ ನಾರಾಯಣ ಆಚಾರ್ ಅವರು ಒಂದು ಲಕ್ಷ ರೂ ಸಹಾಯ ಧನ ಚೆಕ್ ವಿತರಣೆ ಕಾರ್ಯಕ್ರಮ ಕೊರಗರ ಕಾಲೋನಿಯಲ್ಲಿ ನಡೆಯಿತು.
ಚೆಕ್ ವಿತರಿಸಿ ಅವರು ಮಾತನಾಡಿ, ಕೋಟತಟ್ಟು ಗ್ರಾಮ ಪಂಚಾಯತ್ ನೇತೃತ್ವದಲ್ಲಿ ಕೊರಗರ ಎಂಟು ಹೊಸ ಮನೆ ನಿರ್ಮಾಣ ಕಾರ್ಯ ಶ್ಲಾಘನೀಯ. ಇಂದು ಸಹಾಯ ಧನ ಚೆಕ್ ವಿತರಿಸುತ್ತಿರುವ ಬಗ್ಗೆ ಖುಷಿ ಇದೆ. ಇಲ್ಲಿಯ ಮೂಲ ನಿವಾಸಿಗಳಿಗೆ ಹೊಸ ಎಂಟು ಮನೆ ನಿರ್ಮಿಸಿ ಕೊಡುವ ಮೂಲಕ ಕೋಟತಟ್ಟು ಗ್ರಾಮ ಪಂಚಾಯತ್ ಇತರ ಗ್ರಾಮ ಪಂಚಾಯತ್ ಗಳಿಗೆ ಮಾದರಿಯಾಗಿ ಕಾರ್ಯ ನಿರ್ವಹಿಸುತ್ತಿರುವ ಬಗ್ಗೆ ಸಂತೋಷ ವ್ಯಕ್ತಪಡಿಸಿದರು.

ಕೋಟತಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಕೆ. ಸತೀಶ್ ಕುಂದರ್ ಬಾರಿಕೆರೆ ಅವರು ಮಾತನಾಡಿ, ತಳಮಟ್ಟದ ಸಮುದಾಯವನ್ನು ಮೇಲಕ್ಕೆತ್ತುವ ಕಲ್ಯಾಣ ಕಾರ್ಯಕ್ಕೆ ಸಹಾಯ ಧನ ನೀಡಿದ ಶ್ರೀಯುತರಿಗೆ ಕೃತಜ್ಞತೆ ಸಲ್ಲಿಸಿದರು.
ಈ ಸಂಧರ್ಭದಲ್ಲಿ ಕೋಟತಟ್ಟು ಗ್ರಾಮ ಪಂಚಾಯತ್ ಪಂಚಾಯತ್ ಸದಸ್ಯರಾದ ಸದಸ್ಯರಾದ ಪ್ರಮೋದ್ ಹಂದೆ, ವಾಸು ಪೂಜಾರಿ, ರವೀಂದ್ರ ತಿಂಗಳಾಯ, ಕೆ ಸೀತಾ, ಗುತ್ತಿಗೆದಾರರಾದ ರಾಜೇಶ್ ಹಂದಟ್ಟು ಮತ್ತು ಕೊರಗ ಕಾಲೋನಿಯ ನಿವಾಸಿಗಳು ಉಪಸ್ಥಿತರಿದ್ದರು.










