ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೋಟ: ದೇಶ ಕಾಯುವ ಯೋಧರನ್ನು ಗೌರವಿಸುವ ಮನೋಭಾವನೆ ಸರ್ವಶ್ರೇಷ್ಠ ಅದೇ ರೀತಿ ಗಡಿಯಲ್ಲಿ ದೇಶಕ್ಕಾಗಿ ಬಲಿದಾನಗೈಯುವ ಯೋಧರ ಸ್ಥಿತಿಗತಿ ಅಷ್ಟೆ ಕ್ಲಿಷ್ಟಕರವಾಗಿರುತ್ತದೆ. ಇದಕ್ಕೆ ಅನೂಪ್ ಪೂಜಾರಿ ಸಹಿತ ಹಲವು ಯೋಧರ ಕಥೆ ವ್ಯಥೆಯೇ ಸಾಕ್ಷಿ ಎಂದು ಜಯ ಕರ್ನಾಟಕ ಸಂಘಟನೆಯ ಉಡುಪಿ ಜಿಲ್ಲಾಧ್ಯಕ್ಷ ಸತೀಶ್ ಪೂಜಾರಿ ಸಾಲಿಗ್ರಾಮ ಹೇಳಿದರು.
ಅವರು ಬುಧವಾರ ಕೋಟದ ಪಂಚವರ್ಣ ಯುವಕ ಮಂಡಲ ಪ್ರವರ್ತಿತ ಸಂಸ್ಥೆ ಪಂಚವರ್ಣ ಮಹಿಳಾ ಮಂಡಲದ ವತಿಯಿಂದ ಕಳೆದವರ್ಷ ಅಮರರಾದ ಯೋಧ ಅನೂಪ್ ಪೂಜಾರಿ ಬೀಜಾಡಿ ಅವರ ಮೊದಲ ವರ್ಷದ ಪುಣ್ಯ ಸ್ಮರಣೆ ಕಾರ್ಯಕ್ರಮದಲ್ಲಿ ಗೌರವ ನಮನ ಸಲ್ಲಿಸಿ ಮಾತನಾಡಿದರು. ಸಮಾಜದ ಬಗ್ಗೆ ಸದಾ ತುಡಿತ ಹೊಂದಿದ ಪಂಚವರ್ಣ ಸಂಘಟನೆ ಯೋಧರ ಪುಣ್ಯ ಸ್ಮರಣೆಯನ್ನು ಮನದಲ್ಲಿ ಸದಾ ಕಾಯ್ದು ಅವರ ಕುರಿತು ಕಾರ್ಯಕ್ರಮ ಆಯೋಜಿಸುತ್ತಿರುವುದು ಶ್ಲಾಘನೀಯ ಕಾರ್ಯ ಎಂದರು.

ನಿವೃತ್ತ ಯೋಧರಾದ ಕೋಟ ರಾಮಚಂದ್ರ ಗಾಣಿಗ ಕೋಟೇಶ್ವರ ಅವರು ಅನೂಪ್ ಪೂಜಾರಿ ಅವರ ಭಾವಚಿತ್ರಕ್ಕೆ ಪುಷ್ಭನಮನ ಸಲ್ಲಿಸಿ ದೇಶದ ಗಡಿ ಕಾಯುವ ಹಾಗೂ ಅಲ್ಲಿನ ಸ್ಥಿತಿಗತಿ,ಅನೂಪ್ ಪೂಜಾರಿಯವರ ಕುರಿತು ಮಾಹಿತಿ ನೀಡಿದರು.
ಸಭೆಯಲ್ಲಿ ಪಂಚವರ್ಣ ಯುವಕ ಮಂಡಲದ ಅಧ್ಯಕ್ಷ ಮನೋಹರ್ ಪೂಜಾರಿ, ಸ್ಥಾಪಕಾಧ್ಯಕ್ಷ ಶೇವಧಿ ಸುರೇಶ್ ಗಾಣಿಗ, ಮಹಿಳಾ ಮಂಡಲದ ಉಪಾಧ್ಯಕ್ಷೆ ವಸಂತಿ ಹಂದಟ್ಟು ಮತ್ತಿತರರು ಉಪಸ್ಥಿತರಿದ್ದರು. ನಿಕಟಪೂರ್ವ ಅಧ್ಯಕ್ಷ ಅಜಿತ್ ಆಚಾರ್ ಸ್ವಾಗತಿಸಿ, ಮಹಿಳಾ ಮಂಡಲದ ಸಂಚಾಲಕಿ ಸುಜಾತ ಬಾಯರಿ ನಿರೂಪಿಸಿ, ವಂದಿಸಿದರು.










