ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ತಾಲೂಕಿನ ಕಲಾ ಸಾಂಸ್ಕೃತಿಕ ಸಂಸ್ಥೆಯಾದ ಸುರಭಿ ರಿ. ಬೈಂದೂರು ಇದರ ವಾರ್ಷಿಕ ಸುರಭಿ ಜೈಸಿರಿ ಹಾಗೂ ಬಿಂದುಶ್ರೀ ಪ್ರಶಸ್ತಿ ಪ್ರದಾನ ಸಮಾರಂಭ ಮತ್ತು ದಿ. ಹೊಸಾಡು ಸುಬ್ರಾಯ ಶೇರುಗಾರ್ ಸಂಸ್ಮರಣೆಯ ಸಾಂಸ್ಕೃತಿಕೋತ್ಸವವು ಫೆಬ್ರವರಿ 19 ರಿಂದ 22 ಫೆಬ್ರವರಿ 2026ರ ತನಕ ಪ್ರತಿದಿನ ಸಂಜೆ 6:00ಕ್ಕೆ ಇಲ್ಲಿನ ಶಾರದಾ ವೇದಿಕೆಯಲ್ಲಿ ಜರುಗಲಿದೆ.
ಫೆಬ್ರವರಿ 19ರ ಗುರುವಾರ ಸಂಜೆ ವಿವಿಧ ಗಣ್ಯರ ಉಪಸ್ಥಿತಿಯಲ್ಲಿ ಸುರಭಿ ಜೈಸಿರಿಗೆ ಚಾಲನೆ ದೊರೆಯಲಿದ್ದು, ನಾಲ್ಕು ದಿನಗಳ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾದ ಲಕ್ಷ್ಮೀ ಹೆಬ್ಬಾಳ್ಕರ್, ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ, ಶಾಸಕರಾದ ಗುರುರಾಜ ಗಂಟಿಹೊಳೆ, ಮಾಜಿ ಸಚಿವರುಗಳಾದ ಪ್ರಮೋದ್ ಮಧ್ವರಾಜ್, ಕೃಷ್ಣ ಪಾಲೇಮಾರ್, ರಮಾನಾಥ ರೈ, ಮಾಜಿ ಶಾಸಕರಾದ ಕೆ. ಗೋಪಾಲ ಪೂಜಾರಿ, ಹೃದ್ರೋಗ ತಜ್ಞ ಡಾ ಅವರು ಸೇರಿದಂತೆ ವಿವಿಧ ಕ್ಷೇತ್ರದ ಗಣ್ಯಮಾನ್ಯರು ಸಭೆಯಲ್ಲಿ ಉಪಸ್ಥಿತರಿರಲಿದ್ದಾರೆ.
ಫೆಬ್ರವರಿ 19ರ ಗುರುವಾರ ಸಭಾ ಕಾರ್ಯಕ್ರಮದಲ್ಲಿ ಸಾಧಕರಿಗೆ ಗೌರವಾರ್ಪಣೆ ನಡೆಯಲಿದೆ. ಆ ಬಳಿಕ ನಡೆಯಲಿರುವ ಯಕ್ಷ ಸಂಭ್ರಮದಲ್ಲಿ ಸುರಭಿಯ ಬಾಲ ಯಕ್ಷ ಕಲಾವಿದರಿಂದ ʼಕನಕಾಂಗಿ ಕಲ್ಯಾಣʼ ಯಕ್ಷಗಾನ ಹಾಗೂ ಸುರಭಿಯ ಯಕ್ಷ ಕಲಾವಿದರಿಂದ ’ಧರ್ಮಾಂಗದ ದಿಗ್ವಿಜಯʼಯಕ್ಷಗಾನ ಜರುಗಲಿದೆ.
ಫೆಬ್ರವರಿ 20ರ ಶುಕ್ರವಾರ ಬಿಂದುಶ್ರೀ ಪ್ರಶಸ್ತಿ ಪ್ರದಾನ ಸಮಾರಂಭದ ಸಂಭ್ರಮ. ಅಂದು ಗಣ್ಯರ ಉಸ್ಥಿತಿಯಲ್ಲಿ ಖ್ಯಾತ ರಂಗಭೂಮಿ ಮತ್ತು ಚಲನಚಿತ್ರ ನಟಿ ಉಮಾಶ್ರೀ ಅವರಿಗೆ ಬಿಂದುಶ್ರೀ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ.
ಬಳಿಕ ಸುರಭಿ ಭರತನಾಟ್ಯ ವಿದ್ಯಾರ್ಥಿಗಳಿಂದ “ಶ್ರೀ ಕೃಷ್ಣ ಲೀಲಾಮೃತಮ್” ಭರತನಾಟ್ಯ ಪ್ರದರ್ಶನ ನಡೆಯಲಿದೆ.
”ದಿ. ಹೊಸಾಡು ಸುಬ್ರಾಯ ಶೇರುಗಾರ್ ಸಂಸ್ಮರಣೆಯ ಸಾಂಸ್ಕೃತಿಕೋತ್ಸವ”ದ ಅಂಗವಾಗಿ ಫೆಬ್ರವರಿ 21 ಹಾಗೂ 22ರಂದು ವಿವಿಧ ಕಾರ್ಯಕ್ರಮಗಳು ಜರುಗಲಿದ್ದು, ನಾಡಿನ ವಿವಿಧ ಗಣ್ಯಮಾನ್ಯರು ಉಪಸ್ಥಿತಿಯಲ್ಲಿ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಪ್ರತಿಭಾನ್ವಿತರಿಗೆ ಗೌರವಾರ್ಪಣೆ ನಡೆಯಲಿದೆ.
ಫೆಬ್ರವರಿ 21ರ ಶನಿವಾರ ಸಾಂಸ್ಕೃತಿಕ ಕಾರ್ಯಕ್ರಮವಾಗಿ ಸುರಭಿಯ ನೃತ್ಯ ವಿದ್ಯಾರ್ಥಿಗಳಿಂದ “ಜಾನಪದ ನಾಟ್ಯ ವೈವಿಧ್ಯ”ಜರುಗಲಿದೆ. ಬಳಿಕ ಪ್ರಸಿದ್ಧ ಹಾಸ್ಯ ಕಲಾವಿದರಾದ ಪ್ರೋ. ಕೃಷ್ಣೇಗೌಡ ಮತ್ತು ತಂಡದವರಿಂದ ಹಾಸ್ಯೋತ್ಸವ ಕಾರ್ಯಕ್ರಮ ಜರುಗಲಿದೆ.
ಫೆಬ್ರವರಿ 22ರ ಭಾನುವಾರ ಸುರಭಿ ಸಂಗೀತ ವಿದ್ಯಾರ್ಥಿಗಳಿಂದ “ನಾದ ಗಾನಮೃತ”, ಸುರಭಿ ಕಲಾವಿದ್ಯಾರ್ಥಿಗಳಿಂದ “ಕುಂಚ ಸಂಭ್ರಮ” ಜರುಗಲಿದೆ. ಬಳಿಕ ಸನಾತನ ನಾಟ್ಯಾಲಯ ಮಂಗಳೂರು ಇವರಿಂದ “ಸನಾತನ ರಾಷ್ಟ್ರಾಂಜಲಿ”ನಾಟ್ಯ ವೈವಿಧ್ಯ ನಡೆಯಲಿದೆ.
ಈ ಎಲ್ಲಾ ಕಾರ್ಯಕ್ರಮಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಅಧ್ಯಕ್ಷರಾದ ಆನಂದ ಮದ್ದೋಡಿ, ಕಾರ್ಯದರ್ಶಿ ರಾಮಕೃಷ್ಣ ದೇವಾಡಿಗ, ಸಂಚಾಲಕರಾದ ಸುಧಾಕರ ಪಿ. ಬೈಂದೂರು ಕೋರಿಕೊಂಡಿದ್ದಾರೆ.
















