ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಬೆಂಗಳೂರಿನಲ್ಲಿ ನಡೆಯುತ್ತಿರುವ ರಾಜ್ಯ ವಿಧಾನ ಮಂಡಲದ ಬಜೆಟ್ ಅಧಿವೇಶನದಲ್ಲಿ ಬೈಂದೂರು ವಿಧಾನಸಭಾ ಕ್ಷೇತ್ರದ ಶಾಸಕ ಗುರುರಾಜ್ ಶೆಟ್ಟಿ ಗಂಟಿಹೊಳೆಯವರು ಪ್ರಸ್ತುತ ರಾಜ್ಯದಲ್ಲಿ ಎಪಿಎಲ್ ಪಡಿತರ ಚೀಟಿ ಕೋರಿ ಸಲ್ಲಿಕೆಯಾಗಿ ಅನುಮೋದನೆಗೆ ಬಾಕಿ ಇರುವ ಹಾಗೂ ಪ್ರಸ್ತುತ ಪಡಿತರ ಚೀಟಿ ಅರ್ಜಿ ಹಾಕಿದ ನಂತರ ಸಕಾಲದಲ್ಲಿ ಪಡಿತರ ಚೀಟಿ ದೊರಕದೇ ಇರುವ ಕಾರಣ ಅರ್ಜಿದಾರರು ವಿವಿಧ ಸರ್ಕಾರಿ ಸೌಲಭ್ಯಗಳಿಂದ ವಂಚಿತರಾಗುತ್ತಿರುವ ಬಗ್ಗೆ ಕೇಳಿರುವ ಚುಕ್ಕೆ ಗುರುತಿಲ್ಲದ ಪ್ರಶ್ನೆಗೆ ಕೇಳಿದ್ದರು.
ಇದಕ್ಕೆ ಪ್ರತಿಕ್ರಿಯಿಸಿದ ರಾಜ್ಯ ಆಹಾರ ನಾಗರೀಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಸಚಿವರಾದ ಕೆ. ಹೆಚ್ ಮುನಿಯಪ್ಪ ರವರು ಉತ್ತರಿಸಿ ರಾಜ್ಯದಲ್ಲಿ ದಿನಾಂಕ :22-02-2026 ರ ಅಂತ್ಯಕ್ಕೆ ಎಪಿಎಲ್ ಪಡಿತರ ಚೀಟಿ ಕೋರಿ 1,38,778 ಅರ್ಜಿಗಳು ಬಾಕಿ ಇರುವುದಾಗಿದೆ. ಹಾಗೂ ಸರ್ಕಾರದ ಆದೇಶ ಸಂಖ್ಯೆ ಆನಾಸ 211 ಡಿಆರ್ ಎ 2021 ದಿನಾಂಕ : 29-09-2023 ರಲ್ಲಿ ಎಪಿಎಲ್ ಪಡಿತರ ಚೀಟಿಗಳನ್ನು ಕೋರಿ ಸಲ್ಲಿಕೆಯಾಗಿರುವ ಅರ್ಜಿಗಳಿಗೆ ಅನುಮೋದನೆ ನೀಡುವುದನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ ಎಂದಿದ್ದಾರೆ.
ರಾಜ್ಯದಲ್ಲಿ ಪ್ರಸ್ತುತ ಸುಮಾರು 1.77 ಲಕ್ಷ ಬಿಪಿಎಲ್ ಪಡಿತರ ಅರ್ಜಿ ವಿಲೇವಾರಿಗೆ ಬಾಕಿ:
ರಾಜ್ಯದಲ್ಲಿ ಬಿಪಿಎಲ್ ಕಾರ್ಡ್ ಗಳ ವಿತರಣೆ ಬಗ್ಗೆ ಶಾಸಕರು ಕೇಳಿದ ಪೂರಕ ಪ್ರಶ್ನೆ ಗೆ ಉತ್ತರಿಸಿದ ಸಚಿವರು ರಾಜ್ಯದಲ್ಲಿ ದಿನಾಂಕ : 22-06-2026 ರ ಅಂತ್ಯಕ್ಕೆ ಬಿಪಿಎಲ್ ಪಡಿತರ ಚೀಟಿ ಕೋರಿ ಒಟ್ಟು 1,77,790 ಅರ್ಜಿಗಳು ಬಾಕಿ ಇದ್ದು ಅರ್ಜಿಗಳ ಕಾರ್ಯ ಪ್ರಗತಿಯಲ್ಲಿದೆ ಎಂದಿದ್ದಾರೆ.










