ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಇಲ್ಲಿನ ಅಶೋಕ್ ಕುಮಾರ್ ಮತ್ತು ಭರತನಾಟ್ಯ ಗುರುಗಳಾದ ವಿದುಷಿ ಪ್ರವಿತಾ ಅಶೋಕ್ ಅವರ ಪುತ್ರಿಯರಾದ ಪೂರ್ವಿಕಾ ಮತ್ತು ಗಾರ್ಗಿದೇವಿ ಇವರ ಭರತನಾಟ್ಯ ರಂಗಪ್ರವೇಶ ಕಾರ್ಯಕ್ರಮವು ಏಪ್ರಿಲ್ 18ರಂದು ಸಂಜೆ 4.00 ಗಂಟೆಗೆ ಉಡುಪಿಯ ಇನ್ಫೋಸಿಸ್ ಯಕ್ಷಗಾನ ಕಲಾರಂಗ ದಲ್ಲಿ ನಡೆಯಲಿದೆ.
ಮೂಡಬಿದ್ರಿ ಆಳ್ವಾಸ್ ಶಿಕ್ಷಣ ಫೌಂಡೇಶನ್ ನಿರ್ದೇಶಕರು ಡಾ. ಮೋಹನ ಆಳ್ವಾ, ನಾಟ್ಯನಿಕೇತನ, ಕೋಲ್ಯ ಸೋಮೇಶ್ವರದ ಕರ್ನಾಟಕ ಕಲಾತಿಲಕ ಗುರು ಉಳ್ಳಾಲ ಮೋಹನ ಕುಮಾರ್, ಚಿತ್ಕಲಾ ಸ್ಕೂಲ್ ಆಫ್ ನೃತ್ಯ, ಬೆಂಗಳೂರಿನ ಭರತನಾಟ್ಯ ಕಲಾವಿದ ಪ್ರವೀಣ ಕುಮಾರ್ ಭರತನಾಟ್ಯ ಕಲಾವಿದೆ, ವ್ಯಾಸ (ಡೀಮ್ಡ್ ವಿಶ್ವವಿದ್ಯಾನಿಲಯ) ಇಲ್ಲಿನ ಯೋಗ ಮತ್ತು ಮಾನವೀಯ ಅಧ್ಯಯನ ಬೆಂಗಳೂರು ಇಲ್ಲಿನ ಡೀನ್ ಡಾ. ಕರುಣಾ ವಿಜಯೇಂದ್ರ, ಕರ್ನಾಟಕ ಕಲಾಶ್ರೀ ವಿದ್ಯಾನ್ ಕೆ. ಚಂದ್ರಶೇಖರ ನಾವಡ ನಿರ್ದೇಶಕರು, ಶ್ರೀ ನಾಟ್ಯಾಂಜಲಿ ಕಲಾ ಅಕಾಡೆಮಿ ಸುರತ್ಕಲ್ ಇವರುಗಳು ರಂಗಪ್ರವೇಶ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

ನೃತ್ಯ ಗುರು ವಿದುಷಿ ಪ್ರವಿತಾ ಅಶೋಕ್ ಅವರ ಪರಿಚಯ:
ನೃತ್ಯ ಗುರು ವಿದುಷಿ ಪ್ರವಿತಾ ಅಶೋಕ್ ಅವರು ಭರತನಾಟ್ಯ ಕಲಾವಿದೆ ಮತ್ತು ನೃತ್ಯ ನಿರ್ದೇಶಕಿ. ಕುಂದಾಪುರದಲ್ಲಿ ನೃತ್ಯ ವಸಂತ ನಾಟ್ಯಾಲಯ ರಿ. ಎಂಬ ಭರತನಾಟ್ಯ ಶಾಲೆಯನ್ನು ಆರಂಭಿಸಿ, ಭರತನಾಟ್ಯ ಗುರು ಪರಂಪರೆಯನ್ನು ಮುಂದುವರಿಸಿಕೊಂಡು ಬಂದಿದ್ದಾರೆ. ಅವರು ವಿದುಷಿ ಶೃದ್ಧಾ ನಾರಾಯಣ ಭಟ್, ವಿದುಷಿ ವಾಣಿ ರಾಜಗೋಪಾಲ್ ತಮ್ಮ ಭರತನಾಟ್ಯ ಕಲೆಯನ್ನು ಕಲಿತು ಪರಿಣಿತಿ ಪಡೆದು ಈಗಾಗಲೇ ನೂರಾರು ಪ್ರತಿಭಾವಂತ ವಿದ್ಯಾರ್ಥಿಗಳನ್ನು ಹೊಂದಿದ್ದಾರೆ. ಅವರ ಗರಡಿಯಲ್ಲಿ ಹಲವಾರು ವಿದ್ಯಾರ್ಥಿಗಳು ಭರತನಾಟ್ಯ ಕಲಾವಿದೆಯರಾಗಿ ರೂಪುಗೊಂಡು ರಾಷ್ಟ್ರ ಮತ್ತು ರಾಜ್ಯ ಮಟ್ಟದ ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ. ಪ್ರವಿತಾ ಅಶೋಕ್ ಅವರ ಕಲೆಯನ್ನು ಗುರುತಿಸಿ 2014-15ರಲ್ಲಿ ಭರತನಾಟ್ಯದ ಪ್ರತಿಷ್ಠಿತ ಆರ್ಯಭಟ ಅಂತರಾಷ್ಟ್ರೀಯ ಪ್ರಶಸ್ತಿ ಲಭಿಸಿದೆ. 2017-18ರಲ್ಲಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ಅರಸಿ ಬಂದಿದೆ.
ಅವರ ನೃತ್ಯ ವಸಂತ ನಾಟ್ಯಾಲಯ ರಿ. ಭರತನಾಟ್ಯ ಶಾಲೆಯ ಮೂಲಕ ಕಲಿತ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿವಿಧ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಪ್ರದರ್ಶನ ನೀಡುವ ಅವಕಾಶ ದೊರೆತಿದೆ. ಕೃಷ್ಣ ಗಾನ ಸಭಾ ಚೆನೈ, ಇಳಮಲೈಯಿಲ್ ತಿರಮೈ ನೃತ್ಯ ಸಿರೀಸ್, ಅಯೋಧ್ಯಾ ಶ್ರೀರಾಮ ಮಂದಿರ, ಆಳ್ವಾಸ್ ವಿರಾಸತ್. ನಾಟ್ಯಾಂಜಲಿ ಪೇರೂರು, ಆರ್ಟ್ ಆಫ್ ಲಿವಿಂಗ್ ಇದರ 50ನೇ ವರ್ಷಾಚರಣೆ ಮುಂತಾದ ಕಡೆ ಇವರ ನಿರ್ದೇಶನದಲ್ಲಿ ವಿದ್ಯಾರ್ಥಿಗಳು ಪ್ರದರ್ಶನ ನೀಡಿದ್ದಾರೆ. ಇದು ಅವರ ಭರತನಾಟ್ಯದ ಮೇಲಿನ ಶೃದ್ಧೆಗೆ ಸಾಕ್ಷಿಯಾಗಿದೆ. ಪ್ರವಿತಾ ಅಶೋಕ್ ಅವರ ವಿದ್ಯಾರ್ಥಿಗಳು ಮತ್ತು ಮಕ್ಕಳಾದ ಪೂರ್ವಿಕ ಪ್ರಸ್ತುತ ಭರತನಾಟ್ಯದ ರಂಗಪ್ರವೇಶಕ್ಕೆ ಸಜ್ಜಾಗಿದ್ದಾರೆ.
ಕಲಾವಿದೆಯರ ಪರಿಚಯ:
ಭರತನಾಟ್ಯ ಕಲಾವಿದೆ ಪೂರ್ವಿಕ: ಅವರು ಅಶೋಕ್ ಕುಮಾರ್ ಮತ್ತು ಭರತನಾಟ್ಯ ಗುರುಗಳಾದ ವಿದುಷಿ ಪ್ರವಿತಾ ಅಶೋಕ್ರ ಮೊದಲ ಪುತ್ರಿ. ಇವರು ಅವರ ತಾಯಿ ಮತ್ತು ಗುರು ವಿದುಷಿ ಪ್ರವಿತಾ ಅಶೋಕ್ರ ಗರಡಿಯಲ್ಲಿ ಸುಮಾರು 10 ವರ್ಷಕ್ಕಿಂತ ಹೆಚ್ಚು ಕಾಲ ನಾಟ್ಯ ಸರಸ್ವತಿಯನ್ನು ಅಭ್ಯಸಿಸಿ ಭರತನಾಟ್ಯದಲ್ಲಿ ಪಳಗಿದ್ದಾರೆ. ಭರತನಾಟ್ಯ ಸೀನಿಯರ್ ಪರೀಕ್ಷೆ ಉತ್ತೀರ್ಣರಾಗಿ ಜೊತೆಯಲ್ಲಿ ಕರ್ನಾಟಿಕ್ ಸಂಗೀತವನ್ನು ವಿದ್ವಾನ್ ಉಷಾ ರಾಮಕೃಷ್ಣ ಭಟ್ ಅವರಲ್ಲಿ ಅಭ್ಯಸಿಸಿದ್ದು ಪ್ರಸ್ತುತ ವಿದ್ವತ್ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದಾರೆ.
ಅವರಿಗೆ ನೃತ್ಯಭೂಷಣ ಪ್ರಶಸ್ತಿ, ಕೇಂದ್ರ ಸರಕಾರದ ಸಾಂಸ್ಕೃತಿಕ ಸಂಪನ್ಮೂಲ ಮತ್ತು ತರಬೇತಿ ಕೇಂದ್ರದ ವಿದ್ಯಾರ್ಥಿವೇತನ, ಶ್ರೀ ಪಲ್ಲಡ್ಕ ಕೇಶವ ಭಟ್ ಸ್ಮಾರಕ ಟ್ರಸ್ಟ್ ನಿಂದ ಪ್ರಮಾ ಪ್ರಶಸ್ತಿ, ಬಾಲನೃತ್ಯ ಪ್ರತಿಭೆ ಪ್ರಶಸ್ತಿಗಳು ದೊರೆತಿವೆ. ಅಲ್ಲದೇ ವಿವಿಧ ಅಂತರಾಷ್ಟ್ರೀಯ, , ರಾಷ್ಟ್ರೀಯ ಮತ್ತು ರಾಜ್ಯ ಭರತನಾಟ್ಯ ಸ್ಪರ್ಧೆಗಳಲ್ಲಿ ಬಹುಮಾನಗಳು ದೊರೆತಿದೆ. ಅಲ್ಲದೇ ರಾಷ್ಟ್ರ ಮತ್ತು ರಾಜ್ಯ ಮಟ್ಟದಲ್ಲಿ ಏಕವ್ಯಕ್ತಿ ಪ್ರದರ್ಶನ ನೀಡಿದ್ದಾರೆ. ಪ್ರಸ್ತುತ ಶ್ರೀ ಮಧ್ವರಾಜ ಇನಸ್ಟಿಟ್ಯೂಟ್ ಆಫ್ ಎಂಜನೀಯರಿಂಗ್ ನಲ್ಲಿ ಕಂಪ್ಯೂಟರ್ ಸೈನ್ಸ್ ವಿಭಾಗದಲ್ಲಿ ದ್ವಿತೀಯ ವರ್ಷದಲ್ಲಿ ಪದವಿ ಅಭ್ಯಸಿಸುತ್ತಿದ್ದಾರೆ.
ಭರತನಾಟ್ಯ ಕಲಾವಿದೆ ಗಾರ್ಗಿದೇವಿ: ಅವರು ಅಶೋಕ್ ಕುಮಾರ್ ಮತ್ತು ಭರತನಾಟ್ಯ ಗುರುಗಳಾದ ವಿದುಷಿ ಪ್ರವಿತಾ ಅಶೋಕ್ರ ದ್ವಿತೀಯ ಪುತ್ರಿ. ಇವರು ಅವರ ತಾಯಿ ಮತ್ತು ಗುರು ವಿದುಷಿ ಪ್ರವಿತಾ ಅಶೋಕ್ರ ಗರಡಿಯಲ್ಲಿ ತನ್ನ 6ನೇ ವರ್ಷದಿಂದ ಇವರೆಗೂ ಭರತನಾಟ್ಯದಲ್ಲಿ ಪಳಗಿದ್ದಾರೆ. ಕರ್ನಾಟಿಕ್ ಸಂಗೀತವನ್ನು ವಿದ್ವಾನ್ ಉಷಾ ರಾಮಕೃಷ್ಣ ಭಟ್ ಅವರಲ್ಲಿ ಅಭ್ಯಸಿಸಿದ್ದು ವಿದ್ವತ್ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದಾರೆ. ಪ್ರಸ್ತುತ ಕುಂದಾಪುರದ ಆರ್ ಎನ್.ಶೆಟ್ಟಿ ಕಾಲೇಜಿನಲ್ಲಿ ದ್ವಿತೀಯ ವರ್ಷದಲ್ಲಿ ಅಭ್ಯಸಿಸಿತ್ತಿದ್ದಾರೆ.
ಅವರ ನೃತ್ಯ ಪ್ರತಿಭೆಗೆ ಸಾಕಷ್ಟು ಪ್ರಶಸ್ತಿಗಳು ಅರಸಿ ಬಂದಿವೆ. ಮೈಸೂರಿನ ಶ್ರೀದುರ್ಗಾ ನೃತ್ಯ ಅಕಾಡೆಮಿಯಿಂದ ನಾಟ್ಯ ಮಯೂರಿ, ಉಡುಪಿಯ ಹೆಜ್ಜೆಗೆಜ್ಜೆ ಅಕಾಡೆಮಿಯಿಂದ ನೃತ್ಯ ಪಲ್ಲವ, ಸರಕಾರದ ಸಾಂಸ್ಕೃತಿಕ ಸಂಪನ್ಮೂಲ ಮತ್ತು ತರಬೇತಿ ಕೇಂದ್ರದ ವಿದ್ಯಾರ್ಥಿವೇತನ, ಶ್ರೀ ಪಲ್ಲಡ್ಕ ಕೇಶವ ಭಟ್ ಸ್ಮಾರಕ ಟ್ರಸ್ಟ್ ನಿಂದ ಪ್ರಮಾ ಪ್ರಶಸ್ತಿ, ಬೆಂಗಳೂರಿನ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ರಾಜ್ಯ ಮಟ್ಟದ ನೃತ್ಯ ಸ್ಪರ್ಧೆಯಲ್ಲಿ ಕಲಾಶ್ರೀ ಪ್ರಶಸ್ತಿಗಳು ಲಭಿಸಿವೆ. ಅಲ್ಲದೇ ವಿವಿಧ ಅಂತರಾಷ್ಟ್ರೀಯ, ರಾಷ್ಟ್ರೀಯ ಮತ್ತು ರಾಜ್ಯ ಭರತನಾಟ್ಯ ಸ್ಪರ್ಧೆಗಳಲ್ಲಿ ಬಹುಮಾನಗಳು ದೊರೆತಿದೆ. ಅಲ್ಲದೇ ರಾಷ್ಟ್ರ ಮತ್ತು ರಾಜ್ಯ ಮಟ್ಟದಲ್ಲಿ ಏಕವ್ಯಕ್ತಿ ಪ್ರದರ್ಶನ ನೀಡಿದ್ದಾರೆ. ಬಹುಮುಖ ಪ್ರತಿಭೆಯಾಗಿರುವ ಇವರು ಪರೀಕ್ಷಾ ಪೇ ಚರ್ಚಾ ಕಾರ್ಯಕ್ರಮ, ಗಣರಾಜ್ಯೋತ್ಸವ ಪಥಸಂಚಲನದಲ್ಲಿ ಭಾಗವಹಿಸಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರಿಂದ ಭೇಷ್ ಎನಿಸಿಕೊಂಡಿದ್ದಾರೆ.
ಇದೀಗ ಇವರಿಬ್ಬರ ಭರತನಾಟ್ಯದ ಅತ್ಯನ್ನತವಾದ ರಂಗಪ್ರವೇಶ ಕಾರ್ಯಕ್ರಮವು ವಿದುಷಿ ಪ್ರವಿತಾ ಅಶೋಕ್ ಅವರ ನಿರ್ದೇಶನದಲ್ಲಿ ಏಪ್ರಿಲ್ 18ರಂದು ಉಡುಪಿಯ ಇನ್ಫೋಸಿಸ್ ಯಕ್ಷಗಾನ ಕಲಾರಂಗ ದಲ್ಲಿ ನಡೆಯಲಿದೆ. ಹಾಡುಗಾರಿಕೆಯಲ್ಲಿ ಚೆನೈನ ಶ್ರೀ ಶ್ರೀಕಾಂತ ಗೋಪಾಲ್ಕೃಷ್ಣನ್ ಮೃದಂಗದಲ್ಲಿ ವಿದ್ವಾನ್ ಹರ್ಷ ಸಾಮಗ, ಬೆಂಗಳೂರು, ಕೊಳಲಿನಲ್ಲಿ ವಿದ್ವಾನ್ ಶ್ರೀ ನಿತೀಶ್ ಅಮ್ಮಣ್ಣಾಯ, ಬೆಂಗಳೂರು ಮತ್ತು ವೀಣೆಯಲ್ಲಿ ವಿದ್ವಾನ್ ಪ್ರಶಾಂತ್ ರುದ್ರಪ್ಪ ಸಹಕರಿಸಲಿದ್ದಾರೆ ಎಂದು ಅಶೋಕ್ ಕುಮಾರ್ ಮತ್ತು ಭರತನಾಟ್ಯ ಗುರುಗಳಾದ ವಿದುಷಿ ಪ್ರವಿತಾ ಅಶೋಕ್ ಅವರು ತಿಳಿಸಿದ್ದಾರೆ.
















