ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ರಾಜ್ಯದ ಇಪ್ಪತ್ತು ಕ್ಷೇತ್ರಗಳಲ್ಲಿನ 25 ವಿಧಾನ ಪರಿಷತ್ ಸ್ಥಾನಗಳಿಗೆ ನಡೆದ ಚುನಾವಣೆಯ ಫಲಿತಾಂಶ ಬಹುಪಾಲು ಹೊರಬಿದ್ದಿದ್ದು ದಕ್ಷಿಣ ಕನ್ನಡ-ಉಡುಪಿ ಕ್ಷೇತ್ರದಲ್ಲಿ ಬಿಜೆಪಿಯ ಕೋಟ ಶ್ರೀನಿವಾಸ ಪೂಜಾರಿ ಹಾಗೂ ಕಾಂಗ್ರೆಸ್ ಪಕ್ಷದ ಪ್ರತಾಪಚಂದ್ರ ಶೆಟ್ಟಿ ಜಯಗಳಿಸಿದ್ದಾರೆ. ಕಾಂಗ್ರೆಸ್ ಬಂಡಾಯ ಅಭ್ಯರ್ಥಿಯಾಗಿ ಸ್ವರ್ಧಿಸಿದ್ದ ಜಯಪ್ರಕಾಶ್ ಹೆಗ್ಡೆ ಪರಾಭವಗೊಂಡು ತೀವ್ರ ಮುಖಭಂಗ ಅನುಭವಿಸಿದ್ದಾರೆ.
ವಿಧಾನ ಪರಿಷತ್ ಚುನಾವಣೆಯಲ್ಲಿ ಒಟ್ಟು 8 ಮಂದಿ ಸ್ವರ್ಧಿಸಿದ್ದರು. ಚಲಾವಣೆಯಾದ ಒಟ್ಟು 6354 ಮತಗಳ 231 ಮತಗಳು ಅಸಿಂಧುವಾಗಿದ್ದರೇ, 2 ನೋಟಾ ಬಿದ್ದಿದೆ. ಸಿಂಧುವಾದ 6301 ಮತಗಳ ಪೈಕಿ ಕೋಟ ಶ್ರೀನಿವಾಸ ಪೂಜಾರಿ 2977 ಮತಗಳನ್ನು ಪಡೆದ್ದು ಜಯಭೇರಿ ಗಳಿಸಿದ್ದರೇ, ಪ್ರತಾಪಚಂದ್ರ ಶೆಟ್ಟಿ 2237 ಮತಗಳನ್ನು ಪಡೆದು ವಿಜಯದ ನಗೆ ಬೀರಿದ್ದಾರೆ. ಉಳಿದಂತೆ ಕಾಂಗ್ರೆಸ್ ಭಂಡಾಯ ಅಭ್ಯರ್ಥಿ ಜಯಪ್ರಕಾಶ್ ಹೆಗ್ಡೆಯವರಿಗೆ 872 ಮತಗಳು, ಹರಿಕೃಷ್ಣ ಬಂಟ್ವಾಳ್ ಗೆ 127 ಮತಗಳು ದೊರೆತಿದ್ದರೇ, ಉಳಿದವರಿಗೆ ಒಟ್ಟು 88 ಮತಗಳು ದೊರೆತಿವೆ. (ಕುಂದಾಪ್ರ ಡಾಟ್ ಕಾಂ)
ದಕ್ಷಿಣ ಕನ್ನಡ ಕ್ಷೇತ್ರದಲ್ಲಿ ಬಿಜೆಪಿ ಮತಗಳು ಬಿಜೆಪಿಗೆ ಬಿದ್ದರೇ ಅನಾಯಾಸವಾಗಿ ಕೋಟ ಶ್ರೀನಿವಾಸ ಪೂಜಾರಿ ಅವರು ಗೆಲ್ಲಬಹುದು ಎನ್ನಲಾಗಿತ್ತು. ನಿರೀಕ್ಷೆಯಂತೆ ಮತಗಳು ಲಭಿಸಿದ್ದು ಸುಲಭವಾಗಿ ಗೆಲುವಿನ ನಗೆ ಬೀರಿದ್ದಾರೆ. ಇನ್ನು ಕಾಂಗ್ರೆಸ್ ಪಕ್ಷದಲ್ಲಿ ಬಂಡಾಯದ ಬಿಸಿ ಕಾಣಿಸಿಕೊಂಡಿದ್ದರಿಂದ ಪ್ರತಾಪಚಂದ್ರ ಶೆಟ್ಟಿ ಅವರ ಗೆಲುವು ನಾಯಕರುಗಳಿಗೆ ಪ್ರತಿಷ್ಠೆಯಾಗಿ ಪರಿಣಮಿಸಿತ್ತು. ಈ ಚುನಾವಣೆ ಬಂಡಾಯ ಅಭ್ಯರ್ಥಿಗಳು ಹಾಗೂ ಅವಳಿ ಜಿಲ್ಲೆಗಳ ಶಾಸಕರು, ಮಂತ್ರಿಗಳ ನಡುವಿನ ಹೋರಾಟ ಎಂದು ಬಿಂಬಿಸಲಾಗುತ್ತು. ಕೊನೆಗೂ ಪ್ರತಾಪಚಂದ್ರ ಶೆಟ್ಟಿ ಅವರು ಗೆಲ್ಲುವ ಮೂಲಕ ಕಾಂಗ್ರೆಸ್ ತನ್ನ ಸ್ಥಾನ ಉಳಿಸಿಕೊಂಡಿದೆ. ಒಟ್ಟಿನಲ್ಲಿ ಪ್ರತಾಪಚಂದ್ರ ಶೆಟ್ಟಿ ಹಾಗೂ ಕೋಟ ಶ್ರೀನಿವಾಸ ಪೂಜಾರಿ ಅವರು ಮತ್ತೆ ಮೇಲ್ಮನೆ ಪ್ರವೇಶಿಸಿದಂತಾಗಿದೆ. (ಕುಂದಾಪ್ರ ಡಾಟ್ ಕಾಂ)
ರಾಜ್ಯದಲ್ಲಿ ವಿಧಾನ ಪರಿಷತ್ ಚುನಾವಣೆ ಫಲಿತಾಂಶಕ್ಕೆ ರಾಜಕೀಯವಾಗಿ ಅಷ್ಟೇನೂ ಪ್ರಾಮುಖ್ಯ ಇಲ್ಲದಿದ್ದರೂ 75 ಸದಸ್ಯ ಬಲದ ಮೇಲ್ಮನೆಯಲ್ಲಿ ತಮ್ಮ ಸ್ಥಾನದ ಬಲವನ್ನು ಹೆಚ್ಚಿಸಿಕೊಳ್ಳುವ ಅವಕಾಶ ಮೂರು ಪಕ್ಷಗಳಿಗೂ ಈ ಚುನಾವಣೆ ಮೂಲಕ ಲಭ್ಯವಾಗಿತ್ತು. ಒಂದು ವೇಳೆ ಕಾಂಗ್ರೆಸ್ ಉತ್ತಮ ಸಾಧನೆ ತೋರಿದರೆ ಮುಂದಿನ ಜೂನ್-ಜುಲೈ ವೇಳೆಗೆ ಹಿರಿಯರ ಮನೆಯಲ್ಲಿ ಹಿಡಿತ ಸಾಧಿಸಿ ಕೆಳಮನೆಯಲ್ಲಿ ಒಪ್ಪಿಗೆ ಪಡೆದ ಮಸೂದೆಗಳು ಮೇಲ್ಮನೆಯಲ್ಲಿ ಪಾಸ್ ಆಗುವಂತೆ ಮಾಡಿ ಮುಜುಗರದಿಂದ ತಪ್ಪಿಸಿಕೊಳ್ಳುವ ನಿರೀಕ್ಷೆಯಲ್ಲಿದೆ. ಬಿಜೆಪಿಗೆ ತನ್ನ ಸ್ಥಾನವನ್ನು ಬಲಪಡಿಸಿಕೊಳ್ಳುವ ನಿರೀಕ್ಷೆಯಲ್ಲಿದೆ. ಜೆಡಿಎಸ್ ಗೆ ಅಳಿವು ಉಳಿವಿನ ಪ್ರಶ್ನೆ.