ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಬೆಂಗಳೂರು ನಗರದ ಪ್ರತಿಷ್ಠಿತ ಕಂಠೀರವ ಸ್ಟೇಡಿಯಂನಲ್ಲಿ ನಡೆದ ರಾಜ್ಯಮಟ್ಟದ ಕ್ರೀಡಾ ಮತ್ತು ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಜಾನಪದ ನೃತ್ಯ ವಿಭಾಗದಲ್ಲಿ ಉಡುಪಿ ಜಿಲ್ಲಾ ತಂಡವನ್ನು ಪ್ರತಿನಿಧಿಸಿದ ಜಿಲ್ಲೆಯ ಚಿತ್ತೂರು ಪಿ.ಎಂ ಶ್ರೀ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕರಾದ ಗುರುಪ್ರಸಾದ್ ಅವರು, ಅದ್ಭುತ ಪ್ರದರ್ಶನದ ಮೂಲಕ ಪ್ರಥಮ ಸ್ಥಾನ ಪಡೆದು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿರುವುದು ಜಿಲ್ಲೆಯ ಪಾಲಿಗೆ ಅಪಾರ ಹೆಮ್ಮೆಯ ವಿಷಯವಾಗಿದೆ.
ಜಾನಪದ ಕಲೆಯ ವೈಭವವನ್ನು ಮನೋಜ್ಞವಾಗಿ ಮೂಡಿಸಿ, ತಮ್ಮ ಪ್ರತಿಭೆ, ಪರಿಶ್ರಮ ಹಾಗೂ ಕಲಾಪ್ರೇಮದಿಂದ ರಾಜ್ಯದ ಗಮನ ಸೆಳೆದಿರುವುದು ನಿಜಕ್ಕೂ ಶ್ಲಾಘನೀಯ.
ಇದೇ ವೇಳೆ ಕಿರು ನಾಟಕ ಸ್ಪರ್ಧೆಯಲ್ಲಿಯೂ ಉಡುಪಿ ಜಿಲ್ಲಾ ತಂಡವನ್ನು ಪ್ರತಿನಿಧಿಸಿ, ದ್ವಿತೀಯ ಸ್ಥಾನ ಗಳಿಸಿರುವುದು ಅವರ ಕಲಾತ್ಮಕ ನೈಪುಣ್ಯ ಹಾಗೂ ಸಾಂಸ್ಕೃತಿಕ ಬದ್ಧತೆಯ ಮತ್ತೊಂದು ಮೆರುಗು. ಶಿಕ್ಷಕರಾಗಿ ವಿದ್ಯಾರ್ಥಿಗಳಲ್ಲಿ ಶಿಸ್ತು, ಮೌಲ್ಯ ಹಾಗೂ ಸೃಜನಶೀಲತೆಯನ್ನು ಬೆಳೆಸುವ ಜೊತೆಗೆ, ವೇದಿಕೆಯ ಮೇಲೂ ಸಾಧನೆಯ ಶಿಖರ ಏರಿರುವುದು ಶಿಕ್ಷಣ ಕ್ಷೇತ್ರಕ್ಕೆ ಗೌರವ ತಂದುಕೊಟ್ಟಿದೆ.
ಗುರುಪ್ರಸಾದ್ ಅವರ ಈ ಸಾಧನೆ ಕೇವಲ ವೈಯಕ್ತಿಕ ಗೆಲುವಲ್ಲ; ಅದು ಶಾಲೆಯ ಗೌರವ, ಜಿಲ್ಲೆಯ ಕೀರ್ತಿ ಹಾಗೂ ಶಿಕ್ಷಕ ಸಮುದಾಯದ ಸಾರ್ಥಕತೆಯ ಪ್ರತಿಬಿಂಬವಾಗಿದೆ. ಇಂತಹ ಸಾಧಕರು ಸಮಾಜದಲ್ಲಿ ಹೆಚ್ಚಾದಷ್ಟೂ ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ, ಕಲೆಗಳ ಬಗ್ಗೆ ಆಸಕ್ತಿ ಹಾಗೂ ದೇಶೀಯ ಸಂಸ್ಕೃತಿಯ ಮೇಲಿನ ಅಭಿಮಾನ ಹೆಚ್ಚುತ್ತದೆ.
ರಾಜ್ಯಮಟ್ಟದಲ್ಲಿ ಮಿಂಚಿ ರಾಷ್ಟ್ರಮಟ್ಟದ ವೇದಿಕೆಗೆ ಆಯ್ಕೆಯಾಗಿರುವ ಗುರುಪ್ರಸಾದ್ ಅವರಿಗೆ ಹೃತ್ಪೂರ್ವಕ ಅಭಿನಂದನೆಳನ್ನು ಸಲ್ಲಿಸಿದ್ದಾರೆ. ರಾಷ್ಟ್ರಮಟ್ಟದಲ್ಲಿಯೂ ಅವರು ಇನ್ನಷ್ಟು ಯಶಸ್ಸು ಸಾಧಿಸಿ ರಾಜ್ಯದ ಹಾಗೂ ಜಿಲ್ಲೆಯ ಕೀರ್ತಿಯನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯಲಿ ಎಂಬುದು ಸಮಸ್ತ ಜನರ ಹಾರೈಕೆ.
















