ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೋಟ: ಪೌರಾಣಿಕ ಪ್ರಜ್ಞೆ – ವೈಚಾರಿಕ ಧೋರಣೆ – ವ್ಯವಸ್ಥಿತ ನಿರೂಪಣೆ – ಪರಿಸರ ಜಾಗೃತಿಗಳ ಸಮಷ್ಟಿ ಚಿಂತನೆಯ ಫಲವಾಗಿ ಮೂಡಿ ಬಂದ ಅಪೂರ್ವ ಕೃತಿ ’ಆದರ್ಶ ಮಾನವʼ. ಕೃಷ್ಣನನ್ನು ಈ ರೀತಿ ಕಂಡವರು ಕೌನ್ಜೂರು ಚಂದ್ರಶೇಖರ ಅಡಿಗರು ಎಂದೆನ್ನುತ್ತಾ ಉಡುಪಿ ಪೂರ್ಣಪ್ರಜ್ಞ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಡಾ. ಎ.ಪಿ. ಭಟ್ಟರು ಕೌನ್ಜೂರು ಚಂದ್ರಶೇಖರ ಅಡಿಗರ ಕೃತಿ ಲೋಕಾರ್ಪಣೆಗೈದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

ಇತ್ತೀಚಿಗೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಕೋಟದ ಮಿತ್ರ ಮಂಡಳಿ ಕೃತಿ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ’ಕಥೆ ಹೇಳುವುದಕ್ಕಿಂತ ಲೇಖಕರದ್ದು ಧಾರ್ಮಿಕ ದತ್ತ ಚಿತ್ತ’ದ ಬಗೆಗೆ ಸುಮನ ಆರ್. ಹೇರಳೆ, ಜಾಣ್ಮೆ’ಯ ಕುರಿತು ಡಾ. ಸರಿತಾ ಸಾಲಿಗ್ರಾಮ, ’ಕೃಷ್ಣನ ಆದರ್ಶ ಮಾನವತ್ವ’ದ ಬಗೆಗೆ ಮಹಾಲಕ್ಷ್ಮಿ ಸೋಮಯಾಜಿ ಅವರು ಮಾತನಾಡಿ, ಕೃತಿಯನ್ನು ಪರಿಚಯಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ನೀಲಾವರ ಸುರೇಂದ್ರ ಅಡಿಗ ವಹಿಸಿ ಸ್ವಾಗತಿಸಿ, ಕ.ಸಾ.ಪ. ಸಂಸ್ಥಾಪಕ ನಾಲ್ವಡಿ ಕೃಷ್ಣರಾಜ ಒಡೆಯರ ಅದ್ಭುತ ಕಾರ್ಯಕ್ಷಮತೆಯನ್ನು ಕೊಂಡಾಡಿದರು. ನೆರೆದಿದ್ದ ಸಾಹಿತ್ಯಾಸಕ್ತರ ಕೆಲವು ಸಂದೇಹಗಳಿಗೆ ಲೇಖಕರು ತಮ್ಮ ಮಾತಿನಲ್ಲಿ ಸಮಂಜಸ ಉತ್ತರ ನೀಡಿ ತನ್ನ ಹೊಸ ಚಿಂತನೆಗೆ ಕಾರಣಗಳನ್ನು ವಿವರಿಸಿದ್ದರು.
ಮಿತ್ರ ಮಂಡಳಿಯ ಉಪೇಂದ್ರ ಸೋಮಯಾಜಿ ನಿರೂಪಿಸಿದ ಕಾರ್ಯಕ್ರಮದಲ್ಲಿ ಮಣೂರಿನ ಮೂಕಾಂಬಿಕಾ ಮಯ್ಯರಿಂದ ಪ್ರಾರ್ಥನೆ, ಪಾರಂಪಳ್ಳಿ ಮಂಜುನಾಥ ಉಪಾಧ್ಯಾಯರಿಂದ ವಂದನಾರ್ಪಣೆ ನಡೆದವು.

















