ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಇಲ್ಲಿನ ಹಟ್ಟಿಯಂಗಡಿ ಶ್ರೀ ಸಿದ್ಧಿವಿನಾಯಕ ವಸತಿ ಶಾಲೆಯಲ್ಲಿ 2026-27ನೇ ಶೈಕ್ಷಣಿಕ ವರ್ಷದ ಪ್ರಾಥಮಿಕ ಹಾಗೂ ಪೂರ್ವಪ್ರಾಥಮಿಕ ವಿಭಾಗದ ವಿದ್ಯಾರ್ಥಿಗಳ ಪಾಲಕ/ಪೋಷಕರಿಗಾಗಿ ಓರಿಯೆಂಟೇಶನ್ ಪ್ರೋಗ್ರಾಂ ಅನ್ನು ಆಯೋಜಿಸಲಾಯಿತು.
ಕಾರ್ಯಕ್ರಮದಲ್ಲಿ ಶಾಲೆಯ ಶೈಕ್ಷಣಿಕ ಸಾಧನೆಗಳು, ಐಸಿಎಸ್ಇ ಪಠ್ಯಕ್ರಮದ ವೈಶಿಷ್ಟ್ಯಗಳು, ಮೌಲ್ಯಮಾಪನ ಮತ್ತು ಪರೀಕ್ಷಾ ಪದ್ಧತಿ, ವಿದ್ಯಾರ್ಥಿಗಳ ಅಭ್ಯಾಸ ಕ್ರಮ, ಶಿಸ್ತು ಮತ್ತು ವರ್ತನೆ, ಸಮವಸ್ತ್ರ, ಸಮತೋಲಿತ ಆಹಾರ ಪದ್ಧತಿ, ಶಾಲೆಯಲ್ಲಿ ಒದಗಿಸಲಾಗುವ ಇತರ ಸೌಲಭ್ಯಗಳು, ಶಾಲಾ ಡೈರಿಯ ಅಗತ್ಯತೆ ಮತ್ತು ಅನುಕೂಲತೆಯ ಕುರಿತು ಶಿಕ್ಷಕಿಯರಾದ ರೂಪಾ ಜೆ, ಸ್ವಾತಿ, ದೀಪಾ ಹಾಗೂ ರೇಷ್ಮಾ ಅವರು ಸವಿಸ್ತಾರವಾಗಿ ಮಾಹಿತಿಯನ್ನು ಪಾಲಕರೊಂದಿಗೆ ಹಂಚಿಕೊಂಡರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಶ್ರೀ ಸಿದ್ಧಿ ಶೈಕ್ಷಣಿಕ ಪ್ರತಿಷ್ಠಾನದ ಕಾರ್ಯದರ್ಶಿಗಳು ಹಾಗೂ ಶಾಲೆಯ ಪ್ರಾಂಶುಪಾಲರಾದ ಶರಣ ಕುಮಾರ ಅವರು ಮಾತನಾಡಿ, ಮಕ್ಕಳ ಸರ್ವತೋಮುಖ ಬೆಳವಣಿಗೆಯಲ್ಲಿ ಪೋಷಕರ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಮಕ್ಕಳ ಲಾಲನೆ-ಪಾಲನೆಯಲ್ಲಿ ಹಲವರು ನೀಡುವ ಸಲಹೆಗಳನ್ನು ವಿವೇಚನೆಯಿಂದ ಪರಿಗಣಿಸಿ, ಅವರ ವ್ಯಕ್ತಿತ್ವ ವಿಕಸನಕ್ಕೆ ಪೂರಕವಾಗುವ ಸಲಹೆಗಳನ್ನು ಮಾತ್ರವೇ ಸ್ವೀಕರಿಸಿ ಮಕ್ಕಳನ್ನು ಮೌಲ್ಯವಂತರಾಗುವಂತೆ ನೋಡಿಕೊಳ್ಳಬೇಕು ಎಂದು ಪಂಚತಂತ್ರದ ಕಥೆಯೊಂದರ ಮೂಲಕ ಪಾಲಕರಿಗೆ ಮನದಟ್ಟು ಮಾಡಿಸಿದರು. ಕಾರ್ಯಕ್ರಮದಲ್ಲಿ ಪಾಲಕರು ತಮ್ಮ ಮಕ್ಕಳ ಶಿಕ್ಷಣ ಹಾಗೂ ಶಾಲೆಯ ಕಾರ್ಯವೈಖರಿಯ ಕುರಿತಾದ ಸಂದೇಹಗಳಿಗೆ ಸ್ಪಷ್ಟನೆ ಪಡೆದು ಸಂತೃಪ್ತಿ ವ್ಯಕ್ತಪಡಿಸಿದರು.
ಈ ವೇದಿಕೆಯಲ್ಲಿ ಶಾಲೆಯ ಆಡಳಿತಾಧಿಕಾರಿಯವರಾದ ವೀಣಾ ರಶ್ಮಿ ಎಂ, ಶೈಕ್ಷಣಿಕ ಸಲಹೆಗಾರರಾದ ಸುಜಾತಾ ಸದಾರಾಮ್, ಉಪ ಪ್ರಾಂಶುಪಾಲರಾದ ರಾಮ ದೇವಾಡಿಗ ಹಾಗೂ ಪ್ರಾಥಮಿಕ ವಿಭಾಗದ ಮುಖ್ಯೋಪಾಧ್ಯಾಯಿನಿಯವರಾದ ಹೇಮಾಮಾಲಿನಿ ಅವರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಶಿಕ್ಷಕಿಯರಾದ ರೋಹಿಣಿ ಹಾಗೂ ಜ್ಯೋತಿ ಜಿ. ಅವರು ನಿರೂಪಿಸಿದರು.

















