ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಇಲ್ಲಿನ ಸೈಂಟ್ ಥಾಮಸ್ ಸಿಬಿಎಸ್ ಇ ಶಾಲೆಯ ಮುಕ್ತ ಸಭಾಂಗಣದಲ್ಲಿ ಶಾಲಾ ಪೋಷಕರ ಮಹಾಸಭೆ ಹಾಗೂ ದಿಕ್ಸೂಚಿ ಕಾರ್ಯಕ್ರಮವು ಅತ್ಯಂತ ಯಶಸ್ವಿಯಾಗಿ ಜರುಗಿತು.
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಹಾಗೂ ಸಂಪನ್ಮೂಲ ವ್ಯಕ್ತಿಗಳಾಗಿ ಉಡುಪಿಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಕಾಲೇಜು ಮತ್ತು ಸಂಶೋಧನಾ ಕೇಂದ್ರದ ಶೈಕ್ಷಣಿಕ ಉಪಪ್ರಾಂಶುಪಾಲರು ಹಾಗೂ ಹಿರಿಯ ಸಮಾಲೋಚಕರಾದ ಡಾ. ನಾಗರಾಜ್ ಎಸ್. (MD Ayu, PhD GAU) ಅವರು ಆಗಮಿಸಿದ್ದರು.

ಈ ಸಂದರ್ಭದಲ್ಲಿ “ಮಕ್ಕಳ ದೈಹಿಕ ಮತ್ತು ಭಾವನಾತ್ಮಕ ಪರಿಪಕ್ವತೆಯಲ್ಲಿ ಪೋಷಕರ ಪಾತ್ರ” ಎಂಬ ವಿಷಯದ ಕುರಿತು ಪೋಷಕರಿಗೆ ವಿಶೇಷ ಮಾರ್ಗದರ್ಶನ ನೀಡಿದ ಡಾ. ನಾಗರಾಜ್ ಅವರು, “ಬದಲಾಗುತ್ತಿರುವ ಇಂದಿನ ಆಧುನಿಕ ಯುಗದಲ್ಲಿ ಮಕ್ಕಳನ್ನು ಕೇವಲ ಅಂಕಗಳಿಕೆಯ ಯಂತ್ರಗಳನ್ನಾಗಿ ಮಾಡದೆ, ಅವರ ಭಾವನೆಗಳನ್ನು ಅರ್ಥಮಾಡಿಕೊಂಡು ಸನ್ಮಾರ್ಗದಲ್ಲಿ ಮುನ್ನಡೆಸುವುದು ಪೋಷಕರ ಪ್ರಮುಖ ಜವಾಬ್ದಾರಿಯಾಗಿದೆ. ಮಕ್ಕಳ ದೈಹಿಕ ಬೆಳವಣಿಗೆಯಷ್ಟೇ ಅವರ ಮಾನಸಿಕ ಹಾಗೂ ಭಾವನಾತ್ಮಕ ಪರಿಪಕ್ವತೆಯೂ ಮುಖ್ಯ” ಎಂದು ತಿಳಿಸಿದರು.
ಶಾಲೆಯ ಪ್ರಾಂಶುಪಾಲರಾದ ವಂದನೀಯ ಫಾದರ್ ಫಿಲಿಪ್ ನೆಲ್ಲಿವಿಳಾ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, “ಮಕ್ಕಳ ಉಜ್ವಲ ಭವಿಷ್ಯವನ್ನು ರೂಪಿಸುವಲ್ಲಿ ಶಾಲೆಯೊಂದಿಗೆ ಪೋಷಕರ ಸಕ್ರಿಯ ಪಾಲ್ಗೊಳ್ಳುವಿಕೆ ಅತ್ಯಂತ ಅತ್ಯಗತ್ಯವಾಗಿದೆ. ನಾವೆಲ್ಲರೂ ಜೊತೆಯಾಗಿ ಶ್ರಮಿಸಿದಾಗ ಮಾತ್ರ ಮಕ್ಕಳಲ್ಲಿ ಉತ್ತಮ ಸಂಸ್ಕಾರ ಹಾಗೂ ಉನ್ನತ ಭವಿಷ್ಯವನ್ನು ಮೂಡಿಸಲು ಸಾಧ್ಯ” ಎಂದು ಪೋಷಕರಿಗೆ ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಶಾಲೆಯ ಆಡಳಿತ ಮಂಡಳಿಯ ಪದಾಧಿಕಾರಿಗಳು, ಶಿಕ್ಷಕ ವೃಂದ ಹಾಗೂ ನೂರಾರು ಸಂಖ್ಯೆಯಲ್ಲಿ ಪೋಷಕರು ಉಪಸ್ಥಿತರಿದ್ದು, ಕಾರ್ಯಕ್ರಮದ ಪ್ರಯೋಜನವನ್ನು ಪಡೆದುಕೊಂಡರು. ಕಾರ್ಯಕ್ರಮದಲ್ಲಿ ಮಕ್ಕಳ ಪೋಷಕರು, ಉಪಪ್ರಾಂಶುಪಾಲರು, ಶಿಕ್ಷಕರು ಸಹಾಯಕರು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಶಿಕ್ಷಕ ಮಾಸ್ಟರ್ ಪ್ರವೀಣ್ ನಿರೂಪಿಸಿ, ಉಪ ಪ್ರಾಂಶುಪಾಲೆ ಸಿಸ್ಟರ್ ಕಾರ್ಮೆಲ್ ಸ್ವಾಗತಿಸಿ, ಶಿಕ್ಷಕಿ ಹೆಲೆನ್ ವಂದಿಸಿದರು

















