ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಕರ್ನಾಟಕ ರಾಜ್ಯದಾದ್ಯಂತ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್.ಐ.ಆರ್) ಪ್ರಕ್ರಿಯೆ ಜೂ.30ರಿಂದ ಜು.29 ತನಕ ನಡೆಯಲಿದ್ದು ಮತಗಟ್ಟೆ ಮಟ್ಟದ ಅಧಿಕಾರಿ (ಬಿ.ಎಲ್.ಓ) ಮನೆ ಮನೆಗೆ ಭೇಟಿ ನೀಡಿ ಎನ್ಯುಮರೇಶನ್ ಫಾರ್ಮ್ ನ್ನು ನೀಡುತ್ತಿದ್ದಾರೆ.
ಎಲ್ಲಾ ಮತದಾರರರು ಜು.29ರೊಳಗೆ ಆ ಫಾರ್ಮ್ ತುಂಬಿಸಿ ವಾಪಾಸು ನೀಡಬೇಕಾಗಿದೆ. ಆ ಫಾರ್ಮ್ ನಲ್ಲಿ 2002ರ ಮತದಾರರ ಪಟ್ಟಿಯಲ್ಲಿನ ಅವರ ವಿವರಗಳನ್ನು, 2002ರಲ್ಲಿ ಅವರ ಹೆಸರು ಇಲ್ಲದಿದ್ದರೆ ಅವರ ತಂದೆ, ತಾಯಿ, ಅಜ್ಜ, ಅಜ್ಜಿ ಯಾರೊಬ್ಬರ ವಿವರವನ್ನಾದರೂ ತುಂಬಿಸಬೇಕಾಗಿದೆ. ಇದು ತುಂಬಿಸಲು ಎಲ್ಲಾ ಮತದಾರರಿಗೆ ಕಷ್ಟವಾಗುತ್ತಿದ್ದು ವಂಡ್ಸೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಮತದಾರರಿಗೆ ಕಷ್ಟವಾಗಬಾರದೆಂದು ಜು.3 ರಿಂದ ವಂಡ್ಸೆ ಗ್ರಾಮ ಪಂಚಾಯತ್ನಲ್ಲಿ ಮತದಾರರ ಸಹಾಯ ಕೇಂದ್ರ (ಎಸ್.ಐ.ಆರ್ ಹೆಲ್ಫ್ ಡೆಸ್ಕ್) ತೆರೆಯಲಾಗಿದೆ.
ಇದು ರಜಾ ದಿನಗಳೂ ಸೇರಿದಂತೆ ವಾರದ ಏಳೂ ದಿನವೂ ಬೆಳಿಗ್ಗೆ 9.30 ರಿಂದ ಸಂಜೆ 6.30ರ ತನಕ ಕಾರ್ಯನಿರ್ವಹಿಸಲಿದ್ದು ಅರ್ಜಿ ತುಂಬಿಸಲು ಕಷ್ಟವಾಗುವ ಎಲ್ಲಾ ಮತದಾರರು ಎಸ್.ಐ.ಆರ್ ನೀಡಿರುವ ಎನ್ಯುಮರೇಶನ್ ಫಾರ್ಮ್, ಆಧಾರ್ ಕಾರ್ಡ್ ಮತ್ತು ಇತ್ತೀಚಿನ ಪಾಸ್ ಪೋರ್ಟ್ ಗಾತ್ರದ ಭಾವಚಿತ್ರ ತೆಗೆದುಕೊಂಡು ಬಂದರೆ ತಮಗೆ ಅರ್ಜಿ ತುಂಬಿಸಿ ಕೊಡುವ ವ್ಯವಸ್ಥೆ ಮಾಡಲಾಗುತ್ತದೆ.
ಅಲ್ಲದೆ ಈ ಸಹಾಯ ಕೇಂದ್ರದಲ್ಲಿ ಮತದಾರರ ಪಟ್ಟಿಯ ಮ್ಯಾಪಿಂಗ್ ಇದುವರೆಗೆ ಆಗದೇ ಇದ್ದರೆ 2002ರ ಮತದಾರರ ಪಟ್ಟಿಯ ವಿವರವನ್ನು ಸಂಗ್ರಹಿಸಲು ಸಹಾಯ ಮಾಡಲಾಗುವುದು. ಒಂದು ವೇಳೆ ಕರಡು ಮತದಾರರ ಪಟ್ಟಿಯಲ್ಲಿ ಆರ್ಹ ಮತದಾರರ ಹೆಸರು ಬಿಟ್ಟು ಹೋದಲ್ಲಿ ಉಪವಿಭಾಗಾಧಿಕಾರಿಗಳಿಗೆ ಅಪೀಲು ಸಲ್ಲಿಸಲು ಹಾಗೂ ಅದಕ್ಕೆ ಬೇಕಾದ ದಾಖಲೆಗಳನ್ನು ಸಂಗ್ರಹಿಸಲು ಸಹ ಈ ಹೆಲ್ಪ್ ಡೆಸ್ಕ್ ಸಹಾಯ ಮಾಡಲಿದೆ.
ಈ ಮತದಾರರ ಸಹಾಯ ಕೇಂದ್ರದಲ್ಲಿ ಗ್ರಾಮ ಪಂಚಾಯತ್ ಗ್ರಂಥಾಲಯ ಮೇಲ್ವಿಚಾರಕರು, ಗ್ರಾಮೀಣ ಪುನರ್ವಸತಿ ಕಾರ್ಯಕರ್ತರು, ಸಂಜೀವಿನಿ ತಂಡದ ಸದಸ್ಯರು ಹಾಗೂ ರಾಜಕೀಯ ಪಕ್ಷಗಳ ಬೂತ್ ಮಟ್ಟದ ಏಜೆಂಟ್ (ಬಿ.ಎಲ್.ಎ)ಗಳು ಕಾರ್ಯ ನಿರ್ವಹಿಸಲಿದ್ದು ವಂಡ್ಸೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಎಲ್ಲಾ ಮತದಾರರು ಇದರ ಸದುಪಯೋಗ ಪಡೆದುಕೊಳ್ಳುವಂತೆ ತಿಳಿಸಲಾಗಿದೆ.ಮುಂದೆ ಗ್ಯಾರಂಟಿ ಯೋಜನೆಗಳಿಗೆ ಮತದಾರರ ಗುರುತು ಪತ್ರವನ್ನು ಜೋಡಣೆ ಮಾಡಲಾಗುವುದರಿಂದ ಯಾವೊಬ್ಬ ಮತದಾರರು ಇದರಿಂದ ವಂಚಿತರಾಗಬಾರದೆನ್ನುವ ಉದ್ದೇಶದಿಂದ ಇದನ್ನು ಆರಂಭ ಮಾಡಲಾಗಿದೆ. ಅಗತ್ಯವಿರುವವರೆಲ್ಲರೂ ಇದರ ಸದುಪಯೋಗಪಡಿಸಿಕೊಳ್ಳುವಂತೆ ತಿಳಿಸಲಾಗಿದೆ.
ಮತದಾರರ ಸಹಾಯ ಕೇಂದ್ರ ಆರಂಭದ ಸಂದರ್ಭದಲ್ಲಿ ವಂಡ್ಸೆ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ಉದಯ ಕುಮಾರ ಶೆಟ್ಟಿ, ವಿ.ಕೆ ಶಿವರಾಮ ಶೆಟ್ಟಿ, ಗ್ರಾಮ ಪಂಚಾಯತ್ ಮಾಜಿ ಉಪಾಧ್ಯಕ್ಷರಾದ ಗೋವರ್ಧನ ಜೋಗಿ, ಮಾಜಿ ಸದಸ್ಯ ಉದಯ ಕೆ. ನಾಯ್ಕ್, ದೀಪಕ್ ಶೆಟ್ಟಿ, ವೆಂಕಟೇಶ್ ಶೆಟ್ಟಿ, ನಿರ್ಮಲಾ ಶೆಟ್ಟಿ, ಗ್ರಾಮ ಪಂಚಾಯತ್ ಕಾರ್ಯದರ್ಶಿ ಸುರೇಶ್, ಬಿ.ಎಲ್.ಓಗಳಾದ ರಾಜು ಎನ್., ಪ್ರತಾಪ್ ಕುಮಾರ್ ಶೆಟ್ಟಿ, ಶ್ರೀಲಕ್ಷ್ಮೀ, ಸಂಜೀವಿನಿ ಸಂಘದ ಆಶಾರಾಣಿ, ನಯನ, ಗ್ರಂಥಾಲಯ ಮೇಲ್ವಿಚಾರಕರು ಹಾಗೂ ಗ್ರಾಮೀಣ ಪುನರ್ವಸತಿ ಕಾರ್ಯಕರ್ತರು ಉಪಸ್ಥಿತರಿದ್ದರು.
















