ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೋಟ: ಗಾಣಿಗ ಯುವ ಸಂಘಟನೆ ಕೋಟ ಆಶ್ರಯದಲ್ಲಿ “ಯುವ ಸಂಗಮ” ಕಾರ್ಯಕ್ರಮದ ಅಂಗವಾಗಿ ಯಕ್ಷಗಾನ ಕಲಾವಿದ ಹಾರಾಡಿ ಮಹಾಬಲ ಗಾಣಿಗ ಪ್ರಶಸ್ತಿ ಪ್ರದಾನ, ವಿವಿಧ ಕ್ಷೇತ್ರಗಳ ಸಾಧಕರಿಗೆ ಸನ್ಮಾನ ಹಾಗೂ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವು ಕೋಟ ವಿವೇಕ ವಿದ್ಯಾಸಂಸ್ಥೆಯ ಎಂ.ಜಿ.ಎಂ. ಸಭಾಂಗಣದಲ್ಲಿ ನಡೆಯಿತು.
ಯಕ್ಷಗಾನ ಕೇಂದ್ರ ಉಡುಪಿಯ ಹಿರಿಯ ಯಕ್ಷಗಾನ ಗುರು ಬನ್ನಂಜೆ ಸಂಜೀವ ಸುವರ್ಣ ಅವರು ಹಾರಾಡಿ ಮಹಾಬಲ ಗಾಣಿಗ ಪ್ರಶಸ್ತಿಯನ್ನು ಹಿರಿಯ ಯಕ್ಷಗಾನ ಕಲಾವಿದ ಹೇರಂಜಾಲು ಸುಬ್ಬಣ್ಣ ಗಾಣಿಗ ಅವರಿಗೆ ಪ್ರದಾನ ಮಾಡಿ ಮಾತನಾಡಿ, ಯಕ್ಷಗಾನ ಕಲೆಗೆ ಹಾರಾಡಿ ಮನೆತನ ಹಾಗೂ ಗಾಣಿಗ ಸಮಾಜದ ಕೊಡುಗೆ ಅವಿಸ್ಮರಣೀಯವಾದದ್ದು. ಡಾ. ಶಿವರಾಮ ಕಾರಂತರ ತಂಡದಲ್ಲಿ ಗಾಣಿಗ ಸಮಾಜದ ಕಲಾವಿದರಿಗೆ ಅಗ್ರಪಾಲಿತ್ತು. ಒಂದು ಊರಲ್ಲಿ ಹಲವು ಮೇಳಕ್ಕಾಗುವಷ್ಟು ಪ್ರಬುದ್ಧ ಕಲಾವಿದರಿದ್ದರು.ಇದೆಲ್ಲವೂ ಗಾಣಿಗ ಸಮಾಜ ಯಕ್ಷಗಾನ ಕ್ಷೇತ್ರದಲ್ಲಿ ಸಾಧಿಸಿದ ಅಗ್ರಗಣ್ಯ ಸಾಧನೆಯನ್ನು ಬಿಂಬಿಸುತ್ತದೆ ಹಾಗೂ ಹಾರಾಡಿ ಮಹಾಬಲ ಗಾಣಿಗರು ಕೂಡ ಅತ್ಯಂತ ಶಿಸ್ತಿನ ಮತ್ತು ಪರಿಪೂರ್ಣ ಕಲಾವಿದರಾಗಿದ್ದರು. ಅವರನ್ನು ನೆನಪಿನಲ್ಲಿಡುವ ಸಲುವಾಗಿ ಆಯೋಜಿಸಿದ ಈ ಕಾರ್ಯಕ್ರಮ ಅರ್ಥಪೂರ್ಣವಾದದ್ದು ಎಂದರು.
ಹೇರೆಂಜಾಲು ಸುಬ್ಬಣ್ಣ ಗಾಣಿಗ ಹಾಲಾಡಿ ಮಹಾಬಲ ಗಾಣಿಗ ಪ್ರಶಸ್ತಿ ಸ್ವೀಕರಿಸಿ ಮಾತನಾಡಿ, ಯಕ್ಷಗಾನ ನನಗೆ ಸರ್ವಸ್ವವಾಗಿದೆ. ಆದರೆ ಯಾವುದೇ ಪ್ರಶಸ್ತಿ ಪುರಸ್ಕಾರಕ್ಕೆ ನಾನು ಆಸೆಪಟ್ಟವನ್ನಲ್ಲ ಹಾರಾಡಿ ಮಹಾಬಲ ಗಾಣಿಗ ಪ್ರಶಸ್ತಿ ನನಗೆ ಮರುಹುಟ್ಟು ನೀಡಿದಷ್ಟು ಖುಷಿ ತಂದಿದೆ ಎಂದರು.
ಉಡುಪಿ ಜಿಲ್ಲಾ ಸೋಮಕ್ಷತ್ರಿಯ ಗಾಣಿಗ ಸಮಾಜದ ಉಪಾಧ್ಯಕ್ಷ ಶೇವಧಿ ಸುರೇಶ್ ಗಾಣಿಗ ಕಾರ್ಯಕ್ರಮ ಉದ್ಘಾಟಿಸಿ ಶುಭ ಹಾರೈಸಿದರು. ಗೀತಾನಂದ ಫೌಂಡೇಶನ್ ಪ್ರವರ್ತಕ ಆನಂದ ಸಿ. ಕುಂದರ್ ಪ್ರತಿಭಾ ಪುರಸ್ಕಾರ ನೆರವೇರಿಸಿದರು.
ಗಾಣಿಗ ಯುವ ಸಂಘಟನೆ ಕೋಟದ ಅಧ್ಯಕ್ಷ ಗಿರೀಶ್ ಗಾಣಿಗ ಬೆಟ್ಟಕ್ಕಿ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ದೈವ ಪರಿಚಾರಕರಾದ ನಾರಾಯಣ ಗಾಣಿಗ ಕಾರ್ಕಡ, ಸಾಧಕ ಹೈನುಗಾರ ಮಹಿಳೆ ನಾಗರತ್ನ ಜನಾರ್ದನ ಗಾಣಿಗ ಮಾಬುಕಳ, ರಾಜೇಶ ಗಾಣಿಗ ಹಾಗೂ ರೋಟರಿ ಕೋಟ ಸಿಟಿಯ ನೂತನ ಅಧ್ಯಕ್ಷ ರಾಧಾಕೃಷ್ಣ ಬ್ರಹ್ಮಾವರ ಅವರನ್ನು ಸಮ್ಮಾನಿಸಲಾಯಿತು. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.
ಗೌರವ ಅತಿಥಿಗಳಾಗಿ ಉಡುಪಿ ಜಿಲ್ಲಾ ಸೋಮಕ್ಷತ್ರಿಯ ಗಾಣಿಗ ಸಮಾಜದ ಅಧ್ಯಕ್ಷ ಉದಯ ಕುಮಾರ್, ಉದ್ಯಮಿ ನಿತಿನ್ ನಾರಾಯಣ ಗಾಣಿಗ ಬೆಂಗಳೂರು, ವೇಣುಗೋಪಾಲಕೃಷ್ಣ ಎಜ್ಯುಕೇಶನ್ ಟ್ರಸ್ಟ್ ಬಾರ್ಕೂರು ಅಧ್ಯಕ್ಷ ಗಣೇಶ್ ಜಿ. ಚೆಲ್ಲೆಮಕ್ಕಿ, ಹೋಟೆಲ್ ಉದ್ಯಮಿ ಗೋಪಾಲ ಗಾಣಿಗ ಗಂಗೊಳ್ಳಿ, ಗಾಣಿಗ ಯುವ ಸಂಘಟನೆ ಉಡುಪಿ ಜಿಲ್ಲಾಧ್ಯಕ್ಷ ದಿನೇಶ್ ಗಾಣಿಗ ಕೋಟ, ಉಡುಪಿ ಜಿಲ್ಲಾ ಸೋಮಕ್ಷತ್ರಿಯ ಗಾಣಿಗ ಸಮಾಜದ ಪ್ರಧಾನ ಕಾರ್ಯದರ್ಶಿ ನಾಗರಾಜ ಗಾಣಿಗ ಸಾಲಿಗ್ರಾಮ, ಖಜಾಂಚಿ ವಾಸುದೇವ ಬೈಕಾಡಿ, ಹಾಲಾಡಿ ಮಹಾಬಲ ಗಾಣಿಗರ ಮಕ್ಕಳಾದ ವಿಶ್ವನಾಥ ಕಾರ್ತಟ್ಟು, ಜನಾರ್ದನ ಬ್ರಹ್ಮಾವರ ಹಾಗೂ ವಸಂತಿ ರಾಜು ಕಾರ್ತಟ್ಟು, ಗಾಣಿಗ ಯುವ ಸಂಘಟನೆ ಕೋಟದ ಗೌರವಾಧ್ಯಕ್ಷ ಪ್ರಶಾಂತ ಗಾಣಿಗ ಕಾರ್ಕಡ, ಉದ್ಯಮಿ ಕಿರಣ್ ಗಾಣಿಗ ಗೆಂಡಕೆರೆ, ರಘುರಾಮ ಬೈಕಾಡಿ, ಮಹಿಳಾ ಸಂಘಟನೆ ಕೋಟ ಘಟಕದ ಅಧ್ಯಕ್ಷೆ ರೇಖಾ ಗಣೇಶ ಚಿತ್ರಪಾಡಿ, ಅನ್ನಪೂರ್ಣೇಶ್ವರಿ ಮಹಿಳಾ ಸಂಘದ ಜಯಂತಿ ವಾಸುದೇವ ಬೈಕಾಡಿ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.
ಸಂಘದ ಕಾರ್ಯದರ್ಶಿ ಆರ್.ಕೆ. ಬ್ರಹ್ಮಾವರ ಸ್ವಾಗತಿಸಿ, ಪ್ರಣುತ್ ಆರ್. ಗಾಣಿಗ ಕಾರ್ಯಕ್ರಮ ನಿರೂಪಿಸಿ, ಖಜಾಂಚಿ ಆನಂದ ಗಾಣಿಗ ವಂದಿಸಿದರು.
















