ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಇಲ್ಲಿನ ಕಿರಿಮಂಜೇಶ್ವರದ ಜನತಾ ನ್ಯೂ ಇಂಗ್ಲೀಷ್ ಮೀಡಿಯಂ ಶಾಲೆಯಲ್ಲಿ ನೂತನ ವಿದ್ಯಾರ್ಥಿಗಳ ಪದಗ್ರಹಣ ಸಮಾರಂಭವು ಅದ್ದೂರಿಯಾಗಿ ನಡೆಯಿತು.
ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದ ಹೆಮ್ಮಾಡಿಯ ಜನತಾ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ಜಗದೀಶ ಶೆಟ್ಟಿ ಅವರು ವಿದ್ಯಾರ್ಥಿ ನಾಯಕರುಗಳನ್ನುದ್ದೇಶಿಸಿ ಮಾತನಾಡಿ, “ವಿದ್ಯಾರ್ಥಿಗಳಿಗೆ ಪ್ರಾಢಶಾಲೆಯ ಹಂತದಲ್ಲೇ ನಾಯಕತ್ವದ ಜವಾಬ್ದಾರಿಯನ್ನು ವಹಿಸುವ ಮೂಲಕ ಅವರಲ್ಲಿ ವಿವಿಧ ಕೌಶಲ್ಯಗಳನ್ನು ಉತ್ತೇಜಿಸಲು ಅನುಕೂಲವಾಗುತ್ತದೆ. ಶಿಸ್ತು, ಸಹಕಾರ, ತಾಳ್ಮೆ, ಪರೋಪಕಾರದ ಗುಣಗಳನ್ನು ವಿದ್ಯಾರ್ಥಿಗಳು ಮೈಗೂಡಿಸಿಕೊಳ್ಳಲು ಇದು ಅತ್ಯುತ್ತಮ ಅವಕಾಶವಾಗಿದೆ. ಇಂದಿನ ಮಕ್ಕಳೇ ಮುಂದಿನ ಪ್ರಜೆಗಳಾಗಿರುವುದರಿಂದ ಅವರಿಗೆ ಕಲಿಕೆಯ ಹೆಚ್ಚಿನ ಅವಕಾಶಗಳನ್ನು ಶಾಲೆ ಒದಗಿಸಬೇಕು” ಎಂದು ತಿಳಿಸಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಜನತಾ ಸಮೂಹ ಸಂಸ್ಥೆಗಳ ಅಧ್ಯಕ್ಷರು ಹಾಗೂ ಹೆಮ್ಮಾಡಿಯ ಜನತಾ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಗಣೇಶ ಮೊಗವೀರರು ತಮ್ಮ ಅಧ್ಯಕ್ಷೀಯ ನುಡಿಗಳಲ್ಲಿ “ನಮ್ಮ ದೇಶವು ಪ್ರಜಾಪ್ರಭುತ್ವ ರಾಷ್ಟ್ರವಾಗಿದ್ದು, ವಿದ್ಯಾರ್ಥಿಗಳಲ್ಲಿ ಪ್ರಜಾಸತ್ತಾತ್ಮಕ ಮೌಲ್ಯಗಳ ಬಗ್ಗೆ ಜಾಗೃತಿಯನ್ನು ಮೂಡಿಸುವುದು ನಮ್ಮ ಧ್ಯೇಯವಾಗಿದೆ. ಚುನಾವಣಾ ವಿಧಾನದ ಮೂಲಕ ವಿದ್ಯಾರ್ಥಿ ನಾಯಕರುಗಳ ಆಯ್ಕೆ ಪ್ರಕ್ರಿಯೆ ನಡೆದಿದ್ದು, ನಾಯಕರಲ್ಲಿ ಇರಬೇಕಾದ ಗುಣಗಳ ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿಸಿಕೊಡಲಾಗಿದೆ. ವಿದ್ಯಾರ್ಥಿಗಳು ಅಧಿಕಾರವನ್ನು ದುರುಪಯೋಗ ಮಾಡಿಕೊಳ್ಳದೆ, ಅದನ್ನು ಸೇವಾ ಮನೋಭಾವದಿಂದ ನಿರ್ವಹಿಸಬೇಕು” ಎಂದು ಕರೆಕೊಟ್ಟರು.
9ನೇ ತರಗತಿಯ ಪ್ರಥಮ್ ವಿದ್ಯಾರ್ಥಿ ನಾಯಕನಾಗಿ, 9ನೇ ತರಗತಿಯ ನವ್ಯಾ ಆಚಾರ್ಯ ವಿದ್ಯಾರ್ಥಿ ನಾಯಕಿಯಾಗಿ, 9ನೇ ತರಗತಿಯ ಆರ್ಯನ್ ಕ್ರೀಡಾ ಮಂತ್ರಿಯಾಗಿ, 9ನೇ ತರಗತಿಯ ಪ್ರೀತಮ್ ಶಿಸ್ತು ಮತ್ತು ಸ್ವಚ್ಛತಾ ಮಂತ್ರಿಯಾಗಿ, 8ನೇ ತರಗತಿಯ ಕುಮಾರಿ ಉತ್ಸವಿ ಸಾಂಸ್ಕೃತಿಕ ಮಂತ್ರಿಯಾಗಿ, 8ನೇ ತರಗತಿಯ ಸಚೀತ್ ಆಹಾರ ನಿರ್ವಹಣಾ ಮಂತ್ರಿಯಾಗಿ ಆಯ್ಕೆಗೊಂಡರು.
ಶಾಲಾ ಸಂಯೋಜಕರಾದ ಸುಬ್ರಮಣ್ಯ ಮಾರಾಟಿ ವಿದ್ಯಾರ್ಥಿಗಳಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು. ಜನತಾ ಸಮೂಹ ಸಂಸ್ಥೆಗಳ ಕಾರ್ಯದರ್ಶಿಗಳಾದ ಶ್ಯಾಮಲಾ ಗಣೇಶ ಮೊಗವೀರ ಉಪಸ್ಥಿತರಿದ್ದರು.
ಜನತಾ ನ್ಯೂ ಇಂಗ್ಲೀಷ್ ಮೀಡಿಯಂ ಶಾಲೆಯ ಮುಖ್ಯ ಶಿಕ್ಷಕಿ ದೀಪಿಕಾ ಆಚಾರ್ಯ ಸ್ವಾಗತಿಸಿ, ಶಾಲಾ ಸಾಂಸ್ಕೃತಿಕ ವಿಭಾಗದ ಸಂಯೋಜಕರಾದ ರಾಘವೇಂದ್ರ ದುರ್ಗಾ ಬಿಲ್ಲವ ವಂದಿಸಿದರು. ಸಹಶಿಕ್ಷಕಿ ವನಿತಾ ಕಾರ್ಯಕ್ರಮ ನಿರ್ವಹಿಸಿದರು.
















