ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ನಗರದ ಚರ್ಚ್ ರಸ್ತೆಯಲ್ಲಿ ವ್ಯಕ್ತಿಯೊರ್ವನನ್ನು ಗುಂಡಿಕ್ಕಿ ಬರ್ಬರವಾಗಿ ಹತ್ಯೆಗೈದ ಘಟನೆ ಶುಕ್ರವಾರ ಬೆಳಗಿನ ಜಾವ ನಡೆದಿದೆ. ಬಾರ್ಕೂರು ಕಳ್ಳೂರು ಮೂಲದ ಐವನ್ ರಿಚರ್ಡ್ ಮಸ್ಕರೇನಸ್ (45) ಕೊಲೆಯಾದ ವ್ಯಕ್ತಿ.

ಕುಂದಾಪುರಕ್ಕೆ ಎರಡನೇ ಪತ್ನಿಯೊಂದಿಗೆ ಕಾರಿನಲ್ಲಿ ಬಂದಿದ್ದಾಗ ಕುಂದಾಪುರ ಚರ್ಚ್ ಎದುರಿಗೆ ಶುಕ್ರವಾರ ಬೆಳಗಿನ ಜಾವ 03:30ರ ಸುಮಾರಿಗೆ ಈ ಘಟನೆ ನಡೆದಿದೆ. ಪಿಸ್ತೂಲ್ ಮೂಲಕ ಆರೋಪಿ ಗುಂಡು ಹೊಡೆದು ಪರಾರಿಯಾಗಿದ್ದು ತೀವ್ರ ರಕ್ತಸ್ರಾವದಿಂದ ಐವನ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮಹಿಳೆ ಆರೋಪಿಯನ್ನು ಗುರುತು ಹಚ್ಚಿದ್ದು ಪರಾರಿಯಾದ ಆರೋಪಿ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ. ಹಣಕಾಸು ಅಥವಾ ಬೇರೆ ಯಾವುದೇ ವ್ಯವಹಾರದಿಂದ ಈ ಕೊಲೆ ನಡೆದಿರಬಹುದೆಂದು ಪ್ರಾಥಮಿಕ ತನಿಖೆ ವೇಳೆ ತಿಳಿದು ಬಂದಿದೆ.
ಆಗಿದ್ದೇನು?
ಗುರುವಾರ ರಾತ್ರಿ ರಾತ್ರಿ 11:45ರ ಸುಮಾರಿಗೆ ಆರೋಪಿ ಡೆರಿಕ್ನು, ಐವನ್ ಅವರಿಗೆ ಕರೆ ಮಾಡಿ ಚಟ್ಲಿ ಕೊಡುವ ವಿಚಾರದಲ್ಲಿ ಹಣ ಬರಲು ಬಾಕಿ ಇದ್ದು, ಈ ವಿಚಾರದಲ್ಲಿ ಡೆರಿಕ್ ನು ಮದ್ಯಸ್ಥಿಕೆ ವಹಿಸಿ ಹಣ ತೆಗಿಸಿ ಕೊಡುತ್ತೇನೆ ಎಂದು ಹೇಳಿದ್ದ. ವಿಚಾರದಲ್ಲಿ ಪೋನ್ನಲ್ಲಿ ಗಲಾಟೆ ಮಾಡಿಕೊಳ್ಳುತ್ತಿದ್ದು, ಆ ಸಮಯ ಡೆರಿಕ್ ನು ಐವನ್ ರವರಿಗೆ ದಮ್ ಇದ್ದರೆ ಒಬ್ಬನೇ ಕುಂದಾಪುರಕ್ಕೆ ಬಾ ಎಂದು ಸವಾಲು ಹಾಕಿದ್ದ. ರಾತ್ರಿ 01:30ಕ್ಕೆ ಐವನ್ರ ಪೋನಗೆ ಲೋಕೆಶನ್ ಕಳುಹಿಸಿದ್ದ. ಅದರಂತೆ ಕುಂದಾಪುರದ ಚರ್ಚ್ ರಸ್ತೆಯ ಹೋಲಿ ರೋಸಾರಿಯ ಚರ್ಚಿನ ಎದುರು ಇರುವ ಕಾಂಕ್ರೇಟ್ ರಸ್ತೆಯಲ್ಲಿ ಐವನ್ ಕಾರನ್ನು ನಿಲ್ಲಿಸಿಕೊಂಡಿದ್ದಾಗ, ಸುಮಾರು 03:15ಕ್ಕೆ ಥಾರ್ ಕಾರಿನಲ್ಲಿ ಬಂದ ಡೆರಿಕ್, ತಾನು ತಂದಿದ್ದ ಒಂದು ಗನ್ ನಿಂದ ಐವನ್ಗೆ ಸೊಂಟದ ಕೆಳ ಭಾಗಕ್ಕೆ ಶೂಟ್ ಮಾಡಿ ತನ್ನ ಕಾರಿನಲ್ಲಿಪರಾರಿಯಾಗಿದ್ದಾನೆ.
ಸೊಂಟ ಹಾಗೂ ಕಾಲಿನ ಭಾಗಕ್ಕೆ ಗಾಯಗೊಂಡು ರಕ್ತಸ್ರಾವ ಆಗಿ ರಸ್ತೆಯಲ್ಲೆ ಐವನ್ ಸ್ಥಳದಲ್ಲೆ ಮೃತಪಟ್ಟಿರುತ್ತಾರೆ. ಈ ಗಲಾಟೆಗೆ ಐವನ್ ರವರಿಗೆ ಹಾಗೂ ಡೆರಿಕ್ ರವರಿಗೆ ಇದ್ದ ಹಣಕಾಸಿನ ವ್ಯವಹಾರ ಹಾಗೂ ಇತರ ವ್ಯವಹಾರದ ವಿಚಾರದಲ್ಲಿ ಇರುವ ಮನಸ್ತಾಪದಿಂದ ಆಗಿರುತ್ತದೆ.
ಹಣಕಾಸಿನ ವ್ಯವಹಾರ ಮಾಡಿಕೊಂಡಿದ್ದ ಐವನ್ ಅವರು ಬಾರ್ಕೂರು ಮೂಲದ ಮಹಿಳೆಯೊಂದಿಗೆ ಸಂಸಾರ ನಡೆಸುತ್ತಿದ್ದರು ಎಂದು ಹೇಳಲಾಗಿದೆ.
ಉಡುಪಿ ಎಸ್ಪಿ ಹರಿರಾಂ ಶಂಕರ್, ಹೆಚ್ಚುವರಿ ಎಸ್ಪಿ ಸುಧಾಕರ್ ನಾಯಕ್, ಡಿವೈಎಸ್ಪಿ ಎಚ್.ಡಿ. ಕುಲಕರ್ಣಿ, ಕುಂದಾಪುರ ನಗರ ಠಾಣೆ ಇನ್ಸ್ಪೆಕ್ಟರ್ ಜಯರಾಮ ಗೌಡ, ಪಿಎಸ್ಐಗಳಾದ ನಂಜಾ ನಾಯ್ಕ, ಪುಷ್ಪಾ, ಅನೂಪ್ ನಾಯಕ್ ಮೊದಲಾದವರು ಭೇಟಿ ನೀಡಿದ್ದಾರೆ.
ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿ ಡೆರಿಕ್ ಕ್ರಾಸ್ತಾ ಪತ್ತೆ ಬಗ್ಗೆ ಮೂರು ವಿಶೇಷ ತಂಡಗಳನ್ನು ರಚಿಸಲಾಗಿದೆ.
















