ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೋಟ: ಸಾಹಿತ್ಯವೆಂಬುದು ಮನಸ್ಸಿನ ಅತ್ಯಂತ ಸಂತೋಷ ಮತ್ತು ನೆಮ್ಮದಿ. ಮಾನವ ಜೀವನವನ್ನು ಸುಂದರ ಮತ್ತು ಸಾರ್ಥಕ ಮೌಲಯ್ಯುತವಾಗಿಸುತ್ತದೆ. ಸಾಹಿತ್ಯವು ಕೇವಲ ಮನರಂಜನೆಗೆ ಮಾತ್ರವಲ್ಲ ಸಮಾಜಕ್ಕೆ ದಾರಿದೀಪವಾಗುತ್ತದೆ ಎಂದು ಉಡುಪಿ ಚಿಕ್ಕಮಗಳೂರು ಲೋಕಸಭಾ ಸದಸ್ಯರಾದ ಕೋಟ ಶ್ರೀನಿವಾಸ ಪೂಜಾರಿ ನುಡಿದರು.

ಅವರು ಭಾನುವಾರ ಕಾರಂತ ಥೀಂ ಪಾರ್ಕ್ನಲ್ಲಿ ಜ್ಞಾನಗಂಗಾ ಸಾಹಿತ್ಯ ಮತ್ತು ಸಾಂಸ್ಕೃತಿಕ ರಂಗ ಬೈಂದೂರು, ಕಾರಂತ ಪ್ರತಿಷ್ಠಾನ ಕೋಟ, ಕೋಟತಟ್ಟು ಗ್ರಾಮ ಪಂಚಾಯತ್, ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ಜಿಲ್ಲೆ ಇವರ ಸಹಕಾರದಲ್ಲಿ ನಡೆದ ರಾಜ್ಯ ಮಟ್ಟದ ಸಾಹಿತ್ಯ ಸೌರಭ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಮುಖ್ಯ ಅಭ್ಯಾಗತರಾಗಿ ಕೋಟ ಅಮೃತೇಶ್ವರಿ ಕ್ಷೇತ್ರದ ಧರ್ಮದರ್ಶಿ ಆನಂದ ಸಿ. ಕುಂದರ್ ಸಾಹಿತ್ಯವು ಜೀವನದ ಕನ್ನಡಿ ಅದು ಮನಸ್ಸನ್ನು ತಿದ್ದಿ ಸಮಾಜವನ್ನು ರೂಪಿಸಿ ಸಂಸ್ಕೃತಿಯನ್ನು ಉಳಿಸಿ ಮಾನವತೆಯನ್ನು ಬೆಳೆಸುವ ಮಹತ್ವದ ಸಾಧನವಾಗಿದೆ ಎಂದರು. ಜೊತೆಗೆ ಈ ರೀತಿಯ ಸಾಹಿತ್ಯ ಕುಟುಂಬದ ಮೂಲಕ ಸಾಹಿತ್ಯದ ಬೆಳವಣಿಗೆ ಪರಿಪೂರ್ಣವಾಗುತ್ತದೆ ಎಂದು ನುಡಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ ಜ್ಞಾನಗಂಗಾ ಸಾಹಿತ್ಯ ಮತ್ತು ಸಾಂಸ್ಕೃತಿಕ ರಂಗ ಬೈಂದೂರು ಇದರ ಮಣ್ಣೇ ಮೋಹನ್ ಸಾಹಿತ್ಯವು ಸಮಾಜದ ಸಮಸ್ಯೆಯನ್ನು ಬೆಳಕಿಗೆ ತರುತ್ತದೆ. ಉತ್ತಮ ಚಿಂತನೆ ಮತ್ತು ಸದ್ಗುಣಗಳನ್ನು ಪ್ರೇರೇಪಿಸುತ್ತದೆ. ಭಾಷೆ ಮತ್ತು ಸಂಸ್ಕೃತಿಯ ಪರಂಪರೆ ಉಳಿಸಿ ಬೆಳೆಸುತ್ತದೆ. ಓದುಗರಲ್ಲಿ ಕಲ್ಪನಾಶಕ್ತಿ ಸಂವೇದನೆ ಮತ್ತು ಸೃಜನಶೀಲತೆಯನ್ನು ತರುತ್ತದೆ ಎಂದರು.
ವೇದಿಕೆಯಲ್ಲಿ ಕಾರಂತ ಪ್ರತಿಷ್ಠಾನದ ಟ್ರಸ್ಟಿಗಳಾದ ಸುಬ್ರಾಯ ಆಚಾರ್, ಸುನಿತಾ ಸೊಲ್ಲಾಪುರೆ, ಶೈಲಜಾ, ಶೇಖರಪ್ಪ, ಶಶಿಧರ ಹಾಲಾಡಿ, ಸುರೇಶ್ ಕೌಜಲಗಿ, ವಿಧಾನ್ ಗುರುಪ್ರಸಾದ್, ರತ್ನಾ ನಾಗರಾಜ್ ಉಪಸ್ಥಿತರಿದ್ದರು. ತೇಜಸ್ವಿ ಕಿರಣ್ ಬಿ. ಅವರು ಸ್ವಾಗತಿಸಿ, ರಾಮಕೃಷ್ಣ ಬಿ.ಡಿ ವಂದಿಸಿದರು. ಕಾರ್ಯಕ್ರಮವನ್ನು ಕಾರಂತ ಪ್ರತಿಷ್ಠಾನದ ಕಾರ್ಯದರ್ಶಿ ನರೇಂದ್ರ ಕುಮಾರ್ ಕೋಟ ನಿರೂಪಿಸಿ, ಪರಿಮಳ ಪ್ರಕಾಶನದ ಅಧ್ಯಕ್ಷೆ ಪರಿಮಳ ರವರು ಸಂಘಟಿಸಿದರು. ಕಾರ್ಯಕ್ರಮದ ಬಳಿಕ ಕವಿ ಗೋಷ್ಠಿ, ಪುಸ್ತಕ ಬಿಡುಗಡೆ ಮತ್ತು ಗೊಂಬೆಯಾಟ ಪ್ರದರ್ಶನ ನಡೆಯಿತು.
















