ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೋಟ: ಗ್ರಾಮ ಪಂಚಾಯತ್ ಮಟ್ಟದ ಸಂಜೀವಿನಿ ಒಕ್ಕೂಟಕ್ಕೆ ಸರ್ಕಾರದಿಂದ ಬಂದಿದ್ದ ಲಕ್ಷಾಂತರ ರೂಪಾಯಿ ಅನುದಾನವನ್ನು ನಕಲಿ ಸಹಿ ಹಾಗೂ ಸೀಲು ಬಳಸಿ ಸ್ವಂತಕ್ಕೆ ಉಪಯೋಗಿಸಿಕೊಂಡು ಸುಮಾರು 33.50 ಲಕ್ಷ ರೂ. ವಂಚನೆ ಎಸಗಿದ ಆರೋಪದಡಿ ಮಹಿಳೆಯೊಬ್ಬರ ವಿರುದ್ಧ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಾರ್ದಳ್ಳಿ ಮಂಡಳ್ಳಿ ಗ್ರಾಮದ ಅಶ್ವಿನಿ (33)ಈ ಪ್ರಕರಣದ ಆರೋಪಿಯಾಗಿದ್ದಾರೆ. ಅವರು 2022 ರಿಂದ ‘ಸಮೃದ್ಧಿ ಸಂಜೀವಿನಿ’ ಹಾರ್ದಳ್ಳಿ ಮಂಡಳ್ಳಿ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟದಲ್ಲಿ ಮುಖ್ಯ ಬರಹಗಾರರಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಈ ಒಕ್ಕೂಟದ ವ್ಯಾಪ್ತಿಯಲ್ಲಿ ಒಟ್ಟು 54 ಸ್ವಸಹಾಯ ಸಂಘಗಳು ಒಳಪಟ್ಟಿದ್ದವು.
ಸರಕಾರದಿಂದ 2022 ರಿಂದ ಈ ಒಕ್ಕೂಟದ ಕೆನರಾ ಬ್ಯಾಂಕ್ ಬಿಡ್ಕಲ್ಕಟ್ಟೆ ಶಾಖೆಯ ಖಾತೆಗೆ ಒಟ್ಟು 752,50,000 ಅನುದಾನ ಬಿಡುಗಡೆಯಾಗಿತ್ತು. ಈ ಹಣವನ್ನು ಅಗತ್ಯಕ್ಕೆ ತಕ್ಕಂತೆ ವಿವಿಧ ಸ್ವಸಹಾಯ ಸಂಘಗಳಿಗೆ ನಿಯಮಾನುಸಾರ ಹಂಚಿಕೆ ಮಾಡುವ ಜವಾಬ್ದಾರಿ ಆರೋಪಿ ಅಶ್ವಿನಿ ಅವರದ್ದಾಗಿತ್ತು.
ಆದರೆ, ಆರೋಪಿತೆಯು ಸರಕಾರದ ಹಣವನ್ನು ಸ್ವಸಹಾಯ ಸಂಘಗಳಿಗೆ ಸರಿಯಾಗಿ ಹಂಚಿಕೆ ಮಾಡದೇ, ಒಕ್ಕೂಟದ ಅಧ್ಯಕ್ಷರು, ಕಾರ್ಯದರ್ಶಿ ಹಾಗೂ ಕೋಶಾಧಿಕಾರಿಯವರ ಸಹಿ ಮತ್ತು ಸೀಲನ್ನು ನಕಲಿ ಮಾಡಿದ್ದಾರೆ. ಜೊತೆಗೆ ತಾವು ಅಧ್ಯಕ್ಷರಾಗಿರುವ ‘ಮಂದಾರ ಸ್ವಸಹಾಯ ಸಂಘ’ದ ಹೆಸರಿನಲ್ಲಿ ಹಾಗೂ ಕೆಲವು ಸಂಘದ ಸದಸ್ಯರ ನಕಲಿ ಸಹಿಗಳನ್ನು ಮಾಡಿ, ಒಟ್ಟು ₹33,50,000 ಹಣವನ್ನು ತಮ್ಮ ಸ್ವಂತ ಲಾಭಕ್ಕೆ ಬಳಸಿಕೊಂಡು ಒಕ್ಕೂಟಕ್ಕೆ ಮೋಸ ಎಸಗಿದ್ದಾರೆ ಎಂದು ಆರೋಪಿಸಲಾಗಿದೆ.
ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
















