ಕುಂದಾಪ್ರ ಡಾಟ್ ಕಾಂ ಸುದ್ದಿ.
ಮೂಡುಬಿದಿರೆ: ಕೋಲಾರದ ನೀರಿನ ಕೊರತೆ ನೀಗಿಸಲು ಹೊರಗಿನಿಂದ ನೀರನ್ನು ಹರಿಸುವುದಕ್ಕಿಂತ, ಆ ಪ್ರದೇಶದಲ್ಲಿ ಬೀಳುವ ಮಳೆ ನೀರನ್ನು ಸಂರಕ್ಷಿಸಿ, ಅಂತರ್ಜಲವನ್ನು ಮರುಪೂರಣಗೊಳಿಸುವ ಸಮಗ್ರ ಜಲ ನಿರ್ವಹಣಾ ತಂತ್ರವನ್ನು ರೂಪಿಸಬೇಕು. ಹೊರಗಿನಿಂದ ನೀರನ್ನು ತರುವ ಯೋಜನೆಗಳು ಪರಿಸರ ವ್ಯವಸ್ಥೆಯಲ್ಲಿರುವ ನಮಗೆ ಗೋಚರಿಸದ ಕೊಂಡಿಗಳನ್ನು ಕಳಚುವ ಅಪಾಯವನ್ನು ಹೊಂದಿವೆ ಎಂದು ಕೃಷಿ ವಿಜ್ಞಾನಿ, ಕಾದಂಬರಿಕಾರ ಹಾಗೂ ಬೆಂಗಳೂರಿನ ಕೃಷಿ ವಿಜ್ಞಾನ ವಿಶ್ವವಿದ್ಯಾಲಯದ ಹಿರಿಯ ವಿಜ್ಞಾನಿ ಡಾ. ಕೆ.ಎನ್. ಗಣೇಶಯ್ಯ ಹೇಳಿದರು.

ಅವರು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ರೋಸ್ಟçಮ್ ವೇದಿಕೆಯವತಿಯಿಂದ ಮಂಗಳವಾರ ಡಾ. ವಿ.ಎಸ್. ಆಚಾರ್ಯ ಸಭಾಂಗಣದಲ್ಲಿ ಆಯೋಜಿಸಿದ್ದ ‘ಪ್ರಕೃತಿಯ ಅದೃಶ್ಯ ಕೊಂಡಿಗಳು: ಪರಿಸರ ವ್ಯವಸ್ಥೆಯ ನಿಯಂತ್ರಣ ಸೂತ್ರಗಳು’ ವಿಷಯದ ಕುರಿತು ಅವರು ಮಾತನಾಡಿದರು. “ಇದನ್ನು ನಾನು ವಿವಾದವಾಗಿ ನೋಡುವುದಿಲ್ಲ. ಬಹಳ ಹಿಂದಿನಿಂದಲೂ ಈ ವಿಚಾರವನ್ನು ಹೇಳುತ್ತಾ ಬಂದಿದ್ದೇನೆ. 2014ರಲ್ಲಿ ಕೋಲಾರದಲ್ಲಿ ನಡೆದ ಸಾಹಿತ್ಯ ಕಾರ್ಯಕ್ರಮವೊಂದರ ಅಧ್ಯಕ್ಷನಾಗಿದ್ದಾಗಲೂ ನಮ್ಮ ಜನರಿಗೆ ಹೊರಗಿನಿಂದ ಬರುವ ನೀರಿನ ಮೇಲೆ ಅವಲಂಬಿತರಾಗಬೇಡಿ ಎಂದು ಸ್ಪಷ್ಟವಾಗಿ ತಿಳಿಸಿದ್ದೆ. ನಮ್ಮ ತಲೆಯ ಮೇಲೆ ಬೀಳುವ ನೀರೇ ನಮ್ಮದು. ಅದನ್ನು ಸಂರಕ್ಷಿಸುವ ತಂತ್ರವನ್ನು ರೂಪಿಸಿಕೊಳ್ಳಬೇಕು. ನಮ್ಮದೇ ನೀರಿನ ಮೂಲಗಳನ್ನು ರಕ್ಷಿಸಿಕೊಂಡು, ಅವು ಮುಂದಿನ ಪೀಳಿಗೆಯ ಬದುಕಿಗೂ ಆಸರೆಯಾಗುವಂತೆ ನೋಡಿಕೊಳ್ಳುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದರು.
ನೀರಿನ ವ್ಯವಸ್ಥೆ ಕೇವಲ ಕಣ್ಣಿಗೆ ಕಾಣುವ ನದಿಗಳು, ಕೆರೆಗಳು ಮತ್ತು ಜಲಾಶಯಗಳಿಗೆ ಸೀಮಿತವಾಗಿಲ್ಲ. ಪ್ರಕೃತಿಯಲ್ಲಿ ಅನೇಕ ಸೂಕ್ಷ್ಮ ಹಾಗೂ ಅದೃಶ್ಯ ಪ್ರಕ್ರಿಯೆಗಳು ಪರಸ್ಪರ ಬೆಸೆದುಕೊಂಡಿವೆ. ಅವುಗಳಲ್ಲಿ ಒಂದನ್ನು ಬದಲಾಯಿಸಿದರೂ ಅದರ ಪರಿಣಾಮ ಮತ್ತೊಂದು ಭಾಗದಲ್ಲಿ ಗೋಚರಿಸಬಹುದು. ತಕ್ಷಣದ ಸಮಸ್ಯೆಗೆ ಪರಿಹಾರವೆಂದು ಕಾಣುವ ಮಾನವ ನಿರ್ಮಿತ ಯೋಜನೆಗಳು ದೀರ್ಘಾವಧಿಯಲ್ಲಿ ಅನಿರೀಕ್ಷಿತ ಪರಿಸರ ಪರಿಣಾಮಗಳನ್ನು ಉಂಟುಮಾಡಬಹುದು ಎಂದು ಅವರು ಎಚ್ಚರಿಸಿದರು.
ಶಾಪವಲ್ಲ, ಪರಿಸರ ದುರಂತ:
ಪ್ರಕೃತಿಯ ಅದೃಶ್ಯ ಕೊಂಡಿಗಳ ಪರಿಣಾಮವನ್ನು ವಿವರಿಸಲು ತಲಕಾಡಿನ ಮರಳುಗಾಡಿನ ಉದಾಹರಣೆಯನ್ನು ನೀಡಿದ ಡಾ. ಗಣೇಶಯ್ಯ, ತಲಕಾಡು ಮರಳಿನಿಂದ ಆವೃತವಾಗಿರುವುದನ್ನು ಸಾಂಪ್ರದಾಯಿಕವಾಗಿ ಆಲಮೇಲಮ್ಮನ ಶಾಪಕ್ಕೆ ತಳುಕು ಹಾಕಲಾಗುತ್ತದೆ. ಆದರೆ ವೈಜ್ಞಾನಿಕ ಅಧ್ಯಯನಗಳು ತಲಕಾಡಿನಲ್ಲಿ ಮರಳು ಸಂಗ್ರಹವಾಗುವ ಪ್ರಕ್ರಿಯೆ ಸುಮಾರು ಕ್ರಿ.ಶ. 1400ರ ವೇಳೆಯೇ ಆರಂಭವಾಗಿತ್ತು ಎಂಬುದನ್ನು ಸೂಚಿಸುತ್ತವೆ. ಇನ್ನೂ 1610ರಲ್ಲಿ ಸಂಭವಿಸಿತು ಎನ್ನಲಾಗುವ ಆಲಮೇಲಮ್ಮನ ಶಾಪದ ಘಟನೆಗಿಂತ ಸುಮಾರು ಎರಡು ಶತಮಾನಗಳ ಹಿಂದಿನದು ಎಂದು ತಿಳಿಸಿದರು.
ವಿಜಯನಗರ ಕಾಲದಲ್ಲಿ ಕಾವೇರಿ ನದಿಗೆ ಅಡ್ಡಲಾಗಿ ನಿರ್ಮಿಸಲಾದ ಅಣೆಕಟ್ಟಿನಿಂದ ನದಿಯ ಸ್ವಾಭಾವಿಕ ಹರಿವಿನಲ್ಲಿ ಬದಲಾವಣೆಯಾಗಿ, ನದಿಯ ದಡಗಳಲ್ಲಿ ಮರಳು ತೆರೆದುಕೊಂಡಿತು. ಬಳಿಕ ನೈಋತ್ಯದಿಂದ ಈಶಾನ್ಯಕ್ಕೆ ಬೀಸಿದ ಗಾಳಿಯು ಸೂಕ್ಷ್ಮ ಮರಳಿನ ಕಣಗಳನ್ನು ತಲಕಾಡಿನತ್ತ ಸಾಗಿಸಿತು. ನದಿಯಿಂದ ತಲಕಾಡಿನವರೆಗೆ ಸಂಗ್ರಹಿಸಿದ ಮರಳಿನ ಮಾದರಿಗಳ ಅಧ್ಯಯನದಲ್ಲಿ ತಲಕಾಡಿನಲ್ಲಿ ಸೂಕ್ಷ್ಮ ಮರಳಿನ ಪ್ರಮಾಣ ಹೆಚ್ಚಿರುವುದು ಕಂಡುಬಂದಿದ್ದು, ಈ ಪ್ರಕ್ರಿಯೆಗೆ ಅದು ಪೂರಕ ಸಾಕ್ಷ್ಯವಾಗಿದೆ ಎಂದು ಅವರು ವಿವರಿಸಿದರು. ತಲಕಾಡಿನ ಪರಿವರ್ತನೆ ಶಾಪದ ಪರಿಣಾಮವಲ್ಲ; ಮಾನವನ ಹಸ್ತಕ್ಷೇಪದಿಂದ ಉಂಟಾದ ಪರಿಸರ ದುರಂತ, ಎಂದು ತಿಳಿಸಿದರು. ತಲಕಾಡಿನಲ್ಲಿ ಮರಳಿನ ಚಲನೆಯ ಸಮಸ್ಯೆಯನ್ನು ಗುರುತಿಸಿದ ಸರ್ ಎಂ. ವಿಶ್ವೇಶ್ವರಯ್ಯನವರು 1940ರ ಸುಮಾರಿಗೆ ಹಸಿರು ತಡೆಗೋಡೆಯನ್ನು ನಿರ್ಮಿಸುವ ಮೂಲಕ ಮರಳಿನ ಮತ್ತಷ್ಟು ಚಲನೆಯನ್ನು ತಡೆಯುವ ಕ್ರಮ ಕೈಗೊಂಡಿದ್ದರು ಎಂದು ಅವರು ತಿಳಿಸಿದರು.
ನಮ್ಮ ಬದುಕಿಗೆ ಆಧಾರವಾಗಿರುವ ಎಷ್ಟು ಬಿದಿರಿನ ಪಟ್ಟಿಗಳಿವೆ ಎಂಬುದು ನಮಗೆ ತಿಳಿದಿಲ್ಲ:
ಸೈಬೀರಿಯಾದಲ್ಲಿ ತೀವ್ರ ಚಳಿಗೆ ಸಿಲುಕಿದ ಚಾರಣಿಗನ ಕಥೆಯನ್ನು ಉಲ್ಲೇಖಿಸಿದ ಡಾ. ಗಣೇಶಯ್ಯ, ಸಣ್ಣದಾಗಿ ಕಾಣುವ ಮಾನವನ ಕ್ರಮಗಳು ಹೇಗೆ ಸರಣಿ ಪರಿಣಾಮಗಳನ್ನು ಉಂಟುಮಾಡಬಹುದು ಎಂಬುದನ್ನು ವಿವರಿಸಿದರು. ತೀವ್ರ ಚಳಿಯನ್ನು ತಡೆಯಲು ಚಾರಣಿಗನು ತನ್ನ ಗುಡಿಸಲಿನ ಬಿದಿರಿನ ಪಟ್ಟಿಗಳನ್ನು ಒಂದೊಂದಾಗಿ ತೆಗೆದು ಬೆಂಕಿಗೆ ಉರುವಲಾಗಿ ಬಳಸುತ್ತಾನೆ. ಕೊನೆಗೆ ಇಡೀ ಗುಡಿಸಲು ನಾಶವಾಗಿ, ಆತ ತೀವ್ರ ಚಳಿಗೆ ನೇರವಾಗಿ ಸಿಲುಕಿಕೊಳ್ಳುತ್ತಾನೆ. ಇದೇ ರೀತಿ ಪ್ರಕೃತಿಯಲ್ಲಿಯೂ ನಮ್ಮ ಬದುಕಿಗೆ ಆಧಾರವಾಗಿರುವ ಹಲವು ‘ಬಿದಿರಿನ ಪಟ್ಟಿಗಳು’ ನಮಗೆ ಗೋಚರಿಸದೆ ಇರಬಹುದು ಎಂದು ಹೇಳಿದರು. ನಾವೆಲ್ಲರೂ ಬದುಕಲು ಆಧಾರಸ್ತಂಭಗಳಾಗಿ ಇಂತಹ ಎಷ್ಟು ಬಿದಿರಿನ ಪಟ್ಟಿಗಳು ನಮ್ಮ ಸುತ್ತಲೂ ಇವೆ ಎಂಬುದು ನಮಗೆ ತಿಳಿದಿಲ್ಲ ಎಂದರು.
ಪರಿಸರ ವ್ಯವಸ್ಥೆಗೆ ಹಾನಿಯಾದ ಬಳಿಕ ಅದನ್ನು ಪುನಃಸ್ಥಾಪಿಸಲು ಪ್ರಯತ್ನಿಸುವುದಕ್ಕಿಂತ, ಈಗಿರುವ ಪರಿಸರ ವ್ಯವಸ್ಥೆಯನ್ನು ಮುಂದಿನ ಪೀಳಿಗೆಗೆ ಹಾನಿಯಾಗದಂತೆ ಹಸ್ತಾಂತರಿಸುವುದು ಅತ್ಯುತ್ತಮ ಮಾರ್ಗ ಎಂದು ಅವರು ಹೇಳಿದರು.
‘ಅಭಿವೃದ್ಧಿ ಬೇಕು, ಆದರೆ ಪರಿಸರದ ಕೆಲವು ಭಾಗ ಅಭಿವೃದ್ಧಿಯಿಂದ ಮುಕ್ತವಾಗಿರಲಿ’
ಮಾಧವ ಗಾಡ್ಗಿಲ್ ವರದಿ ಹಾಗೂ ಕಸ್ತೂರಿರಂಗನ್ ವರದಿಗಳ ಕುರಿತು ಪ್ರೇಕ್ಷಕರೊಬ್ಬರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಡಾ. ಗಣೇಶಯ್ಯ, ಗಾಡ್ಗಿಲ್ ಸಮಿತಿಯ ಉದ್ದೇಶ ಅಭಿವೃದ್ಧಿಯನ್ನು ವಿರೋಧಿಸುವುದಾಗಿರಲಿಲ್ಲ; ಪಶ್ಚಿಮ ಘಟ್ಟದ ಕನಿಷ್ಠ ಕೆಲವು ಅತ್ಯಂತ ಸೂಕ್ಷ್ಮ ಪರಿಸರ ಪ್ರದೇಶಗಳನ್ನು ಅಭಿವೃದ್ಧಿಯಿಂದ ಮುಕ್ತವಾಗಿಡುವುದಾಗಿತ್ತು.
ಗಾಡ್ಗಿಲ್ ಸಮಿತಿಯೊಂದಿಗೆ ತಾವು ಸಹ ಕಾರ್ಯನಿರ್ವಹಿಸಿದ್ದಾಗಿ ತಿಳಿಸಿದ ಅವರು, ವರದಿ ಪ್ರಕಟವಾದ ಬಳಿಕ ಸಮಿತಿ ಸದಸ್ಯರು ಹಲವು ರೀತಿಯ ಪ್ರತಿಭಟನೆ, ಟೀಕೆ ಹಾಗೂ ವಿರೋಧವನ್ನು ಎದುರಿಸಬೇಕಾಯಿತು ಎಂದು ಹೇಳಿದರು.ಗಾಡ್ಗಿಲ್ ವರದಿಯ ಪರವಾಗಿ ಮಾತನಾಡಿದ್ದಕ್ಕಾಗಿ ತಮ್ಮನ್ನು ಕೆಲವರು ‘ಸಿಎಎ ಏಜೆಂಟ್’ ಹಾಗೂ ‘ದೇಶದ್ರೋಹಿ’ ಎಂದೂ ಆರೋಪಿಸಿದ್ದರು ಎಂದು ಅವರು ನೆನಪಿಸಿಕೊಂಡರು.
ಪರಿಸರ ಸಂರಕ್ಷಣೆಗಾಗಿ ಕಾರ್ಯನಿರ್ವಹಿಸುವ ಸಂಸ್ಥೆಯೊಂದಿಗಿನ ತಮ್ಮ ಒಡನಾಟ ಹಾಗೂ ಆ ಸಂಸ್ಥೆಗೆ ವಿದೇಶದಿಂದ ದೊರೆಯುತ್ತಿದ್ದ ಅನುದಾನವನ್ನೂ ತಮ್ಮ ನಿಲುವುಗಳನ್ನು ಪ್ರಶ್ನಿಸಲು ಬಳಸಿಕೊಳ್ಳಲಾಗಿತ್ತು ಎಂದು ಅವರು ಹೇಳಿದರು.
ಅಭಿವೃದ್ಧಿ ಮತ್ತು ಪರಿಸರ ಸಂರಕ್ಷಣೆಯನ್ನು ಪರಸ್ಪರ ವಿರುದ್ಧವಾದ ಸಂಗತಿಗಳಾಗಿ ನೋಡುವ ಬದಲು, ಸಂಗಾತಿಗಳಾಗಿ ಪರಿಗಣಿಸಿ, ಸಮಾಜದ ದೀರ್ಘಕಾಲೀನ ಅಗತ್ಯಗಳನ್ನು ಪೂರೈಸುವ ರೀತಿಯಲ್ಲಿ ಎರಡರ ನಡುವೆ ಸಮತೋಲನ ಸಾಧಿಸುವುದು ಅಗತ್ಯ. ಪಶ್ಚಿಮ ಘಟ್ಟದಂತಹ ಸೂಕ್ಷ್ಮ ಪರಿಸರ ವ್ಯವಸ್ಥೆಗಳನ್ನು ರಕ್ಷಿಸುವುದು ಕೇವಲ ಪರಿಸರದ ಪ್ರಶ್ನೆಯಲ್ಲ; ಅದು ಭವಿಷ್ಯದ ಪೀಳಿಗೆಯ ಜೀವನ ಮತ್ತು ನೀರಿನ ಭದ್ರತೆಯ ಪ್ರಶ್ನೆಯೂ ಆಗಿದೆ ಎಂದರು.
ಕರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಟ್ರಸ್ಟಿ ವಿವೇಕ ಆಳ್ವ, ಸ್ವಚ್ಛತೆ ಎಂಬುದು ಕೇವಲ ನಮ್ಮ ಸುತ್ತಮುತ್ತಲಿನ ಪರಿಸರವನ್ನು ಶುಚಿಯಾಗಿಡುವುದರಿಂದ ಮಾತ್ರ ಸಾಧ್ಯವಲ್ಲ; ನಿಜವಾದ ಸ್ವಚ್ಛತೆ ನಮ್ಮ ಮನಸ್ಸಿನಲ್ಲಿ ಆರಂಭವಾಗಬೇಕು. ಸ್ವಚ್ಛತೆಯ ಅರಿವು ವ್ಯಕ್ತಿಯ ಮನಸ್ಸಿನಿಂದ ಆರಂಭವಾದಾಗ ಮಾತ್ರ ಅದು ಸಮಾಜದ ಸಾಮೂಹಿಕ ಅಭ್ಯಾಸವಾಗಿ ರೂಪುಗೊಳ್ಳುತ್ತದೆ. ಯುವಜನರು ಹೊರಗಿನ ಜಗತ್ತನ್ನು ಪ್ರಶ್ನಿಸುವುದರ ಜೊತೆಗೆ ತಮ್ಮೊಳಗೂ ಪ್ರಶ್ನೆಗಳನ್ನು ಕೇಳಿಕೊಳ್ಳಬೇಕು. ನಮ್ಮೊಳಗಿನ ಕುತೂಹಲವನ್ನು ಜೀವಂತವಾಗಿಟ್ಟುಕೊಳ್ಳುವುದು, ನಮ್ಮ ಆಲೋಚನೆಗಳನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ಮತ್ತು ನಮ್ಮ ಕ್ರಿಯೆಗಳಿಗೆ ಜವಾಬ್ದಾರಿ ವಹಿಸುವುದು ಉತ್ತಮ ಸಮಾಜ ನಿರ್ಮಾಣಕ್ಕೆ ಅಗತ್ಯ ಎಂದು ಹೇಳಿದರು.
ಕರ್ಯಕ್ರಮದಲ್ಲಿ ರೋಸ್ಟçಮ್ ಸ್ಪೀರ್ಸ್ ಕ್ಲಬ್ನ ಅಧ್ಯಕ್ಷೆ ಡಾ. ದೀಪಾ ಕೊಠಾರಿ, ಕರ್ಯಕ್ರಮ ನಿರ್ದೇಶಕಿ ಡಾ. ರುಚಿಕಾ ರೋಶನ್, ಬೆಂಗಳೂರಿನ ಕೃಷಿ ವಿಜ್ಞಾನ ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕ ಕೆವಿ ಶಂಕರ್ ಇದ್ದರು. ಯೋಗೇಶ್ವರ ಕರ್ಯಕ್ರಮ ನಿರೂಪಿಸಿ, ಖ್ಯಾತಿ ವಂದಿಸಿದರು.
















