ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ತಾಲೂಕಿನ ಗಂಗೊಳ್ಳಿ ಸಮುದ್ರ ತೀರದ ಬಳಿ ಮೀನುಗಾರಿಕೆಗೆ ತೆರಳಿದ್ದ ಪರ್ಸೀನ್ ಬೋಟ್ ಅಲೆಗಳ ಹೊಡೆತದಿಂದಾಗಿ ಬಿರುಕು ಬಿಟ್ಟು, ಮುಳುಗುವ ಪರಿಸ್ಥಿತಿ ನಿರ್ಮಾಣವಾದ ಘಟನೆ ನಡೆದಿದೆ. ಕರಾವಳಿ ಕಾವಲು ಪಡೆ ಮತ್ತು ಮೀನುಗಾರರ ಸಮಯೋಚಿತ ಕಾರ್ಯಾಚರಣೆಯಿಂದ ಬೋಟ್ನಲ್ಲಿದ್ದ 27 ಮಂದಿ ಮೀನುಗಾರರನ್ನು ಸುರಕ್ಷಿತವಾಗಿ ರಕ್ಷಿಸಲಾಗಿದೆ.


ಗಂಗೊಳ್ಳಿಯಿಂದ ಸುಮಾರು 3 ನಾಟಿಕಲ್ ಮೈಲಿ ದೂರದಲ್ಲಿ ಮೀನುಗಾರಿಕೆ ನಡೆಸುತ್ತಿದ್ದ ಶ್ರೀ ಬಾಲಾಂಜನೇಯ ಬೋಟ್ ಮಧ್ಯಾಹ್ನ 03:30ರ ವೇಳೆಗೆ ಭಾರೀ ಅಲೆಗಳ ಹೊಡೆತದಿಂದ ಬೋಟ್ಗೆ ಬಿರುಕು ಕಾಣಿಸಿಕೊಂಡಿದೆ. ಇದರಿಂದ ಬೋಟ್ಗೆ ನೀರು ನುಗ್ಗಿ ನಿಧಾನವಾಗಿ ಮುಳುಗಲು ಆರಂಭಿಸಿದೆ.
ಘಟನೆಯ ಮಾಹಿತಿ ದೊರೆಯುತ್ತಿದ್ದಂತೆ ಕರಾವಳಿ ಕಾವಲು ಪಡೆ ತಕ್ಷಣ ಕಾರ್ಯಪ್ರವೃತ್ತವಾಗಿದ್ದು, ಕರಾವಳಿ ಮೀಸಲು ಪಡೆಯ ಇನ್ಸ್ಪೆಕ್ಟರ್ ರಮೇಶ್ ಕೆ. ಅವರ ನೇತೃತ್ವದಲ್ಲಿ ಪಿಎಸೈ ಸುಬ್ರಹ್ಮಣ್ಯ ಹಾಗೂ ಸಿಬ್ಬಂದಿಗಳಾದ ಯುವರಾಜ,ರಾಘವೇಂದ್ರ, ರಮೇಶ, ನಾಗರಾಜ ಖಾರ್ವಿ, ನಾಗೇಶ್ ಖಾರ್ವಿ, ಕಿರಣ್ ಮತ್ತು ಕೆ.ಎನ್.ಡಿ ಸದಸ್ಯರಾದ ಸಂತೋಷ ಖಾರ್ಷಿ ಹಾಗೂ ಸಂದೇಶ್ ಅವರೊಂದಿಗೆ ಮತ್ಸ್ಯಾಮೃತ ಹಾಗೂ ಸುಮುಖ ಎಂಬ ಹೆಸರಿನ ಮೀನುಗಾರಿಕಾ ಬೋಟ್ ಮೂಲಕ ತೆರಳಿ ರಕ್ಷಣಾ ಕಾರ್ಯಾಚರಣೆ ಕೈಗೊಳ್ಳಲಾಗಿದೆ.
ಸ್ಥಳೀಯ ಮೀನುಗಾರರ ಸಹಕಾರದೊಂದಿಗೆ ನಡೆಸಿದ ಕಾರ್ಯಾಚರಣೆಯಲ್ಲಿ ಬೋಟ್ನಲ್ಲಿದ್ದ 27 ಮಂದಿ ಮೀನುಗಾರರನ್ನು ಸುರಕ್ಷಿತವಾಗಿ ರಕ್ಷಿಸಿ ತೀರ ಪ್ರದೇಶಕ್ಕೆ ಕರೆತರಲಾಯಿತು. ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂದು ತಿಳಿದುಬಂದಿದೆ. ಸ್ಥಳೀಯರಾದ ಅಭಿ ಆರ್ಕಟಿ, ಸಂದೇಶ, ರಾಮಚಂದ್ರ ಖಾರ್ವಿ, ಜಯಂತ, ನಾರಾಯಣ ಖಾರ್ವಿ ಉಪ್ಪುಂದ, ಚಂದ್ರಶೇಖರ ಖಾರ್ವಿ, ಚೇತನ್ ಶಿಪಾಯಿ ಮತ್ತು ಶೇಖರ ಕುಂದರ್ ಸಹಕರಿಸಿದ್ದಾರೆ.
ಘಟನೆಯಲ್ಲಿ ಬೋಟ್ ಸಂಪೂರ್ಣ ಮುಳುಗಡೆಯಾಗಿದ್ದು, ಲಕ್ಷಾಂತರ ರೂ. ನಷ್ಟ ಸಂಭವಿಸಿದೆ.
















