ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ತಾಲೂಕಿನ ಬೀಜಾಡಿಯ ನಿವಾಸಿ ಹರೀಶ್ ಪೂಜಾರಿ ಕಳೆದ 2019ರಲ್ಲಿ ತೆಂಗಿನ ಮರದಿಂದ ಬಿದ್ದು ಸೊಂಟದ ಕೆಳಭಾಗ ಸ್ವಾಧೀನ ಕಳೆದುಕೊಂಡು ಅಸಾಯ ಸ್ಥಿತಿಯಲ್ಲಿ ಜೀವನ ಸಾಗಿಸುತ್ತಿದ್ದಾರೆ. ಆದರೆ ಈತ 2019ರಲ್ಲಿ ಮರದಿಂದ ಬೀಳುವ ಮುನ್ನವೇ ಕೋಟ ಸಹಕಾರಿ ವ್ಯವಸಾಯಕ ಸಂಘದಲ್ಲಿ 25ಸಾವಿರ ತುರ್ತು ಸಾಲ ಪಡೆದು ಕಟ್ಟಲಾಗದೆ ಅಸಾಯಕರಾಗಿ ಹಲವರ ಮೊರೆಹೋಗಿದ್ದಾರೆ.

ಆತನ ಸಾಲಕ್ಕೆ ಹೆಗಲು ಕೊಡುವವರು ಯಾರೂ ಇಲ್ಲದ ಹಿನ್ನಲೆಯಲ್ಲಿ ಕೋಟದ ಪಂಚವರ್ಣ ಸಂಘಟನೆ ಮಾಹಿತಿ ಲಭಿಸಿದ್ದು ಇಲ್ಲಿನ ವಂಡಾರು ಶ್ರೀ ಕೃಷ್ಣಪ್ರಸಾದ್ ಫೌಂಡೇಶನ್ ಮುಖ್ಯಸ್ಥ ಸಂಪತ್ ಕುಮಾರ್ ಶೆಟ್ಟಿ ಬಳಿ ಈ ಸಮಸ್ಯೆಯ ಬಗ್ಗೆ ಮಾಹಿತಿ ನೀಡಿ ಸಾಲ ಮರುಪಾವತಿಗಾಗಿ ಮೊರೆಇಟ್ಟರು.
ಈ ದಿಸೆಯಲ್ಲಿ ಸಂಪತ್ ಕುಮಾರ್ ಶೆಟ್ಟಿ ಇವರ ನಿರ್ದೇಶನದ ಮೇರೆಗೆ ಶ್ರೀ ಕೃಷ್ಣ ಪ್ರಸಾದ್ ಫೌಂಡೇಶನ್ ಆತನ ಸಾಲಕ್ಕೆ ಮುಕ್ತಿಗಾಣಿಸಲು ಚಿಂತಿಸಿ ಗುರುವಾರ ತನ್ನ ಸಂಸ್ಥೆಯ ಪ್ರಮುಖರನ್ನು ಆತನ ಮನೆಗೆ ಕಳಹಿಸಿ ನೇರವಾಗಿ ಬ್ಯಾಂಕ್ ಪ್ರಭಂಧಕ ಅಜಿತ್ ಶೆಟ್ಟಿ ಅವರಿಗೆ 25 ಸಾವಿರ ಚೆಕ್ ಹಸ್ತಾಂತರಿಸಿ ಮಾನವೀಯತೆ ಮೆರೆದಿದ್ದಾರೆ.
ಪ್ರಸ್ತುತ ಕಾಲಘಟ್ಟದಲ್ಲಿ ಈ ರೀತಿ ಅಶಕ್ತ ಕುಟುಂಬಗಳಿಗೆ ಸಹಾಯಹಸ್ತ ಚಾಚುವ ವ್ಯಕ್ತಿಗಳು ಬಲು ಅಪರೂಪ ಎಂಬಂತೆ ಶ್ರೀ ಕೃಷ್ಣ ಪ್ರಸಾದ್ ಫೌಂಡೇಶನ್ ಸೇವಾ ಸಂಕಲ್ಪದ ಮೂಲಕ ಸುಮಾರು ಒಂದು ಕೋಟಿ ರೂಗಳ ನೆರವನ್ನು ಇತ್ತೀಚಿಗೆ ಶೈಕ್ಷಣಿಕ ಹಾಗೂ ಅನಾರೋಗ್ಯ ಪೀಡಿತರಿಗೆ ನೆರವು ನೀಡುವ ಮೂಲಕ ಸಮಾಜಕ್ಕೆ ಮಾದರಿ ಕಾರ್ಯವನ್ನು ಮಾಡಿದೆ.
ಚಕ್ ಹಸ್ತಾಂತರ ಸಂದರ್ಭದಲ್ಲಿ ಶ್ರೀ ಕೃಷ್ಣಪ್ರಸಾದ್ ಫೌಂಡೇಶನ್ ನಿರ್ವಾಹಕ ಚಂದ್ರಶೇಖರ ಸೇರಿದಂತೆ ಸಂಸ್ಥೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.
















