ಕುಂದಾಪ್ರ ಡಾಟ್ ಕಾಂ ಸುದ್ದಿ.
ಮೂಡುಬಿದಿರೆ:ಭಾಷೆಯೊಂದು ಕೇವಲ ಸಂವಹನದ ಮಾಧ್ಯಮವಲ್ಲ. ಅದು ಸಮುದಾಯವೊಂದರ ಇತಿಹಾಸ, ಅನುಭವ, ಭಾವನೆ, ಸಂಸ್ಕೃತಿ ಹಾಗೂ ಅಸ್ಮಿತೆಯನ್ನು ಪ್ರತಿಬಿಂಬಿಸುತ್ತದೆ. ಯಾವುದೇ ಭಾಷೆ ಮತ್ತೊಂದು ಭಾಷೆಗಿಂತ ಶ್ರೇಷ್ಠವಲ್ಲ. ಎಲ್ಲಾ ಭಾಷೆಗಳಿಗೂ ತನ್ನದೇ ಆದ ಮಹತ್ವ ಹಾಗೂ ವೈಶಿಷ್ಟ್ಯವಿದೆ ಎಂದು ಆಳ್ವಾಸ್ ಪಿಸಿಯೋಥೆರಪಿ ಕಾಲೇಜಿನ ನರವಿಜ್ಞಾನ ವಿಭಾಗದ ಮುಖ್ಯಸ್ಥೆ ಡಾ. ಲೋಯಂಗನ್ಬಿ ಚಾನು ನುಡಿದರು.

ಆಳ್ವಾಸ್ ಕಾಲೇಜಿನ ಮಣಿಪುರಿ ವಿಭಾಗದವತಿಯಿಂದ ಕಾಲೇಜಿನ ಸಭಾಂಗಣದಲ್ಲಿ ಶನಿವಾರ ಮಣಿಪುರಿ ಭಾಷಾ ದಿನವನ್ನು ಆಚರಿಸಲಾಯಿತು.
ವಿದ್ಯಾರ್ಥಿಗಳು ವಿವಿಧ ಭಾಷೆಗಳನ್ನು ಕಲಿಯುವ ಮೂಲಕ ವಿಭಿನ್ನ ಸಮುದಾಯಗಳ ಸಂಸ್ಕೃತಿ ಮತ್ತು ಜೀವನಾನುಭವಗಳನ್ನು ಅರ್ಥಮಾಡಿಕೊಳ್ಳಬೇಕು. ಬಹುಭಾಷಾ ಜ್ಞಾನವು ಪರಸ್ಪರ ತಿಳುವಳಿಕೆಯನ್ನು ವಿಸ್ತರಿಸುವುದರೊಂದಿಗೆ ವಿವಿಧ ಸಮುದಾಯಗಳ ನಡುವೆ ಉತ್ತಮ ಬಾಂಧವ್ಯ ಬೆಳೆಸಲು ಸಹಕಾರಿಯಾಗುತ್ತದೆ. ವ್ಯಕ್ತಿಯ ಭಾಷೆ, ಸಂಸ್ಕೃತಿ, ಧರ್ಮ ಅಥವಾ ಮೂಲಸ್ಥಳದ ಆಧಾರದ ಮೇಲೆ ಭೇದಭಾವ ಮಾಡದೆ ಎಲ್ಲರನ್ನೂ ಗೌರವಿಸಬೇಕು. ದ್ವೇಷ ಮತ್ತು ಸಂಘರ್ಷಕ್ಕಿಂತ ಸಹಕಾರ ಹಾಗೂ ಸೌಹಾರ್ದತೆಗೆ ಆದ್ಯತೆ ನೀಡಬೇಕು ಎಂದರು.
ಕರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿದ ಆಳ್ವಾಸ್ ಕಾಲೇಜಿನ ಪ್ರಾಚರ್ಯ ಡಾ. ಕುರಿಯನ್, ಮಾತೃಭಾಷೆಯನ್ನು ಸಂರಕ್ಷಿಸುವುದು ಎಂದರೆ ಆ ಭಾಷೆಯೊಂದಿಗೆ ಬೆಸೆದುಕೊಂಡಿರುವ ಜನರ ಇತಿಹಾಸ, ಸಂಸ್ಕೃತಿ ಹಾಗೂ ಅಸ್ಮಿತೆಯನ್ನು ಸಂರಕ್ಷಿಸುವುದಾಗಿದೆ. ವಿಶೇಷವಾಗಿ ಯುವ ಪೀಳಿಗೆಯವರು ತಮ್ಮ ಮಾತೃಭಾಷೆಯಲ್ಲಿ ನಿಯಮಿತವಾಗಿ ಸಂವಹನ ನಡೆಸುವುದು ಭಾಷೆಯ ಜೀವಂತಿಕೆಯನ್ನು ಕಾಪಾಡುವಲ್ಲಿ ಸಹಕಾರಿ ಎಂದರು.
ಬಳಿಕ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ನಂತರ ಮನರಂಜನಾ ಕಾರ್ಯಕ್ರಮಗಳು ಹಾಗೂ ವಿವಿಧ ಆಟೋಟ ಚಟುವಟಿಕೆಗಳು ನಡೆದವು.
ವಿಭಾಗದ ಮುಖ್ಯಸ್ಥೆ ಚುಂಗ್ಕಮ್ ಪ್ರಿಯಾದೇವಿ, ಇಂಗ್ಲೀಷ್ ಭಾಷೆಯಿಂದ ಮಣಿಪುರಿ ಭಾಷೆ ಅನುವಾದಿಸಿದ ‘ಬೆಡ್ ಟೈಮ್ ಸ್ಟೋರಿಸ್’ ಪುಸ್ತಕವನ್ನು ಇದೆ ಸಂದರ್ಭದಲ್ಲಿ ಬಿಡುಗಡೆಗೊಳಿಸಲಾಯಿತು.
ಆಳ್ವಾಸ್ ಕಾಲೇಜಿನ ಮಣಿಪುರಿ ವಿಭಾಗವು 2010 ಪ್ರಾರಂಭವಾಗಿದ್ದು, ಮಂಗಳೂರು ವಿವಿಗೆ ಒಳಪಟ್ಟ ಕಾಲೇಜುಗಳ ಪೈಕಿ ಆಳ್ವಾಸ್ನ ಮಣಿಪುರಿ ವಿಭಾಗವು ಮಣಿಪುರಿ ಭಾಷೆಯನ್ನು ಕಲಿಸುವ ಏಕೈಕ ಅಧಿಕೃತ ವಿಭಾಗವಾಗಿದೆ. ವಿಭಾಗದ ಮುಖ್ಯಸ್ಥೆ ಚುಂಗ್ಕಮ್ ಪ್ರಿಯಾದೇವಿ ಇದ್ದರು. ವಿದ್ಯಾರ್ಥಿನಿ ಮೇವೆ ತಂಗ್ಜ್ಯಾಮ್ ಕರ್ಯಕ್ರಮ ನಿರೂಪಿಸಿ, ವಂದಿಸಿದರು.
















