ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೊಲ್ಲೂರು: ನಕಲಿ ವೆಬ್ಸೈಟ್ ಮೂಲಕ ಆನ್ಲೈನ್ನಲ್ಲಿ ಕೊಠಡಿ ಕಾಯ್ದಿರಿಸುವುದಾಗಿ ಹೇಳಿ ಕೇರಳದ ಮೂಲದ ಭಕ್ತರಿಗೆ ಮೋಸ ಮಾಡಿದ ಬಗ್ಗೆ ಕೊಲ್ಲೂರು ಠಾಣೆಯಲ್ಲಿ ದೂರು ದಾಖಲಾಗಿದೆ.
ಕೇರಳದ ಭಕ್ತರೋರ್ವರು ನಕಲಿ ವೆಬ್ಸೈಟ್ ನಂಬಿ ಆನ್ಲೈನ್ನಲ್ಲಿ ಮುಂಗಡ ಕೊಠಡಿ ಕಾಯ್ದುಕೊಳ್ಳಲು 1500 ರೂ. ನೀಡಿದ್ದರು. ಅದರಂತೆ ಸೆ.7 ರಂದು ಕೊಲ್ಲೂರಿಗೆ ಆಗಮಿಸಿದ್ದ ಅವರು ಆ ವಸತಿ ಗೃಹದ ಸಿಬ್ಬಂದಿಯನ್ನು ವಿಚಾರಿಸಿ ರಶೀದಿ ತೋರಿಸಿದಾಗ ಅದು ನಕಲಿ ವೆಬ್ಸೈಟ್ ಅನ್ನುವುದು ಬೆಳಕಿಗೆ ಬಂತು. ಮೋಸ ಹೋದ ಭಕ್ತರು ದೇಗುಲದ ಕಾರ್ಯನಿರ್ವಹಣಾಧಿಕಾರಿ ಪ್ರಶಾಂತ್ ಕುಮಾರ್ ಶೆಟ್ಟಿ ಅವರನ್ನು ಸಂಪರ್ಕಿಸಿ ಕೊಲ್ಲೂರು ಠಾಣೆಗೆ ದೂರು ನೀಡಿದ್ದಾರೆ.
ಈ ಹಿಂದೆ ಇದೇ ರೀತಿ ನಕಲಿ ವೆಬ್ಸೈಟ್ ಮೂಲಕ ಭಕ್ತರಿಗೆ ಮೋಸ ಮಾಡಿದ ಪ್ರಕರಣದಲ್ಲಿ ರಾಜಸ್ಥಾನ ಮೂಲದ ವ್ಯಕ್ತಿಯನ್ನು ಬಂಧಿಸಲಾಗಿತ್ತು. ಕೊಲ್ಲೂರಿಗೆ ಆಗಮಿಸುವ ಭಕ್ತರು ಕೊಠಡಿಗಳನ್ನು ಮುಂಗಡವಾಗಿ ಕಾಯ್ದಿರಿಸುವ ಸಲುವಾಗಿ ದೇಗುಲದಿಂದ ಮಾಡಿರುವ ವ್ಯವಸ್ಥೆಯನ್ನು ಅನುಸರಿಸಬೇಕೆಂದು ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಬಾಬು ಶೆಟ್ಟಿ ವಿನಂತಿಸಿದ್ದಾರೆ.











