ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ತಾಲೂಕಿನ ಕ್ರಿಯೇಟಿವ್ ಪದವಿಪೂರ್ವ ಕಾಲೇಜಿನ ಸ್ಫೂರ್ತಿ ಮಾತು ಕಾರ್ಯಕ್ರಮದ 18ನೇ ಸರಣಿಯಲ್ಲಿ “ಜೆನ್ ಜಿ: ಹೊಸ ಭಾರತದ ನವಶಕ್ತಿ” ಎಂಬ ವಿಷಯದ ಮೇಲೆ ನಾಡಿನ ಖ್ಯಾತ ಲೇಖಕ, ಚಿಂತಕ, ವಾಗ್ಮಿಗಳಾದ ಚಕ್ರವರ್ತಿ ಸೂಲಿಬೆಲೆ ಅವರು ಭಾಗವಹಿಸಿ ಮಾತನಾಡಿದರು.
‘ಇಂದಿನ ಯುವಜನತೆ ಭಾರತೀಯ ಇತಿಹಾಸ ಮತ್ತು ಪರಂಪರೆಯನ್ನು ಮನೋಜ್ಞವಾಗಿ ಅರ್ಥೈಸಿಕೊಳ್ಳಬೇಕು. ಭಾರತೀಯ ನೆಲಮೂಲ ಸಂಸ್ಕೃತಿಯನ್ನು ಜಗತ್ತಿನೆಲ್ಲೆಡೆ ಪಸರಿಸುವ ಕಾರ್ಯಕ್ಕೆ ಮುಂದಾಗಬೇಕು. ವಿದ್ಯಾರ್ಥಿಗಳು ಸಾಮಾಜಿಕ ಜಾಲತಾಣಗಳ ಬಳಕೆಯಲ್ಲಿಯೆ ತೊಡಗಿ ತಮ್ಮ ಅನನ್ಯ ಭವಿಷ್ಯ ಹಾಳು ಮಾಡಿಕೊಳ್ಳುವ ಬದಲು ಹೊಸ ಹೊಸ ಆವಿಷ್ಕಾರಗಳತ್ತ ಮುಖ ಮಾಡಬೇಕೆಂದು ತಿಳಿಸಿದರು. ಭಾರತದ ಅಸ್ತಿತ್ವ ಮತ್ತು ಅಸ್ಮಿತೆ ಉಳಿಯಬೇಕಾದರೆ ಜೆನ್-ಜಿ ಗಳ ಕೊಡುಗೆ ಅಮೂಲ್ಯ ಎನಿಸಿಕೊಳ್ಳುತ್ತದೆ. ಇಂದಿನ ಜಿನ್-ಜಿ ಗಳು ಸ್ವಾಮಿ ವಿವೇಕಾನಂದರ ಆದರ್ಶ ಮತ್ತು ತಾತ್ವಿಕ ಚಿಂತನೆಗಳನ್ನು ಬದುಕಿಗೆ ಅಳವಡಿಸಿಕೊಳ್ಳುವುದರ ಮುಖೇನ ದೇಶದ ಹಿತ ಕಾಪಾಡಬೇಕು. ಭಾರತ ವಿರೋಧಿ ಕಾರ್ಯಗಳಿಂದ ದೂರವಿದ್ದು ದೇಶಕ್ಕೆ ಪೂರಕವಾದ ಕೆಲಸಗಳಲ್ಲಿ ತೊಡಗಬೇಕು. ಈಗಾಗಲೇ ತ್ಯಾಗ, ಬಲಿದಾನಗಳಿಂದ ಸುಭದ್ರವಾದ ರಾಷ್ಟ ನಿರ್ಮಾಣವಾಗಿದೆ,ಅದನ್ನು ಸರಿಯಾದ ಕ್ರಮದಲ್ಲಿ ಉಳಿಸಿಕೊಂಡು ಹೋಗುವುದು ಜಿನ್-ಜಿ ಗಳ ಹೊಣೆಯಾಗಬೇಕು.ನವ ಭಾರತ ನಿರ್ಮಾಣಕ್ಕೆ ಪಣತೊಟ್ಟ ಶಿಲ್ಪಿಗಳಂತೆ ತಮ್ಮ ಕಾರ್ಯ ಸಾಧನೆಯಲ್ಲಿ ಮುಳುಗಿರಬೇಕು ಎಂದರು.
ನಿಜವಾದ ಶಿಕ್ಷಣ ಎಂದರೆ ವಿದ್ಯಾರ್ಥಿಗಳಲ್ಲಿರುವ ಸಾಮರ್ಥ್ಯವನ್ನು ಹೆಕ್ಕಿ ತೆಗೆದು ಅವರ ನೂತನ ಜೀವನಕ್ಕೆ ಭದ್ರ ಬುನಾದಿಯನ್ನು ಕಲ್ಪಿಸುವುದು ಎಂದರು. ಈ ಸಂದರ್ಭದಲ್ಲಿ ಮದನ್ ಲಾಲ್ ದಿಂಗ್ರ, ಪ್ರಜ್ಞಾನಂದ,ಗುಕೇಶ್, ವೇದಮೂರ್ತಿ ದೇವವ್ರತ ಮಹೇಶ್ ರೇಖೆ, ವಂದನ್ ಕುಮಾರ್ ಅವರಂಥ ಅಪ್ರತಿಮ ಸಾಧಕರ ಸಾಧನೆಯನ್ನು ನೆನಪಿಸಿಕೊಂಡರು.
ಕ್ರಿಯೇಟಿವ್ ಶಿಕ್ಷಣ ಸಂಸ್ಥೆ ಮುಂದೊಂದು ದಿನ ನಳಂದ ವಿಶ್ವವಿದ್ಯಾಲಯದಂತೆ ಬೆಳೆಯಬೇಕೆಂಬ ಮಹತ್ವಕಾಂಕ್ಷೆಯನ್ನು ವ್ಯಕ್ತಪಡಿಸಿದರು. ವಿದ್ಯಾರ್ಥಿಗಳ ಜೊತೆ ಮುಕ್ತ ಚರ್ಚೆಯಲ್ಲಿ ತೊಡಗಿ ಅವರ ಪ್ರಶ್ನೆಗಳಿಗೆ ಕೂಡ ಉತ್ತರವನ್ನು ನೀಡಿದರು.
ಕಾರ್ಯಕ್ರಮದಲ್ಲಿ ಕ್ರಿಯೇಟಿವ್ ಶಿಕ್ಷಣ ಪ್ರತಿಷ್ಠಾನದ ಸಹ ಸಂಸ್ಥಾಪಕರುಗಳಾದ ವಿದ್ವಾನ್ ಗಣಪತಿ ಭಟ್, ಡಾ. ಗಣನಾಥ್ ಶೆಟ್ಟಿ, ಅಶ್ವತ್ ಎಸ್ ಎಲ್, ಆದರ್ಶ ಎಂ. ಕೆ., ಗಣಪತಿ ಭಟ್ ಕೆ. ಎಸ್., ಅಮ್ಮ ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷರಾದ ಅವಿನಾಶ್ ಶೆಟ್ಟಿ ಭಾಗವಹಿಸಿದ್ದರು.
ಕಾರ್ಯಕ್ರಮವನ್ನು ರಸಾಯನಶಾಸ್ತ್ರ ಉಪನ್ಯಾಸಕರಾದ ಪ್ರಜ್ವಲ್ ನಿರೂಪಿಸಿದರು.
















