ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ”ವಂದೇ ಮಾತರಂ” ಗೀತೆಯನ್ನು ಪೂರ್ಣ ಹಾಡಬೇಕೇಂಬ ಕೇಂದ್ರದ ಆದೇಶಕ್ಕೆ ರಾಜ್ಯ ಕಾಂಗ್ರೆಸ್ ಸರ್ಕಾರದ ತಡೆಯೊಡ್ಡಿ ಕೇವಲ ಎರಡು ಚರಣಗಳಿಗೆ ಸೀಮಿತಗೊಳಿಸಿರುವುದು ತುಷ್ಟೀಕರಣ ರಾಜಕಾರಣದ ಮುಂದುವರಿದ ಭಾಗವಾಗಿದೆ ಎಂದು ಬಿಜೆಪಿ ಕರ್ನಾಟಕದ ಮಾಧ್ಯಮ ಸಮಿತಿ ಸದಸ್ಯ ಹಾಗೂ ಮಾಧ್ಯಮ ವಕ್ತಾರ ರಮೇಶ್ ಪೂಜಾರಿ ಆರೋಪಿಸಿದ್ದಾರೆ.
‘ವಂದೇ ಮಾತರಂ’ ಗೀತೆಯ 150ನೇ ವರ್ಷಾಚರಣೆಯ ಅಂಗವಾಗಿ ಎಲ್ಲಾ 6 ಚರಣಗಳನ್ನು ಹಾಡಬೇಕೆಂಬ ಕೇಂದ್ರ ಗೃಹ ಸಚಿವಾಲಯದ ಸ್ಪಷ್ಟ ಮಾರ್ಗದರ್ಶನವನ್ನು ಧಿಕ್ಕರಿಸಿ, ಕೇವಲ ಎರಡು ಚರಣಗಳಿಗೆ ಸೀಮಿತಗೊಳಿಸಿರುವ ಡಿ.ಕೆ. ಶಿವಕುಮಾರ್ ನೇತೃತ್ವದ ಕರ್ನಾಟಕ ಸರ್ಕಾರದ ನಿರ್ಧಾರವು ಕಾಂಗ್ರೆಸ್ ಪಕ್ಷದ ಹಳೆಯ ತುಷ್ಟೀಕರಣ ರಾಜಕಾರಣದ ಮುಂದುವರಿದ ಭಾಗವಾಗಿದೆ. 1937ರ ಕೊಲ್ಕತ್ತಾ ಸಿಡಬ್ಲ್ಯೂಸಿ (CWC) ನಿರ್ಣಯದ ನೆಪವೊಡ್ಡಿ, ಬಂಕಿಮಚಂದ್ರ ಚಟ್ಟೋಪಾಧ್ಯಾಯರ ಅಮರ ರಾಷ್ಟ್ರಗೀತೆಯ ಭಾಗಗಳನ್ನು ಕತ್ತರಿಸುವ ಮೂಲಕ ಕಾಂಗ್ರೆಸ್ ಸರ್ಕಾರವು ಭಾರತದ ಸ್ವಾತಂತ್ರ್ಯ ಸಂಗ್ರಾಮದ ಚಾರಿತ್ರಿಕ ತತ್ವಗಳಿಗೆ ಬಹಿರಂಗ ಅಪಮಾನವೆಸಗಿದೆ.
ಕಾಂಗ್ರೆಸ್ ಕಚೇರಿಯಲ್ಲಿ ಸ್ವಾತಂತ್ರ್ಯೋತ್ಸವ ಆಚರಣೆಯ ವೇಳೆ ಪೂರ್ತಿ 6 ಚರಣಗಳ ಹಾಡು ಸಾಗುತ್ತಿದ್ದಾಗ ‘ಸ್ಟಾಪ್ ಸ್ಟಾಪ್’ ಎನ್ನುವ ಆದೇಶ ಶ್ರೀಮತಿ ಸೋನಿಯಾ ಗಾಂಧಿಯವರು ನೀಡಿದ್ದು ದೇಶದಲ್ಲೆಡೆ ಜನತೆಯ ಆಕ್ರೋಶಕ್ಕೆ ಗುರಿಯಾಗಿತ್ತು. ನಂತರ ಅವರು ನಿಲ್ಲಿಸಲು ಹೇಳಿದ್ದಲ್ಲ, ಶ್ರೀ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಕುರ್ಚಿ ತಂದು ಕೊಡಲು ಸನ್ನೆ ಮಾಡಿದ್ದು ಎಂಬ ಬಾಲಿಷ ಸಮಜಾಯಿಸಿ ಕಾಂಗ್ರೆಸ್ ಪಕ್ಷದಿಂದ ಬಂದಿದ್ದರೂ ಕೂಡ ದೇಶದ ಜನತೆ ಅಷ್ಟೇ ಏಕೆ ಸ್ವತಃ ಕಾಂಗ್ರೆಸ್ ಕಾರ್ಯಕರ್ತರು ಕೂಡ ಆ ಉತ್ತರದಿಂದ ತೃಪ್ತಿಗೊಂಡಿರಲಿಲ್ಲ. ಆದ್ದರಿಂದ ಕಾಂಗ್ರೆಸ್ ಪಕ್ಷ ನಾವು ಹಾಡುವುದೇ ಎರಡು ಚರಣ ಎಂಬ ಧಾರ್ಷ್ಟ ನಿರ್ಧಾರಕ್ಕೆ ಬಂದಿತ್ತು. ಇರಲಿ, ಅದು ಅವರ ಪಕ್ಷದ ನಿರ್ಧಾರ ಎಂದು ಹೇಳಬಹುದಾದರೂ ಕಾಂಗ್ರೆಸ್ ಅಧಿಕಾರದಲ್ಲಿರುವ ರಾಜ್ಯ ಸರ್ಕಾರಗಳು ಒಕ್ಕೂಟ ವ್ಯವಸ್ಥೆ ಹಾಗೂ ಸಂವಿಧಾನ ವಿರೋಧಿಗಳಂತೆ ವರ್ತಿಸುತ್ತಾ ಸರ್ಕಾರಗಳು ಕೂಡ ಎರಡೇ ಚರಣ ಹಾಡುವ ಅಧಿನಿಯಮಕ್ಕೆ ಅಂಕಿತ ಹಾಕುತ್ತಿವೆ.
ಇಂದು ಕರ್ನಾಟಕ ರಾಜ್ಯ ಸರ್ಕಾರ ಕೂಡ ಈ ಕುರಿತು ತಿದ್ದುಪಡಿ ತಂದಿರುವುದು ಬಹಳ ದುರದೃಷ್ಟಕರ ಹಾಗೂ ಖಂಡನೀಯ ನಡೆ. ರಾಜ್ಯ ಸರ್ಕಾರದ ಈ ನಡೆಯನ್ನು ಸಂಪೂರ್ಣವಾಗಿ ವಿರೋಧಿಸುತ್ತಾ ಕಾಂಗ್ರೆಸ್ ನಾಯಕರಿಗೆ ಈ ದೇಶವನ್ನು ಹಾಡಿ ಹೊಗಳುವ ‘ವಂದೇ ಮಾತರಂ’ ಮೇಲೆ ಪೂರ್ಣ ನಿಷ್ಠೆಯಿದೆಯೋ ಅಥವಾ ತಮ್ಮ ಪಕ್ಷದ ಅಧಿನಾಯಕಿಯ ಆಜ್ಞೆ ‘ಸೋನಿಯಾ ಮಾತರಂ’ ಮೇಲೆ ಮಾತ್ರ ನಿಷ್ಠೆಯಿದೆಯೋ ಎಂಬುದನ್ನು ರಾಜ್ಯದ ಜನತೆಗೆ ತತ್ ಕ್ಷಣ ಸ್ಪಷ್ಟಪಡಿಸಬೇಕೆಂದು ಜನತೆಯ ಪರವಾಗಿ ಆಗಹಿಸುತ್ತೇನೆ ಎಂದು ರತನ್ ರಮೇಶ್ ಪೂಜಾರಿ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
.
















