ಗಂಗೊಳ್ಳಿ: ಗಡಿಯ ತುದಿಯಲ್ಲಿ ನಿಂತು ದೇಶವನ್ನು ಹೊರಗಿನ ಶತ್ರುಗಳಿಂದ ರಕ್ಷಿಸುವ ಸೈನಿಕರಂತೆಯೇ ದೇಶದ ಆಂತರಿಕ ಸಂಘರ್ಷಗಳಲ್ಲಿ ನಮ್ಮೊಂದಿಗೆ ನಿಲ್ಲುವ ಸೈನಿಕನೇ ’ಪೊಲೀಸ್;. ಅವರ ಕರ್ತವ್ಯಕ್ಕೆ ಸಮಯದ ಪರಿಧಿ ಇಲ್ಲ. ಅವರು ಹಕ್ಕೊತ್ತಾಯಕ್ಕೆ ಹೋರಾಟ ಮಾಡುವಂತಿಲ್ಲ. ಜಾತಿ ಮತಗಳ ಸಂಘರ್ಷವಾಗಲಿ, ರಾಜ್ಯಗಳ ನಡುವಿನ ಗಡಿ ಕದನವಾಗಲಿ ಅವರು ತಕ್ಷಣ ಹಾಜರು. ಉದ್ರಿಕ್ತರು ಬೀಸುವ ಕಲ್ಲುಗಳಿಂದ ತನ್ನನ್ನು ತಾನು ರಕ್ಷಿಸಿಕೊಳ್ಳುವುದರ ಜೊತೆಗೆ ತನ್ನನ್ನು ನಂಬಿದವರನ್ನು ಕಾಪಾಡುವುದು ಅವರ ಹೊಣೆ. ಇಂತಹ ಅನೇಕ ಕಠಿಣ ಸನ್ನಿವೇಶಗಳಲ್ಲಿ ಸದಾ ಜನರೊಂದಿಗೆ ಇದ್ದು ಜನರನ್ನು ರಕ್ಷಿಸುವ ಕಾನೂನನ್ನು ಕಾಪಾಡುವ ಮಹತ್ತರವಾದ ಜವಾಬ್ದಾರಿ ಪೊಲೀಸರ ಮೇಲಿದೆ.
ನಮ್ಮೂರಿನ ಪೊಲೀಸ್ ನಮ್ಮ ಸೈನಿಕರಿದ್ದಂತೆ. ಪೊಲೀಸರ ಮೇಲಿನ ಗೌರವಕ್ಕೆ ತಲೆಬಾಗಿ ನಮ್ಮೂರಿನ ಸೈನಿಕರಿಗೆ ಗೌರವ ಸಲ್ಲಿಸುವ ದೃಷ್ಟಿಯಿಂದ ಹುತಾತ್ಮರ ದಿನಾಚರಣೆ ಅಂಗವಾಗಿ ಗಂಗೊಳ್ಳಿಯ ಕ್ರಾಂತಿವೀರರ ಅಭಿಮಾನಿ ಬಳಗದ ಸದಸ್ಯರು ಇತ್ತೀಚಿಗೆ ನಮ್ಮೊಳಗಿನ ಸೈನಿಕರು ಎಂಬ ವಿಶಿಷ್ಟ ಕಾರ್ಯಕ್ರಮದ ಮೂಲಕ ಗಂಗೊಳ್ಳಿ, ಬೈಂದೂರು ಹಾಗೂ ಕೊಲ್ಲೂರು ಪೊಲೀಸ್ ಠಾಣೆಗಳಿಗೆ ತೆರಳಿ ಆಯಾ ಠಾಣೆಯ ಎಲ್ಲಾ ಪೊಲೀಸರ ಪರವಾಗಿ ಠಾಣೆಗಳ ಉಪನಿರೀಕ್ಷಕರನ್ನು ಗೌರವಿಸಿ ಅಭಿನಂದನೆ ಸಲ್ಲಿಸಿದರು.