ಕುಂದಾಪ್ರ ಡಾಟ್ ಕಾಂ ಸುದ್ದಿ.
ಗಂಗೊಳ್ಳಿ: ಆರೋಗ್ಯವಂತ ವ್ಯಕ್ತಿ ಮೂರು ತಿಂಗಳಿಗೊಮ್ಮೆ ರಕ್ತದಾನ ಮಾಡಬಹುದು. ಸ್ವಯಂಪ್ರೇರಿತರವಾಗಿ ರಕ್ತದಾನ ಮಾಡುವುದರಿಂದ ಮೂರು ಜೀವಗಳನ್ನು ಉಳಿಸಿದ ಪುಣ್ಯ ದೊರೆಯುತ್ತದೆ. ಸ್ವಯಂಪ್ರೇರಿತ ರಕ್ತದಾನ ಮಾಡುವುದರಿಂದ ರಕ್ತನಿಧಿ ಕೇಂದ್ರಗಳಲ್ಲಿ ರಕ್ತದ ಕೊರತೆ ಬಾರದಂತೆ ಮಾಡಬಹುದು. ಹೀಗಾಗಿ ರಕ್ತದಾನ ಮಾಡುವವರಿಗೆ ಮತ್ತು ರಕ್ತದಾನ ಶಿಬಿರಗಳನ್ನು ಆಯೋಜಿಸುವವರನ್ನು ನಿರಂತರವಾಗಿ ಪ್ರೋತ್ಸಾಹಿಸಬೇಕು ಎಂದರು ಇಂಡಿಯನ್ ರೆಡ್ಕ್ರಾಸ್ ಸೊಸೈಟಿಯ ಕುಂದಾಪುರ ಶಾಖೆಯ ಚೇರಮೆನ್ ಎಸ್.ಜಯಕರ ಶೆಟ್ಟಿ ಹೇಳಿದರು.
ಅವರು ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜಿನ ಸಭಾಂಗಣದಲ್ಲಿ ಓಂ ಶ್ರೀ ಮಾತೃ ಮಂಡಳಿ ಬಾವಿಕಟ್ಟೆ ಗಂಗೊಳ್ಳಿ, ಇಂಡಿಯನ್ ರೆಡ್ಕ್ರಾಸ್ ಸೊಸೈಟಿ, ರಕ್ತನಿಧಿ ಕೇಂದ್ರ ಕುಂದಾಪುರ ಇವರ ಜಂಟಿ ಆಶ್ರಯದಲ್ಲಿ ಆಯೋಜಿಸಲಾಗಿದ್ದ ಸ್ವಯಂಪ್ರೇರಿತ ರಕ್ತದಾನ ಶಿಬಿರದಲ್ಲಿ ಮಾತನಾಡಿದರು.
ಕುಂದಾಪುರ ಸರಕಾರಿ ಆಸ್ಪತ್ರೆಯ ವೈದ್ಯೆ ಡಾ.ಕಲಾಶ್ರೀ ಶಿಬಿರವನ್ನು ಉದ್ಘಾಟಿಸಿದರು. ರಕ್ತನಿಧಿ ಕೇಂದ್ರದ ವೈದ್ಯ ಡಾ.ಮಲ್ಲಿ, ಇಂಡಿಯನ್ ರೆಡ್ಕ್ರಾಸ್ ಸೊಸೈಟಿಯ ಕೋ-ಆರ್ಡಿನೇಟರ್ ಎ.ಮುತ್ತಯ್ಯ ಶೆಟ್ಟಿ, ಶ್ರೀ ಬಸವೇಶ್ವರ ದೇವಸ್ಥಾನದ ಅಧ್ಯಕ್ಷ ಶ್ರೀಧರ ಎನ್., ಮಲ್ಪೆಯ ಮತ್ಸ್ಯೋದ್ಯಮಿ ಜಗದೀಶ ಗಂಗೊಳ್ಳಿ, ರೇಣುಕಾ ವಾಸುದೇವ ಶೇರುಗಾರ್, ವೈಭವಿ ವಿ.ಶೆಣೈ, ಓಂ ಶ್ರೀ ಮಾತೃ ಮಂಡಳಿಯ ಅಧ್ಯಕ್ಷೆ ಭೂದೇವಿ, ಕಾರ್ಯದರ್ಶಿ ಜ್ಯೋತಿ, ಅಕ್ಕಮ್ಮ, ಸುಶೀಲ ಮೊದಲಾದವರು ಉಪಸ್ಥಿತರಿದ್ದರು. ಇದೇ ಸಂದರ್ಭ ಕುಂದಾಪುರ ಸರಕಾರಿ ಆಸ್ಪತ್ರೆಯ ತಜ್ಞರು ಮಧುಮೇಹ ಹಾಗೂ ರಕ್ತದೊತ್ತಡದ ತಪಾಸಣೆ ನಡೆಸಿದರು. ಸರಸ್ವತಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.