ಕುಂದಾಪ್ರ ಡಾಟ್ ಕಾಂ ಸುದ್ದಿ
ಗಂಗೊಳ್ಳಿ : ಇಲ್ಲಿನ ಮೇಲ್ಗಂಗೊಳ್ಳಿಯ ಡಾ.ಬಿ.ಆರ್. ಅಂಬೇಡ್ಕರ್ ಯುವಕ ಮಂಡಲದ 29ನೇ ವಾರ್ಷಿಕೋತ್ಸವ, ಅಮೃತ ಯುವತಿ ಮಂಡಲ ಮತ್ತು ಅರ್ಚನಾ ಮಹಿಳಾ ಮಂಡಲ ಮೇಲ್ಗಂಗೊಳ್ಳಿ ಇವುಗಳ 23ನೇ ವಾರ್ಷಿಕೋತ್ಸವ ಹಾಗೂ ಡಾ. ಬಿ.ಆರ್. ಅಂಬೇಡ್ಕರ್ರವರ 125ನೇ ಜನ್ಮ ದಿನಾಚರಣೆ ಕಾರ್ಯಕ್ರಮ ಮೇಲ್ಗಂಗೊಳ್ಳಿಯ ಸರಕಾರಿ ಕಿರಿಯ ಪ್ರಾಥಮಿಕ ಶಾಲಾ ವಠಾರದಲ್ಲಿ ನಡೆಯಿತು.
ಬೆಳಿಗ್ಗೆ ನಡೆದ ಕಾರ್ಯಕ್ರಮದಲ್ಲಿ ಗಂಗೊಳ್ಳಿ ಗ್ರಾಮ ಪಂಚಾಯತ್ ಸದಸ್ಯೆ ಚೆಂದು ಧ್ವಜಾರೋಹಣಗೈದು ಡಾ.ಅಂಬೇಡ್ಕರ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು. ಸಂಜೆ ಜರಗಿದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗಂಗೊಳ್ಳಿ ಗ್ರಾಮ ಪಂಚಾಯತ್ ಅಧ್ಯಕ್ಷೆ ರೇಷ್ಮಾ ಆರ್.ಖಾರ್ವಿ ವಹಿಸಿದ್ದರು. ಕೋಟದ ಮತ್ಸ್ಯೋದ್ಯಮಿ ಪ್ರಶಾಂತ ಕುಂದರ್, ಜಿಪಂ ಸದಸ್ಯೆ ಶೋಭಾ ಜಿ.ಪುತ್ರನ್ ಶುಭ ಹಾರೈಸಿದರು. ಇದೇ ಸಂದರ್ಭ ಗಂಗೊಳ್ಳಿ ಸ.ವಿ.ಪದವಿಪೂರ್ವ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಆರ್.ಎನ್.ರೇವಣ್ಕರ್ ಮತ್ತು ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ವಕೀಲ ಮಹಾಬಲ ಅವರನ್ನು ಸನ್ಮಾನಿಸಲಾಯಿತು. ಬೈಂದೂರಿನ ಡಾ.ಬಿ.ಆರ್.ಅಂಬೇಡ್ಕರ್ ಯುವಕ ಮಂಡಲದ ಅಧ್ಯಕ್ಷ ಲಕ್ಷ್ಮಣ ಯಡ್ತರೆ ಉಪಸ್ಥಿತರಿದ್ದರು.
ಚಲನಚಿತ್ರ ನಟ ಕಿಚ್ಚ ಸುದೀಪ ಅವರ ಅಭಿಮಾನಿ ಬಳಗ ಗಂಗೊಳ್ಳಿ, ಕಿಚ್ಚ ಸುದೀಪ ಫ್ಯಾನ್ಸ್ ಕ್ಲಬ್ ಬೆಂಗಳೂರು ಹಾಗೂ ಕಿಚ್ಚ ಸುದೀಪ ಫ್ಯಾನ್ಸ್ ಕ್ಲಬ್ ಕನಕಪುರ ಇವರ ವತಿಯಿಂದ 10 ಪ್ರೌಢಶಾಲೆಗಳ 10 ಬಡ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಪ್ರೋತ್ಸಾಹಧನ ವಿತರಿಸಲಾಯಿತು. ಗಂಗೊಳ್ಳಿ ಗ್ರಾಮ ಮಟ್ಟದ ಶಾಲಾ ಕಾಲೇಜಿನಲ್ಲಿ 7ನೇ ತರಗತಿಯಿಂದ ಪಿಯುಸಿವರೆಗಿನ ತರಗತಿಗಳಲ್ಲಿ ಅತೀ ಹೆಚ್ಚು ಅಂಕಗಳಿಸಿರುವ ಪರಿಶಿಷ್ಟ ಜಾತಿಯ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನವನ್ನು ವಿತರಿಸಲಾಯಿತು.
ಯುವತಿ ಮಂಡಲದ ಕಾರ್ಯದರ್ಶಿ ಸಹನಾ ಕೆ. ಸ್ವಾಗತಿಸಿದರು. ಯುವಕ ಮಂಡಲದ ಕಾರ್ಯದರ್ಶಿ ರಂಜಿತ್ ವರದಿ ವಾಚಿಸಿದರು. ಸಂಘಟನಾ ಕಾರ್ಯದರ್ಶಿ ರಾಘವೇಂದ್ರ ಸಂದೇಶ ವಾಚಿಸಿದರು. ನಾವುಂದ ಶಾಲೆಯ ಮುಖ್ಯೋಪಾಧ್ಯಾಯ ಆನಂದ ಕೆ. ಕಾರ್ಯಕ್ರಮ ನಿರೂಪಿಸಿದರು. ಸಹಕಾರ್ಯದರ್ಶಿ ಸಂದೀಪ ಕೆ. ವಂದಿಸಿದರು.