ಕುಂದಾಪುರ: ಹೆಮ್ಮಾಡಿಯ ವಿವಿವಿ ಮಂಡಳಿಗೆ ಸೇರಿದ ಜಾಗವನ್ನು ಪರಭಾರೆ ಮಾಡಿ ಖಾಸಗಿವರಿಗೆ ಶಾಲೆ ನಡೆಸಲು ಅವಕಾಶ ಮಾಡಿಕೊಲಾಗಿದೆ ಎಂಬ ಆರೋಪ ಸತ್ಯಕ್ಕೆ ದೂರವಾಗಿದ್ದು, ಆರೋಪ ಮಾಡುವವರು ದಾಖಲೆ ಸಮೇತ ಸಾಬೀತು ಪಡಿಸಲಿ. ಅದನ್ನು ಬಿಟ್ಟು ಸಾಮಾಜಿಕ ತಾಣಗಳನ್ನು ಬಳಸಿಕೊಂಡು ನನ್ನ ತೇಜೋವಧೆ ಮಾಡುತ್ತಿರುವುದಲ್ಲದೇ, ಹತ್ತಾರು ವರ್ಷಗಳ ಇತಿಹಾಸವಿರುವ ಶಾಲೆಯ ಹೆಸರು ಕೆಡಿಸಲು ಮುಂದಾಗಿರುವುದರಲ್ಲಿ ಅರ್ಥವಿಲ್ಲ ಎಂದು ಬೈಂದೂರು ಶಾಸಕ ಕೆ. ಗೋಪಾಲ ಪೂಜಾರಿ ಅವರು ಹೇಳಿದ್ದಾರೆ.
ಕಳೆದ ಮೂರು ದಿನಗಳಿಂದ ಸಾಮಾಜಿಕ ತಾಣಗಳಲ್ಲಿ ಹರಿದಾಡುತ್ತಿರುವ ಸುದ್ದಿಯ ಬಗ್ಗೆ ಪ್ರತಿಕ್ರಿಯಿಸಿರುವ ಅವರು, ವಿವಿವಿ ಮಂಡಳಿಯ ಸೇರಿದ ಹೆಸ್ಕೂಲು, ಕಾಲೇಜು ಹಾಗೂ ಜಾಗ ಮಂಡಳಿಯ ಹೆಸರಿನಲ್ಲಿಯೇ ಇದ್ದು, ಇದರಲ್ಲಿ ಎಲ್ಲಿಯೂ ಅಕ್ರಮ ನಡೆದಿಲ್ಲ. ಹೈಸ್ಕೂಲು, ಕಾಲೇಜಿನ ಜೊತೆಗೆ ಪ್ರಸ್ತುತ ಶೈಕ್ಷಣಿಕ ವರ್ಷದಿಂದ ವಿವಿವಿ ಮಂಡಳಿಯು ಆಂಗ್ಲ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆಯನ್ನು ಆರಂಭಿಸಿರುವುದನ್ನು ಸಹಿಸದ ಮಂದಿ ತನ್ನ ತೇಜೋವಧೆ ಮಾಡಲು ನಿಂತಿರುವುದು ವಿಷಾದನೀಯ ಎಂದರು.
ಹೆಮ್ಮಾಡಿಯ ಹೈಸ್ಕೂಲಿನಲ್ಲಿ ನೂರಾರು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು, ಅವರಿಗೆ ಉಚಿತ ಶಿಕ್ಷಣವನ್ನು ನಿಡುತ್ತಾ ಬರಲಾಗಿದೆ. ಕಾಲೇಜಿನ ವಿದ್ಯಾರ್ಥಿಗಳಿಂದ ಪಡೆಯುವ ಕನಿಷ್ಠ ಶುಲ್ಕದಿಂದ ಸಂಸ್ಥೆಯನ್ನು ಮುನ್ನಡೆಸಲು ಯಾರೊಬ್ಬರಿಗೂ ಸಾಧ್ಯವಿಲ್ಲ. ಹೀಗಿರುವಾಗ ಕಳೆದ ಹತ್ತು ವರ್ಷಗಳಿಂದ ಕಾಲೇಜಿನ ಉಪನ್ಯಾಸಕರ ಸಂಬಳ ಹಾಗೂ ಇನ್ನಿತರ ಮೂಲಭೂತ ಸೌಕರ್ಯಗಳನ್ನು ಟ್ರಸ್ಟಿನ ಹಣವನ್ನೇ ಎಲ್ಲದಕ್ಕೂ ವಿನಿಯೋಗಿಸಲಾಗುತ್ತಿದೆ. ಕಾಲೇಜಿಗೆ ಪ್ರತಿ ತಿಂಗಳು ಕನಿಷ್ಠ ಒಂದು ಲಕ್ಷ ಹಣ ನಿರ್ವಹಣೆಗೆ ಬೇಕಾಗುತ್ತಿದ್ದು, ಇದರ ಮೂಲ ಯಾವುದು ಎಂದು ದಾಖಲೆಗಳನ್ನು ನೋಡಿ ಮಾತನಾಡಲಿ. ಪ್ರತಿಯೊಂದಕ್ಕೂ ಲೆಕ್ಕವಿದ್ದು, ಎಲ್ಲವೂ ಕಾನೂನಿನ ಚೌಕಟ್ಟಿನಲ್ಲಿಯೇ ನಡೆಯುತ್ತಿದೆ ಎಂದವರು ತಿಳಿಸಿದ್ದಾರೆ.
ಗುರುರಕ್ಷಾ ಆಂಗ್ಲ ಮಾಧ್ಯಮ ಕಿರಿಯ ಪ್ರಾಥಮಿಕ ಶಾಲೆ ವಿವಿವಿ ಮಂಡಳಿಗೇ ಸೇರಿದ್ದು:
ಪ್ರಸಕ್ತ ಸಾಲಿನಲ್ಲಿ ನೂತನವಾಗಿ ಆರಂಭಿಸಲಾಗಿರುವ ಗುರುರಕ್ಷಾ ಪೂರ್ವ ಪ್ರಾಥಮಿಕ ಹಾಗೂ ಗುರುರಕ್ಷಾ ಆಂಗ್ಲ ಮಾಧ್ಯಮ ಶಾಲೆಯು ವಿವಿ ಮಂಡಳಿಗೆ ಸೇರಿದ್ದಾಗಿದ್ದು ಇದರಲ್ಲಿ ಅಕ್ರಮ ನಡೆದಿದೆ ಎನ್ನುವುದರಲ್ಲಿ ಹುರುಳಿಲ್ಲ. ಟ್ರಸ್ಟ್ಗೆ ಸಂಬಂಧಿಸಿದ ಜಾಗದಲ್ಲಿಯೇ ಹೊಸತಾಗಿ ಗುರುರಕ್ಷಾ ಪೂರ್ವ ಪ್ರಾಥಮಿಕ ಹಾಗೂ ಕಿರಿಯ ಪ್ರಾಥಮಿಕ ಶಾಲೆಯನ್ನು ತೆರೆಯಲು ಶಿಕ್ಷಣ ಇಲಾಖೆಯಿಂದಲೇ ಅನುಮತಿ ದೊರೆತಿದೆ. ಶಿಕ್ಷಣ ಇಲಾಖೆಯ ನಿಯಮಾನುಸಾರವಾಗಿ ಆಂಗ್ಲ ಮಾಧ್ಯಮ ಶಾಲೆಯನ್ನು ತೆರೆಯಲಾಗಿದೆ ಎಂದು ತಿಳಿಸಿರುವ ಗೋಪಾಲ ಪೂಜಾರಿ ಅವರು, ಸದ್ಯ ಹೈಸ್ಕೂಲು, ಕಾಲೇಜು ಮಾತ್ರವೇ ಇರುವುದರಿಂದ ಸರಕಾರಿ ನಿಯಮಗಳನ್ನು ಪರಾಮರ್ಶಿಸಿಯೇ ಪ್ರಾಥಮಿಕ ಶಾಲೆಯನ್ನು ಆರಂಭಿಸಲಾಗುತ್ತಿದೆ ಎಂದಿದ್ದಾರೆ.
ವಿವಿವಿ ಮಂಡಳಿ ಆರಂಭಿಸಿರುವ ಗುರುರಕ್ಷಾ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಕಾಲೇಜನ್ನು ಗುರುದರ್ಶನ ಟ್ರಸ್ಟ್ಗೆ ನಿರ್ವಹಣೆಗಾಗಿ ಲೀಸ್ ಆಧಾರದಲ್ಲಿ ಬಿಟ್ಟುಕೊಡಲಾಗಿದ್ದು ಯಾವುದನ್ನೂ ಮಾರಾಟ ಅಥವಾ ಪರಭಾರೆ ಮಾಡುವ ಕೆಲಸ ನಡೆದಿಲ್ಲ. ಹೌಸ್ಕೂಲು ವಿಭಾಗದಲ್ಲಿ ಈ ಟ್ರಸ್ಟಿನ ಹಸ್ತಕ್ಷೇಪವೂ ಇಲ್ಲ. ಸಂಸ್ಥೆಯ ಏಳ್ಗೆಯ ದೃಷ್ಠಿಯಿಂದ ಉತ್ತಮ ಹೀಗಿ ಮಾಡಲಾಗಿದೆಯೇ ಹೊರತು ಬೇರೆ ಉದ್ದೇಶವೂ ತಮಗಿಲ್ಲ. ಸುಮ್ಮನೆ ಇಲ್ಲಸಲ್ಲದ ಆರೋಪಗಳನ್ನು ಹೊರಿಸಿ ಶಿಕ್ಷಣ ಸಂಸ್ಥೆ ಹಾಗೂ ತನ್ನ ಹೆಸರು ಕೆಡಿಸುವ ಹುನ್ನಾರವಿದು ಎಂದು ಶಾಸಕರು ತಿಳಿಸಿದ್ದಾರೆ.