ಕುಂದಾಪ್ರ ಡಾಟ್ ಕಾಂ ವಿಶೇಷ ವರದಿ
ಕುಂದಾಪುರ: ಆ ಪುಟಾಣಿಗಳಿಗೆ ಶಾಲೆಗೆ ಹೋಗುವ ತವಕ. ಅಮ್ಮ ಅಕ್ಕರೆಯಿಂದ ಸ್ನಾನ ಮಾಡಿಸಿ ಮಡಿಸಿಟ್ಟ ಯುನಿಫಾರ್ಮ್ ತೊಡಿಸಿ, ಪ್ರೀತಿಯಿಂದ ತಲೆಬಾಚಿ ಮುಖಕ್ಕೆ ತೆಳ್ಳಗಿನ ಪೌಡರ್ ಲೇಪಿಸಿದಾಗ ಗೋಡೆಗೆ ತಗಲಿಸಿದ್ದ ಗಡಿಯಾರದ ಪುಟ್ಟ ಮುಳ್ಳು 9 ಅಂಕೆಯ ಮೇಲೆ ತಣ್ಣಗೆ ಒರಗಿತ್ತು. ಅಬ್ಬಾ ಶಾಲೆಯ ಕಾರು ಬರುವ ಹೊತ್ತಾಯಿತು, ಮಮ್ಮಿ ಟಿಫನ್ ಬಾಕ್ಸ್ ಎಲ್ಲಿ ಎಂದು ಕೇಳಿದ ಮಗುವಿಗೆ ಇಗೋ ರೆಡಿ ಎನ್ನುವಷ್ಟರಲ್ಲಿ ಹೊರಗೆ ಕಾರಿನ ಸದ್ದು. ಮಮ್ಮಿ ಬಾಯ್.. ಎಂದ ಮಕ್ಕಳು ಕಾರಿನಲ್ಲಿ ಕುಳಿತೇ ಬಿಟ್ಟಿದ್ದವು. ಅದು ಮಕ್ಕಳು ಹೇಳಿದ ಕಟ್ಟಕಡೆಯ ಬಾಯ್.. ಆಗಿತ್ತಾ! ಇನ್ನೆಂದೂ ಆ ನಿಷ್ಪಾಪಿ ಕರುಳಿನ ಕುಡಿಗಳು ಮತ್ತೆ ಮನೆಯ ಹೊಸಿಲಿನ ಒಳಗೆ ಕಾಲಿಡಲಾರವು ಎಂಬ ಒಂದೂ ಶಂಕೆ ಇಲ್ಲದೇ ಮಕ್ಕಳಿಗೆ ಟಾಟಾ ಹೇಳಿದ ಹೆತ್ತವರಿಗೆ ಶಾಲೆಯ ಅನತಿ ದೂರದಲ್ಲಿ ಸಾವೆಂಬ ಸಾವು ಕಕ್ಕರುಗಾಲಿನಲ್ಲಿ ಮಕ್ಕಳಿಗಾಗಿ ಸಹನೆಯಿಂದ ಪಹರೆ ಕುಂತಿರುವ ವಿಷಯವಾದರೂ ಎಲ್ಲಿ ಗೊತ್ತಿತ್ತು? ಎಂದಿನಂತಿರಲಿಲ್ಲಾ ಮುಂದಿನ ಆ ಕರಾಳ ಕ್ಷಣಗಳು.!
ತ್ರಾಸಿ ಸಮೀಪವಿರುವ ಡೊನ್ ಬೊಸ್ಕೊ ಇಂಗ್ಲಿಷ್ ಮಾಧ್ಯಮ ಶಾಲೆಗೆ ತಲ್ಲೂರು, ಹೆಮ್ಮಾಡಿ, ಕನ್ನಡ ಕುದ್ರು ಪರಿಸರದಿಂದ ಎಂದಿನಂತೆ ಸುಮಾರು ೧೮ ಮಕ್ಕಳನ್ನು ಹತ್ತಿಸಿಕೊಂಡ ಕಾರು ಚಾಲಕ ಮಾರ್ಟಿನ್ ಒಲಿವೆರಾ ಕಾರನ್ನು ಒಡಿಸುತ್ತಲಿದ್ದ, ಅದೆ ಶಾಲೆಯ ಶಿಕ್ಷಕಿಯಾಗಿರುವ ಅವ ಪತ್ನಿ ಫಿಲೋಮಿನಾ, ಮಗ ಅಲ್ವಿಟಾ ಸಹ ಉಳಿದ ಮಕ್ಕಳೊಂದಿಗೆ ಅದೇ ಕಾರಿನಲ್ಲಿದ್ದಾರೆ. ಮುಂದಿನ ಮಾರಣಹೋಮಕ್ಕೆ ಸಾಕ್ಷಿಯಾಗಬಲ್ಲೆನೆಂಬ ಕಿಂಚಿತ್ ಅನುಮಾನವಿಲ್ಲದೇ ಮಳೆ ಮಾತ್ರ ಒಂದೇ ಸಮನೆ ಸುರಿಯುತಲಿದೆ. ಮಕ್ಕಳು ಕಾರಿನಲ್ಲಿ ಎಂದಿನಂತೆ ತಮ್ಮದೇ ಆದ ಚಿನ್ನಾಟದಲ್ಲಿ ಮುಳುಗಿ ಹೋಗಿದ್ದಾರೆ. ಶಾಲೆಯ ದಿಕ್ಕಿನತ್ತ ರಭಸದಿಂದ ಕಾರು ಹೆದ್ದಾರಿಯಲ್ಲಿ ಸಾಗುತ್ತಿದ್ದರೆ, ಅತ್ತ ಮೊವ್ವಾಡಿಯ ತಿರುವಿನಲ್ಲಿ ಅಷೊತ್ತಿನಿಂದ ಸದ್ದಿಲ್ಲದೇ ಕುಂತಿದ್ದ ಸಾವು ವಿಕಾರವಾಗಿ ಆಕಳಿಸಿ ಎದ್ದು ನಿಂತಿದೆ. ರಾಷ್ತ್ರೀಯ ಹೆದ್ದಾರಿಯಲ್ಲಿ ಸಾಗುತ್ತಿದ್ದ ಕಾರನ್ನು ಶಾಲೆಗೆ ಸಾಗುವ ಮೊವಾಡಿ ತಿರುವಿನಲ್ಲಿ ಬಲಕ್ಕೆ ತಿರುಗಿಸಿ ಬಿಟ್ಟಿದ್ದಾನೆ ಮಾರ್ಟಿನ್, ಅದೇ ಸಮಯಕ್ಕೆ ಕುಂದಾಪುರದತ್ತ ಸಾಗುತ್ತಿದ್ದ ಬಸ್ಸೊಂದು ನೇರವಾಗಿ ಕಾರಿಗೆಅಪ್ಪಳಿಸಿದೆ ಅಷ್ಟೇ. ಸಾವಿನ ರುದ್ರ ತಾಂಡವಕ್ಕೆ ಸ್ಥಳದಲ್ಲೀಯೇ ಮೂವರು ಮಕ್ಕಳು ರಕ್ತಸಿಕ್ತವಾಗಿ ಜೀವ ಚೆಲ್ಲಿದರೆ, ಮಾರಣಾಂತಿಕ ಗಾಯಗಳೊಂದಿಗೆ ಸಾವಿನೊಂದಿಗೆ ಸೆಣಸಾಡುತ್ತಿರುವ ಉಳಿದ ಮಕ್ಕಳ ಚೀರಾಟ ಮುಗಿಲು ಮುಟ್ಟಿದೆ.ಮಕ್ಕಳ ಶಾಲಾಬ್ಯಾಗ್, ಕೊಡೆ, ಟಿಪನ್ ಬಾಕ್ಸ್, ಶೂ ಗಳು ಜಿನುಗುತ್ತಿರುವ ನೆತ್ತರಿನೊಂದಿಗೆ ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ. ಕುಂದಾಪ್ರ ಡಾಟ್ ಕಾಂ ವರದಿ.
ಆ ಕೂಡಲೇ ಗಾಯಗೊಂಡ ಮಕ್ಕಳನ್ನು ಕುಂದಾಪುರ ಹಾಗೂ ಮಣಿಪಾಲದ ಆಸ್ಪತ್ರೆಗಳಿಗೆ ರವಾನಿಸಲಾಯಿತಾದರೂ, ಬೆಂಬಿಡದ ದುಷ್ಟ ಸಾವು ಒಂದರ ಹಿಂದೆ ಒಂದರಂತೆ ಮತ್ತೇ ಐದು ಪುಟ್ಟ ಮಕ್ಕಳಿಗೆ ತನ್ನ ಸಹಿಯನ್ನು ಜಡಿದು, ಅನ್ವಿಟಾ,ಅನನ್ಬ, ನಿಖಿತಾ (ಅಕ್ಕ-ತಂಗಿ), ರೊಯ್ಸಾನ್, ಅಲ್ವಿಟಾ,ಕ್ಲರೀಶಾ, ಕ್ಲೆರಿಷ್ಟಾ , ಡೆಲ್ಫಿನ್ ಸೇರಿದಂತೆ ಒಟ್ಟು ೮ ಅಮಾಯಕ ಮುದ್ದು ಜೀವಗಳನ್ನು ತಂಜೊತೆ ಇನ್ಬಿಲ್ಲದಂತೆ ಸೆಳದೊಯ್ದಿದೆ. ಮಿನೋಶಾ ಅರ್ಫಾ,ಮಾರಿಯೋ, ಲೀಸಾ, ಎನ್ಸ್ತನ್, ಫ್ರಿಯಾನಾ. ಗಾಯಗೊಂಡಿದ್ದಾರೆ. ಮಮ್ಮಿಮಮ್ಮಿ ಎಂದು ಕುಂದಾಪುರ ಆಸ್ಪತ್ರೆಯಲ್ಲಿ ದಾಖಲಾಗಿರುವ ಮಕ್ಕಳ ಅರ್ತನಾದ ಎಂತಹವರ ಕಣ್ಣಲ್ಲೂ ನೀರು ತರಿಸುವಂತಿದ್ದು, ಜರಗಿ ಹೋದ ದಾರುಣತೆಗೆ ಇಡೀ ಕುಂದಾಪುರಕ್ಕೆ ಕುಂದಾಪುರವೇ ಕಂಬನಿ ಮಿಡಿದಿದೆ. ಕುಂದಾಪ್ರ ಡಾಟ್ ಕಾಂ ವರದಿ
ಶಾಲೆಯ ಬೇಜವಾಬ್ದಾರಿ: ಬೇಕಾಬಿಟ್ಟಿ ಫೀಸು ತೆಗೆದು ಕೊಳ್ಳುವ ಶಾಲೆ ಮಕ್ಕಳ ಸಂಚಾg ವ್ಯವಸ್ಥೆಯ ಬಗ್ಗೆ ಕಾಳಜಿ ವಹಿಸದಿರುವುದು ಆದರ ಬೇಜವ್ದಾರಿಯನ್ನು ಎತ್ತಿ ತೋರಿಸುತ್ತಿದೆ . ಅಷ್ಟು ಮಕ್ಕಳನ್ನು ಓಮ್ನಿಯಂತಹ ವಾಹನದಲ್ಲಿ ಕುರಿ ಮಂದೆಯಂತೆ ತುಂಬಿಸಿ ಶಾಲೆಗೆ ಕರೆ ತರಲಾಗುತ್ತಿದ್ದರೂ ಈ ಬಗ್ಗೆ ಗಮನ ಹರಿಸದ ಶಾಲಾಡಳಿತದ ಬಗ್ಗೆ ಆಕ್ರೋಶ ವ್ಯಕ್ತವಾಗುತ್ತಿದೆ.
ಚಾಲಕನ ನಿರ್ಲಕ್ಷ್ಯ: ಇದೀಗ ಅಪಘಾತದಲ್ಲಿ ಗಾಯಗೊಂಡಿರುವ ಕಾರುಮಾಲೀಕಹಾಗೂ ಚಾಲಕ ಮಾರ್ಟಿನ್ ಒಲಿವೆರಾ ರ ಪತ್ನಿ ಈ ಹಿಂದೆ ಬಜಪೆಯಲ್ಲಿ ನಡೆದ ವಿಮಾನಫಘಾತದಲ್ಲಿ ಮರಣ ಹೊಂದಿದ್ದು ನಂತರ ಫಿಲೋಮಿನಾ ಎಂಬಾಕೆಯನ್ನು ಅವರು ಮದುವೆಯಾಗಿದ್ದರು. ಫಿಲೋಮಿನಾ ಇದೇ ಡೋನ್ ಬಾಸ್ಕೊ ಶಾಲೆಯಲ್ಲಿ ಶಿಕ್ಷಕಿಯಾಗಿದ್ದು ದಂಪತಿಗಳ ಪುತ್ರನಾದ ಅಲ್ವಿಟಾ ಇದೇ ಶಾಲೆಯಲ್ಲಿ ಓದುತ್ತಿದ್ದಾನೆ. ಅಪಘಾತಕ್ಕೆ ಕಾರು ಚಾಲಕನ ನಿರ್ಲಕ್ಷತೆಯೇ ಕಾರಣವೆನ್ನಲಾಗುತ್ತಿದ್ದು, ತನ್ನ ಚಿಕ್ಕ ಎಡವಟ್ಟಿಗೆ ಉಳಿದ ಅಮಾಯಕ ಮಕ್ಕಳೊಂದಿಗೆ ತನ್ನ ಮಗ ಅಲ್ವಿಟನನ್ನೂ ಸಹಾ ಸಾವಿನ ತೆಕ್ಕೆಗೆ ಅಟ್ಟಿಸಿಬಿಟ್ಟಿದ್ದಾನೆ ಮಾರ್ಟಿನ್.
One thought on “ಕುಂದಾಪುರ ಹೆಮ್ಮಾಡಿಯಲ್ಲಿ ಕರಗಿಲ್ಲ ಸ್ಮಶಾನ ಮೌನದ ಕಾರ್ಮೋಡ”