ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಬೈಂದೂರು ವ್ಯವಸಾಯ ಸೇವಾ ಸಹಕಾರಿ ಸಂಘದ ವಾರ್ಷಿಕ ಮಹಾಸಭೆ ಗುರುವಾರ ಸಂಘದ ಅಧ್ಯಕ್ಷರಾದ ಟಿ. ನಾರಾಯಣ ಹೆಗ್ಡೆಯವರ ಅಧ್ಯಕ್ಷತೆಯಲ್ಲಿ ಸಂಘದ ಪ್ರಧಾನ ಕಛೇರಿ ಯಡ್ತರೆಯಲ್ಲಿ ಜರುಗಿತು. ಸಂಘವು ೨೦೧೫-೧೬ನೇ ಸಾಲಿನಲ್ಲಿ ರೂ. ೩೬೬.೦೬ ಕೋಟಿಗೂ ಮೀರಿ ವ್ಯವಹಾರ ಮಾಡಿ ರೂ. ೯೦.೪೧ ಲಕ್ಷ ಲಾಭ ಗಳಿಸಿದ್ದು, ತನ್ನ ಲಾಭಾಂಶದಲ್ಲಿ ತನ್ನ ಸದಸ್ಯರಿಗೆ ಶೇಕಡಾ ೧೬ ಡಿವಿಡೆಂಡ್ ಘೋಷಿಸಿದೆ.
ಸಂಘವು ವರದಿ ಸಾಲಿನಲ್ಲಿ ೪೧.೨೬ ಕೋಟಿ ರೂ. ಠೇವಣಿ ಹೊಂದಿದ್ದು, ೩೦.೨೨ ಕೋಟಿ ರೂ. ಹೊರಬಾಕಿ ಸಾಲ ಇರುತ್ತದೆ. ರೂ.೫೨.೩೧ ಕೋಟಿ ದುಡಿಯುವ ಬಂಡವಾಳ ಹೊಂದಿದ್ದು, ಅಡಿಟ್ ವರ್ಗೀಕರಣದಲ್ಲಿ ಎ ತರಗತಿ ಹೊಂದಿರುತ್ತದೆ.
ಸಂಘದ ವ್ಯಾಪ್ತಿಗೆ ಬರುವ ಫ್ರೌಢಶಾಲಾ ವಿಭಾಗದ ೨೦೧೫-೧೬ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ೧೦ನೇ ತರಗತಿಯಲ್ಲಿ ಶಾಲೆಗೆ ಅತೀ ಹೆಚ್ಚು ಅಂಕ ಗಳಿಸಿದ ೨೨ ವಿದ್ಯಾರ್ಥಿಗಳಿಗೆ ಸಂಘದ ವತಿಯಿಂದ ಪ್ರೋತ್ಸಾಹಧನ ಹಾಗೂ ಅಭಿನಂದನಾ ಪತ್ರವನ್ನು ನೀಡಲಾಯಿತು.
ಸಭೆಯಲ್ಲಿ ಸಂಘದ ನಿರ್ದೇಶಕರಾದ ಎನ್.ನಾಗರಾಜ ಶೆಟ್ಟಿ, ವೆಂಕ್ಟ ಪೂಜಾರಿ , ಸದಾಶಿವ ಡಿ.ಪಡುವರಿ ,ಕೆ.ಬಾಬು ಶೆಟ್ಟಿ , ಗಿರೀಶ್ ಮೇಸ್ತ , ಚಿಕ್ಕು ಪೂಜಾರಿ , ವಸಂತ ಕುಮಾರ ಶೆಟ್ಟಿ , ಜ್ಯೋತಿ ಶೇರುಗಾರ್ , ರಜನಿ ಶ್ಯಾನುಭೋಗ್ , ವಾಸು ಮರಾಠಿ , ಕೃಷ್ಣ ದೇವಾಡಿಗ , ಜಿಲ್ಲಾ ಬ್ಯಾಂಕ್ ಪ್ರತಿನಿಧಿ ಎಸ್. ಶಿವರಾಮ ಯಡ್ತರೆ ಮೊದಲಾದವರು ಉಪಸ್ಥಿತರಿದ್ದರು. ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ. ಕಿಟ್ಟಣ್ಣ ರೈ ಸ್ವಾಗತಿಸಿ ವ್ಯವಸ್ಥಾಪಕ ಕೆ. ತಿಮ್ಮಪ್ಪ ಪೂಜಾರಿ ವರದಿ ಮಂಡಿಸಿದರು. ವ್ಯವಸ್ಥಾಪಕ ವೈ. ವಿಶ್ವನಾಥ ಶ್ಯಾನುಭಾಗ ವಂದಿಸಿದರು.