ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಬೈಂದೂರು ವಿಧಾನ ಸಭಾ ಕ್ಷೇತ್ರದ ಶಾಸಕರಾದ ಗುರುರಾಜ್ ಶೆಟ್ಟಿ ಗಂಟಿಹೊಳೆ ಅವರು ಬೈಂದೂರು ಪಶು ಆಸ್ಪತ್ರೆಯಲ್ಲಿ ಪಶು ಸಂಗೋಪನೆ ಇಲಾಖೆಯ ಎಲ್ಲಾ ಹಂತದ ಅಧಿಕಾರಿಗಳೊಂದಿಗೆ ಇಲಾಖೆಯ ವಿವಿಧ ಯೋಜನೆಗಳು ಹಾಗೂ ಯೋಜನೆ ಅನುಷ್ಠಾನದಲ್ಲಿನ ವಿಚಾರಗಳ ಕುರಿತಾಗಿ ಸಭೆ ನಡೆಸಿದರು.
ಸಭೆಯನ್ನು ಉದ್ದೇಶಿಸಿ ಮಾತನಾಡಿದ ಶಾಸಕರು ರಾಜ್ಯದಲ್ಲಿ ಪ್ರತಿ 5 ವರ್ಷಕ್ಕೊಮ್ಮೆ ಜಾನುವಾರು ಗಣತಿ ನಡೆಯುತ್ತಿದ್ದು, ಈ ಬಾರಿ ಉಡುಪಿ ಜಿಲ್ಲೆಯಲ್ಲಿ 21 ನೇ ಜಾನುವಾರು ಗಣತಿ ವರದಿ ಹೊರಬಿದ್ದಿದ್ದು, ದನ ಹಾಗೂ ಎಮ್ಮೆ 5 ವರ್ಷದ ಹಿಂದೆ ಇದ್ದ 2.57 ಲಕ್ಷ ಸಂಖ್ಯೆಯು ಇದೀಗ 1.96 ಲಕ್ಷಕ್ಕೆ ಅಂದರೆ ಶೇಕಡಾ 23 ರಷ್ಟು ಗಣನೀಯವಾಗಿ ಕುಸಿತ ಕಂಡಿದ್ದು ಆತಂಕ ಪಡುವ ವಿಚಾರವಾಗಿದೆ.

ಹಾಗಾಗಿ ಇಲಾಖೆಯು ಈ ವಿಚಾರವನ್ನು ಗಂಭೀರವಾಗಿ ತೆಗೆದುಕೊಂಡು ಜಾನುವಾರು ಸಂಖ್ಯೆ ಕುಸಿತವಾಗದಂತೆ ತಡೆಯಲು ಸಮಗ್ರ ಅಧ್ಯಯನದ ಜೊತೆಗೆ ವಿನೂತನ ಉಪ ಕ್ರಮಗಳನ್ನು ಅಳವಡಿಸಿಕೊಳ್ಳಲು ಸೂಚನೆ ನೀಡಿದರು
ಔಷಧಿಗಳ ಕೊರತೆ ಆಗದಂತೆ ಕ್ರಮವಹಿಸಿ:
ವಿವಿಧ ಪಶು ಚಿಕಿತ್ಸಾ ಕೇಂದ್ರಗಳಲ್ಲಿ ಜಾನುವಾರುಗಳ ಚಿಕಿತ್ಸೆಗೆ ಔಷಧಿಗಳ ಲಭ್ಯವಿಲ್ಲ ಎಂಬ ದೂರುಗಳು ಸಾರ್ವಜನಿಕರಿಂದ ಬರುತ್ತಿದ್ದು, ಕನಿಷ್ಠ ಔಷಧಿಗಳ ಲಭ್ಯತೆ ಇಲ್ಲವೆಂದರೆ ಅದು ಇಲಾಖೆಯ ವೈಫಲ್ಯಕ್ಕೆ ದಾರಿ ಮಾಡಿ ಕೊಡುತ್ತದೆ.ಈ ವಿಚಾರದ ಬಗ್ಗೆ ಅಧಿಕಾರಿಗಳು ಗಮನ ಹರಿಸಿ ಯಾವ ಕಾರಣಕ್ಕೂ ಔಷಧಿ ಕೊರತೆ ಆಗದಂತೆ ಕ್ರಮ ವಹಿಸಲು ತಾಕೀತು ಮಾಡಿದರು.
ಜಾನುವಾರುಗಳನ್ನು ವಿಮೆಗೆ ಒಳಪಡಿಸಲು ಕ್ರಮ ವಹಿಸಿ:
ಕ್ಷೇತ್ರದ ಜಾನುವಾರುಗಳ ಸಂಖ್ಯೆಯ ಅನುಪಾತಕ್ಕೆ ಅನುಗುಣವಾಗಿ ವಿಮೆಗೆ ಒಳಪಟ್ಟಿರುವ ಜಾನುವಾರುಗಳ ಸಂಖ್ಯೆ ತೀರಾ ಕಡಿಮೆ ಇರುವುದಾಗಿದೆ. ಕ್ಷೇತ್ರದಲ್ಲಿ ಸುಮಾರು 72,000 ಸಾವಿರ ಹಸುಗಳಿದ್ದರೆ ಕೇವಲ 15,000 ಹಸುಗಳು ವಿಮೆಗೆ ಒಳಪಟ್ಟಿವೆ. ಹಾಗಾಗಿ ಆಕಸ್ಮಿಕ ಮರಣ ಸಂದರ್ಭದಲ್ಲಿ ಹೈನುಗಾರರ ಕುಟುಂಬಕ್ಕೆ ಅಗತ್ಯ ಪರಿಹಾರ ನೀಡುವ ನಿಟ್ಟಿನಲ್ಲಿ ಗ್ರಾಮೀಣ ಆದಾಯ ಮೂಲದ ಎಲ್ಲಾ ಜಾನುವಾರುಗಳನ್ನು ವಿಮಾ ಸೌಲಭ್ಯಕ್ಕೆ ಒಳ ಪಡಿಸಲು ಅಗತ್ಯ ಕ್ರಮ ಕೈಗೊಳ್ಳಲು ಸೂಚನೆ ನೀಡಿದರು.
ಹೈನುಗಾರರಿಗೆ ಹಾಲಿನ ಪ್ರೋತ್ಸಾಹ ಧನ ಪಾವತಿ ವಿಳಂಬ ಸಲ್ಲದು:
ಪ್ರಸ್ತುತ ಹೈನುಗಾರರಿಗೆ ಕೆ.ಎಂ.ಎಫ್ ವತಿಯಿಂದ ಪ್ರತಿ ಲೀಟರ್ ಹಾಲಿಗೆ ಪಾವತಿ ಮಾಡಬೇಕಾಗಿದ್ದ ಪ್ರೋತ್ಸಾಹ ಧನ ಪಾವತಿ ಬಾಕಿ ಇರುವ ಬಗ್ಗೆ ಶಾಸಕರು ಕೇಳಲಾಗಿ ಕೆ.ಎಂ.ಎಫ್ ಅಧಿಕಾರಿಗಳು ಮಾರ್ಚ್ ತಿಂಗಳವರೆಗೆ ಪ್ರೋತ್ಸಾಹ ಧನ ಪಾವತಿ ಅಗಿದೆ ಎಂದರು.ಈ ವಿಚಾರವಾಗಿ ಹೈನುಗಾರರಿಗೆ ಪಾವತಿ ಮಾಡ ಬೇಕಾದ ಪ್ರೋತ್ಸಾಹ ಧನ ವನ್ನು ಕೂಡಲೇ ಪಾವತಿಸಲು ಹಾಗೂ ಪ್ರತಿ ತಿಂಗಳಿಗೊಮ್ಮೆ ಪ್ರೋತ್ಸಾಹ ಧನ ಬಿಡುಗಡೆಗೆ ಕ್ರಮ ವಹಿಸಲು ಕೆ.ಎಂ. ಎಫ್ ಅಧಿಕಾರಿಗಳಿಗೆ ಸೂಚಿಸಿದರು.
ಇಲಾಖೆಯಲ್ಲಿ ಶೇ 70 ರಷ್ಟು ಹುದ್ದೆ ಕೊರತೆ: ಶೀಘ್ರ ಸರಕಾರಕ್ಕೆ ವರದಿಗೆ ಸೂಚನೆ:
ಇಲಾಖೆಯಲ್ಲಿ ಪಶು ವೈದ್ಯಾಧಿಕಾರಿಗಗಳು, ಜಾನುವಾರು ಅಧಿಕಾರಿ, ಕಿರಿಯ & ಹಿರಿಯ ಪಶು ವೈದ್ಯಕೀಯ ಪರಿವೀಕ್ಷಕರು ಸೇರಿದಂತೆ ಎಲ್ಲಾ ವೃಂದದಲ್ಲೂ ಶೇಕಡಾ 70 ರಷ್ಟು ಹುದ್ದೆ ಕೊರತೆ ಇದ್ದು, ಜಾನುವಾರುಗಳ ಪಾಲನೆ ಪೋಷಣೆ ಹಾಗೂ ಸಂರಕ್ಷಣೆಗೆ ಈ ಸಮಸ್ಯೆ ನೇರ ಪರಿಣಾಮ ಬೀರುತ್ತಿದೆ. ತಾಲೂಕಿನ ಪಶು ಆಸ್ಪತ್ರೆಗೆ ಮುಖ್ಯ ಪಶು ವೈದ್ಯಾಧಿಕಾರಿ ಹುದ್ದೆ ಇಲ್ಲದೇ ಇರುವ ಪರಿಸ್ಥಿತಿ ಇಡೀ ಇಲಾಖೆಯ ಮೇಲೆ ಜನರ ವಿಶ್ವಾಸ ಕಡಿಮೆ ಆಗಲು ಪೂರಕವಾದಂತೆ ಇದೆ. ವೈದ್ಯಾಧಿಕಾರಿಗಳ ಕೊರತೆ ಬಗ್ಗೆ ಈ ಹಿಂದೆ ಸದನದ ಗಮನ ಸೆಳೆದಾಗ ತಕ್ಷಣಕ್ಕೆ 400 ವೈದ್ಯಾಧಿಕಾರಿಗಳನ್ನು ಕೆಪಿ ಎಸ್ ಸಿ ಮೂಲಕ ನೇಮಕ ಮಾಡಲು ಸರಕಾರ ಕೈಗೊಂಡರೂ ಈವರೆಗೂ ಅವರಿಗೆಲ್ಲರಿಗೂ ನೇಮಕಾತಿ ಆದೇಶ ನೀಡದ ಕಾರಣ ಕ್ಷೇತ್ರದಲ್ಲಿ ಕೆಲವು ಕಡೆ ಒಬ್ಬರೇ ವೈದ್ಯಾಧಿಕಾರಿ 3-4 ಆಸ್ಪತ್ರೆಗಳಲ್ಲಿ ಕರ್ತವ್ಯ ನಿರ್ವಹಿಸಬೇಕಾದ ಅನಿವಾರ್ಯತೆ ಇದೆ. ಈ ಬಗ್ಗೆ ಸರಕಾರಕ್ಕೆ ಮತ್ತೊಮ್ಮೆ ಮನವಿ ಮಾಡಲಾಗುವುದು. ಪರಿಸ್ಥಿತಿ ಸರಿಯಾಗದಿದ್ದರೆ ಮುಂದಿನ ದಿನಗಳಲ್ಲಿ ಹೈನುಗಾರರೊಂದಿಗೆ ಸೇರಿ ಹೋರಾಟಕ್ಕೂ ಸಿದ್ಧ ಎಂದರು. ಹಾಗಾಗಿ ಜಿಲ್ಲಾ ಹಂತದಲ್ಲಿ ನೇಮಕಾತಿಗೆ ಅವಕಾಶವಿರುವ ಎಲ್ಲಾ ಹುದ್ದೆಗಳನ್ನು ಭರ್ತಿ ಮಾಡಲು ಅಗತ್ಯ ಕ್ರಮ ವಹಿಸುವುದು ಹಾಗೂ ಸಿಬ್ಬಂದಿ ಕೊರತೆ ಬಗ್ಗೆ ಇಲಾಖೆಗೆ ತಕ್ಷಣ ವರದಿ ನೀಡಲು ಉಪ ನಿರ್ದೇಶಕರಿಗೆ ಶಾಸಕರು ಸೂಚನೆ ನೀಡಿದರು.
ಪಶು ಇಲಾಖೆಗೆ ಚೈತನ್ಯ ತುಂಬುತ್ತಿರುವ ಪಶು ಸಖಿಯರ ಸಮಸ್ಯೆಗಳ ಬಗ್ಗೆ ಶಾಸಕರಿಂದ ಸಂವಾದ:
ತೀವ್ರ ಸಿಬ್ಬಂದಿ ಕೊರತೆಯಿಂದ ನಲುಗುತ್ತಿರುವ ಇಲಾಖೆಗೆ ಎನ್.ಎಲ್. ಆರ್. ಎಂ ನಡಿ ಆಯ್ಕೆಗೊಂಡ ಪಶು ಸಖಿಯರು ತಮಗೆ ಸಿಗುತ್ತಿರುವ ಸೀಮಿತ ಗೌರವ ಧನದ ಹೊರತಾಗಿಯೂ ಮಾನವೀಯತೆಯಿಂದ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಜಾನುವಾರು ಗಣತಿ ಹಾಗೂ ಲಸಿಕಾ ಕಾರ್ಯಕ್ರಮಗಳಲ್ಲಿ ಪಶು ಸಖಿಯವರ ಉತ್ಸಾಹ ಭರಿತ ಪಾಲ್ಗೊಳ್ಳುವಿಕೆಯಿಂದ ಇಲಾಖೆಗೆ ಚೈತನ್ಯ ಬಂದಿದೆ.ಇಂತಹ ಪರಿಸ್ಥಿತಿಯಲ್ಲೂ ಅಚ್ಚು ಕಟ್ಟಾದ ಕಾರ್ಯ ನಿರ್ವಹಣೆಗೆ ಪಶು ಸಖಿಯರು ಅಭಿನಂದನಾರ್ಹರು ಎಂದರು ಪಶು ಸಖಿಯರು ಕ್ಷೇತ್ರ ಮಟ್ಟದಲ್ಲಿ ಎದುರಿಸುತ್ತಿರುವ ಅಡ್ಡಿ ಆತಂಕಗಳ ಬಗ್ಗೆ ಅವರೊಂದಿಗೆ ಶಾಸಕರು ಸಂವಾದ ನಡೆಸಿ, ಎಲ್ಲಾ ಪಶು ಸಖಿಯರ ನ್ಯಾಯಯುತ ಬೇಡಿಕೆಗಳಿಗೆ ಸಂಬಂಧ ಪಟ್ಟ ಇಲಾಖೆಗಳು ಸ್ಪಂದಿಸಬೇಕು ಎಂದರು.
1962 ಕರೆ ಸ್ವೀಕಾರ ವ್ಯವಸ್ಥೆ ಇನ್ನಷ್ಟು ಸುಧಾರಿಸಲು ಕ್ರಮ ವಹಿಸಿ:
ಜಾನುವಾರುಗಳಿಗೆ ಅಗತ್ಯ ತುರ್ತು ಸಂದರ್ಭದಲ್ಲಿ ಚಿಕಿತ್ಸೆ ನೀಡಲು ಇಲಾಖೆಯ ತುರ್ತು ಸೇವೆ ಆಂಬುಲೆನ್ಸ್ ವಾಹನ ವ್ಯವಸ್ಥೆಯ 1962 ಸಹಾಯವಾಣಿ ಸಂಖ್ಯೆಗೆ ಕರೆ ಮಾಡಿದರೆ ಕರೆ ಸ್ವೀಕಾರ ಮಾಡುತ್ತಿಲ್ಲ ಹಾಗೂ ಸರಿಯಾದ ಸ್ಪಂದನೆ ಇಲ್ಲ ಎಂಬ ಸಾರ್ವಜನಿಕರ ದೂರುಗಳಿವೆ. ಹಾಗಾಗಿ ಇದರ ಬಗ್ಗೆ ಇಲಾಖೆ ಗಮನ ಹರಿಸಿ ಎಲ್ಲಾ ಕರೆಗಳು ಸ್ವೀಕಾರ ಆಗುವ ನಿಟ್ಟಿನಲ್ಲಿ ವ್ಯವಸ್ಥೆಯನ್ನು ಸುಧಾರಿಸಲು ಅಗತ್ಯ ಕ್ರಮ ವಹಿಸಲು ಅಧಿಕಾರಿಗಳಿಗೆ ಶಾಸಕರು ಸೂಚಿಸಿದರು.
ಕ್ಷೇತ್ರದ ಹಲವು ಕಡೆ ಕಾಡು ಹಂದಿಗಳ ಕಳೇ ಬರ ಪತ್ತೆ : ತುರ್ತು ಕ್ರಮಕ್ಕೆ ಶಾಸಕರ ಸೂಚನೆ:
ಕಳೆದ ಕೆಲವು ದಿನಗಳಿಂದ ಕ್ಷೇತ್ರದಾದ್ಯಂತ ಹಲವು ಗ್ರಾಮಗಳ ಅರಣ್ಯ ಸರಹದ್ದಿನಲ್ಲಿ ಕಾಡು ಹಂದಿಗಳ ಸಾವಿನ ಬಗ್ಗೆ ಹಾಗೂ ಕೊಳೆತ ಸ್ಥಿತಿಯಲ್ಲಿ ಮೃತ ದೇಹ ಸಿಕ್ಕಿರುವ ಬಗ್ಗೆ ಈಗಾಗಲೇ ಪತ್ರಿಕೆಗಳು ವರದಿ ಮಾಡುತ್ತಿವೆ. ಈ ವಿಚಾರವಾಗಿ ಅರಣ್ಯ ಇಲಾಖೆ, ಆರೋಗ್ಯ ಇಲಾಖೆ ಹಾಗೂ ಸ್ಥಳೀಯಾಡಳಿತಗಳ ಅಧಿಕಾರಿಗಳ ಜೊತೆ ಮಾತನಾಡಲಾಗಿದೆ. ಹಾಗೂ ಅಗತ್ಯ ಮುಂಜಾಗ್ರತೆ ಕ್ರಮಗಳನ್ನು ಕೈಗೊಳ್ಳುವುದರ ಜೊತೆಗೆ ಗ್ರಾಮಸ್ಥರಲ್ಲಿ ಇರುವ ಆತಂಕ ದೂರ ಮಾಡಲು ಸೂಚನೆ ನೀಡಲಾಗಿದೆ. ಈ ಬಗ್ಗೆ ಪಶು ಇಲಾಖೆ ಅಧಿಕಾರಿಗಳಿಗೆ ಮಾತನಾಡಲಾಗಿ ಈಗಾಗಲೇ ಮೃತ ಹಂದಿಯ ಸ್ಯಾಂಪಲ್ ನ್ನು ಪಡೆದು ಕೊಳ್ಳಲಾಗಿದ್ದು, ಮರಣೋತ್ತರ ಪರೀಕ್ಷೆ ವರದಿ ಬರಲು ಬಾಕಿ ಇದೆ ಎಂದು ಅಧಿಕಾರಿಗಳು ಉತ್ತರಿಸಿದರು. ಈ ವಿಚಾರವಾಗಿ ಮಾತನಾಡಿದ ಶಾಸಕರು ಆದಷ್ಟು ಶೀಘ್ರ ವರದಿ ಪಡೆದು ಅರಣ್ಯ, ಆರೋಗ್ಯ ಹಾಗೂ ಸ್ಥಳೀಯಾಡಳಿತದೊಂದಿಗೆ ಸಮನ್ವಯ ಸಾಧಿಸಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಸೂಚನೆ ನೀಡಿದರು.
ಸಭೆಯಲ್ಲಿ ಪಶು ಪಾಲನೆ ಇಲಾಖೆಯ ಉಪ ನಿರ್ದೇಶಕರಾದ ಡಾ. ರೆಡ್ಡಪ್ಪ, ಕುಂದಾಪುರ ತಾಲೂಕು ಮುಖ್ಯ ಪಶು ವೈದ್ಯಾಧಿಕಾರಿ ಡಾ. ಅರುಣ್ ಕುಮಾರ್ ಹೆಗ್ಡೆ, ಬೈಂದೂರು ಹಾಗೂ ಕುಂದಾಪುರ ತಾಲೂಕಿನ ವಿವಿಧ ಪಶು ಚಿಕಿತ್ಸಾ ಕೇಂದ್ರದ ವೈದ್ಯಾಧಿಕಾರಿಗಳು, ಕೆಎಂಎಫ್ ಪ್ರತಿ ನಿಧಿಗಳು ಹಾಗೂ ಪಶು ಸಖಿಯರು ಉಪಸ್ಥಿತರಿದ್ದರು.
















