ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಕನ್ನಡ ಸಾಹಿತ್ಯ ಪರಿಷತ್ತು ಸಾಹಿತ್ಯ, ಸಾಹಿತಿಗಳಿಗೆ ಮಾತ್ರ ಸೀಮಿತವಾಗಿರದೇ ನಾಡು ನುಡಿ ಸಂಸ್ಕೃತಿ ಹೀಗೆ ಎಲ್ಲಾ ಕ್ಷೇತ್ರದಲ್ಲಿಯೂ ತೊಡಗಿಸಿಕೊಳ್ಳುವ ಮೂಲಕ ಕನ್ನಡ ಮನಸ್ಸುಗಳನ್ನು ಅರಳಿಸುವ ಉದ್ದೇಶವಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ ಉಡುಪಿ ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಹೇಳಿದರು.
ಅವರು ಕನ್ನಡ ಸಾಹಿತ್ಯ ಪರಿಷತ್ ವಂಡ್ಸೆ ಹೋಬಳಿ ಘಟಕ, ಗೀತಾನಂದ ಫೌಂಡೇಶನ್ ಮಣೂರು ಪಡುಕೆರೆ ಆಶ್ರಯದಲ್ಲಿ ಕಸಾಪ ತಿಂಗಳ ಸಡಗರದ ಅಂಗವಾಗಿ ಚಿತ್ತೂರು ಚಿತ್ರಕೂಟ ಆಯುರ್ವೇದ ಆರೋಗ್ಯಧಾಮದಲ್ಲಿ ಆಯೋಜಿಸಿದ್ದ ಮನೆಯಂಗಳದಲ್ಲಿ ಸಾಹಿತ್ಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.
ಈ ಸಂದರ್ಭದಲ್ಲಿ ಪ್ರಗತಿಪರ ಸಾವಯವ ಕೃಷಿಕ ಮಹಾಬಲ ಬಾಯರಿ ಕಳಿ ದಂಪತಿಗಳನ್ನು ಸನ್ಮಾನಿಸಲಾಯಿತು. ಯುವ ಕವಿಗಳಿಂದ ಕವನ ವಾಚನ ನಡೆಯಿತು. ಕುಂದಾಪುರ ತಾಪಂ ಸದಸ್ಯ ಉದಯ ಜಿ. ಪೂಜಾರಿ, ಕಸಾಪ ತಾಲೂಕು ಅಧ್ಯಕ್ಷ ಸುಬ್ರಹ್ಮಣ್ಯ ಭಟ್, ಕಸಾಪ ಜಿಲ್ಲಾ ಗೌರವ ಕಾರ್ಯದರ್ಶಿ ನಾರಾಯಣ ಮಡಿ, ತಾಲೂಕು ಗೌರವ ಕಾರ್ಯದರ್ಶಿ ಡಾ. ಕಿಶೋರ್ಕುಮಾರ್ ಶೆಟ್ಟಿ, ಚಿತ್ರಕೂಟ ಆರೋಗ್ಯಧಾಮದ ವೈದ್ಯ ಡಾ. ರಾಜೇಶ್ ಬಾಯರಿ ಉಪಸ್ಥಿತರಿದ್ದರು. ಪ್ರಜ್ಞಾ ಪ್ರಾರ್ಥಿಸಿದರು. ಮಂಜುನಾಥ ನೆಂಪು ನಿರೂಪಿಸಿದರು. ಕಸಾಪ ವಂಡ್ಸೆ ಹೋಬಳಿ ಅಧ್ಯಕ್ಷ ಚಂದ್ರ ಕೆ. ಹೆಮ್ಮಾಡಿ ಸ್ವಾಗತಿಸಿ, ದಿವಾಕರ ವಂಡ್ಸೆ ವಂದಿಸಿದರು.