ಕುಂದಾಪ್ರ ಡಾಟ್ ಕಾಂ ಸುದ್ದಿ
ಮೂಡುಬಿದಿರೆ: ಆಳ್ವಾಸ್ ನುಡಿಸಿರಿ ಅಂಗವಾಗಿ ಮೂಡುಬಿದಿರೆ ಪುತ್ತಿಗೆ ಆಳ್ವಾಸ್ ಪ್ರೌಢಶಾಲಾ ಆವರಣದಲ್ಲಿ ನ.10ರಿಂದ 13ರ ತನಕ ರಾಜ್ಯಮಟ್ಟದ ಚಿತ್ರಕಲಾ ಶಿಬಿರ ‘ಆಳ್ವಾಸ್ ಚಿತ್ರಸಿರಿ 2016’ ಹಮ್ಮಿಕೊಳ್ಳಲಾಗಿದೆ.
ರಾಜ್ಯದ ವಿವಿಧ ಜಿಲ್ಲೆಗಳ 32 ಶ್ರೇಷ್ಠ ಸಮಕಾಲೀನ ಕಲಾವಿದರು ತಲಾ ಎರಡು (ಒಟ್ಟು 64) ಕಲಾಕೃತಿಗಳನ್ನು ಶಿಬಿರದಲ್ಲಿ ಪ್ರಸ್ತುತಪಡಿಸಲಿದ್ದಾರೆ. ಮೂಡುಬಿದಿರೆ ಜೈನ ಮಠದ ಶ್ರೀ ಚಾರುಕೀರ್ತಿ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯ ಸ್ವಾಮೀಜಿ ಉದ್ಘಾಟಿಸುವರು. ಉದ್ಯಮಿ ಮನೋಹರ ಶೆಟ್ಟಿ ಮುಖ್ಯ ಅತಿಥಿಯಾಗಿರುವರು ಎಂದು ಹಿರಿಯ ಕಲಾವಿದ, ಕಾರ್ಯಕ್ರಮ ಸಲಹಾ ಸಮಿತಿಯ ಗಣೇಶ ಸೋಮಯಾಜಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಸಮಾರೋಪದಲ್ಲಿ ಮೈಸೂರಿನ ಹಿರಿಯ ಕಲಾವಿದ ಜಿ.ಎಲ್. ಎನ್.ಸಿಂಹ ಅವರಿಗೆ 2016ನೇ ಸಾಲಿನ ‘ಆಳ್ವಾಸ್ ಚಿತ್ರಸಿರಿ’ ಪ್ರಶಸ್ತಿ ಪ್ರದಾನ ನಡೆಯಲಿದೆ. 25 ಸಾವಿರ ರೂ.ನಗದು ಬಹುಮಾನ ಒಳಗೊಂಡಿದೆ ಎಂದು ಹೇಳಿದರು.
ಶಿಬಿರದ ಅವಧಿಯಲ್ಲಿ ಪ್ರತಿದಿನ ಸಾಯಂಕಾಲ ಕಲಾವಿದರು ತಮ್ಮ ಪೂರ್ವ ಕಲಾಕೃತಿಗಳ ಸ್ಲೈಡ್ ಶೋ ಹಾಗೂ ಕಲಾ ಸಂವಾದದಲ್ಲಿ ಭಾಗವಹಿಸುವರು. ಚಿತ್ರ ರಚನೆ ವೀಕ್ಷಣೆಗೆ ಸಾರ್ವಜನಿಕರಿಗೆ ಅವಕಾಶ ಒದಗಿಸಲಾಗುವುದು. ಇಲ್ಲಿ ರೂಪುಗೊಳ್ಳುವ ಕಲಾಕೃತಿಗಳನ್ನು ನ.18ರಿಂದ 20ರ ತನಕ ನಡೆಯುವ ಆಳ್ವಾಸ್ ನುಡಿಸಿರಿ ಸಂದರ್ಭ ಪ್ರದರ್ಶಿಸಲಾಗುವುದು ಎಂದು ತಿಳಿಸಿದರು.
ಆಳ್ವಾಸ್ ನುಡಿಸಿರಿ ಸಂದರ್ಭ ಚಿತ್ರಕಲೆ ಕುರಿತು ಜನಜಾಗೃತಿಗಾಗಿ ಬೃಹತ್ ಚಿತ್ರಸಂತೆ ಆಯೋಜಿಸಲಾಗಿದೆ. ನಾಡಿನ ಕಲಾವಿದರಿಗೆ ಇದೊಂದು ಸುವರ್ಣ ಅವಕಾಶ. ಈ ಕಲಾ ಸಂತೆಯಲ್ಲಿ ಚಿತ್ರ ಪ್ರದರ್ಶನ ಹಾಗೂ ಮಾರಾಟ ನಡೆಯಲಿದೆ ಎಂದು ಶಿಬಿರದ ಸಂಯೋಜಕ ಭಾಸ್ಕರ ನೆಲ್ಯಾಡಿ ಹೇಳಿದರು. ಸಲಹಾ ಸಮಿತಿ ಸದಸ್ಯರಾದ ಕೋಟಿ ಪ್ರಸಾದ್ ಆಳ್ವ. ಪುರುಷೋತ್ತಮ ಅಡ್ವೆ ಸುದ್ದ್ದಿಗೋಷ್ಠಿಯಲ್ಲಿದ್ದರು.
ಕಲಾವಿದರಾದ ಕೆ.ವಿ.ಕಾಳೆ (ಬಳ್ಳಾರಿ), ಡಾ. ಸುನೀತಾ ಪಾಟೀಲ್ (ಹುಬ್ಬಳ್ಳಿ), ದಯಾನಂದ ಕಾಮ್ಕರ್, ಕುಮಾರ್ ಎಸ್. ಕಾಟೇನಹಳ್ಳಿ (ಧಾರವಾಡ), ದಿಲೀಪ್ ಕುಮಾರ್ ಕಾಳೆ (ಬೆಳಗಾವಿ), ಯಮನೂರ ಸಾಟ್ (ಕಲಬುರಗಿ) ಲಿಂಗರಾಜು ಎಂ.ಎಸ್. (ಚಿಕ್ಕಮಗಳೂರು), ಪ್ರದೀಪ್ ಕುಮಾರ್ ಡಿ.ಎಂ., ರಾಘವೇಂದ್ರ ನಾಯಕ್ (ದಾವಣಗೆರೆ), ಮಂಜುನಾಥ್ ಕೆ.ಆರ್. (ಕೊಡಗು), ವೀರಣ್ಣ ಕರಡಿ, ಜಯದೇವಣ್ಣ (ಮೈಸೂರು), ಜಗನ್ನಾಥ ಬೆಲ್ಲದ, ಅಪ್ಪಾ ಸಾಹೇಬ ಗೇಣಿಗೇರ್, ಬಾಗೂರು ಮಾರ್ಕಂಡೇಯ, ಚಲ್ಮೇಶ್ ಜಿ.ಎಚ್, ಜಯರಾಮ್ ಭಟ್ ಗಿಳಿಯಾಲ್, ಹೇಮಾವತಿ ಎಂ., ಐಶ್ವರ್ಯನ್ (ಬೆಂಗಳೂರು), ಕೋಟಿಗದ್ದೆ ರವಿ (ಶಿವಮೊಗ್ಗ), ಕಮಲ್ ಅಹಮ್ಮದ್, ಈರಣ್ಣ ತಿಪ್ಪನ್ನನವರ್ (ಗದಗ), ಪರಮೇಶ್ವರ ವಿ.ಹುಲಮನಿ, ಸಿದ್ದಲಿಂಗಪ್ಪ ಎಂ. ಕುರುಬರ (ಹಾವೇರಿ) ಹೇಮರೆಡ್ಡಿ ಎನ್. (ರಾಯಚೂರು), ಮೋಹನ್ ಕಡಬ, ಮುಸ್ತಾಫ, ದಿವಾಕರ್ ಸಾನೆಕಲ್ (ಉಡುಪಿ), ರೇಷ್ಮಾ ಶೆಟ್ಟಿ, ಧನಂಜಯ, ವಸಂತಕುಮಾರ್ (ದಕ್ಷಿಣ ಕನ್ನಡ), ಮಮತಾ ಡಿ.ವಿ. (ಹಾಸನ).