ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಕಲಾವಿದರು, ಬರಹಗಾರರಿಂದ ಸಮಾಜದ ಓರೆ ಕೋರೆಗಳನ್ನು ತಿದ್ದುಲು ಕಷ್ಟವಾಗುತ್ತಿರುವ ಕಾಲಘಟ್ಟದಲ್ಲಿ ಕಾರ್ಟೂನ್ ಮನಸ್ಸುಗಳನ್ನು ರೂಪಿಸುವ ಕೆಲಸ ಮಾಡುತ್ತಿದೆ. ಕಾರ್ಟೂನುಗಳ ಮೂಲಕ ಎಳೆಯರಲ್ಲಿ ವಾಸ್ತವತೆಯ ಪ್ರಜ್ಞೆ ಮೂಡಿಸುವ ಕೆಲಸ ನಡೆಯುತ್ತಿದೆ ಎಂದು ರಂಗಕರ್ಮಿ ವಸಂತ ಬನ್ನಾಡಿ ಅಭಿಪ್ರಾಯಪಟ್ಟಿದ್ದಾರೆ.
ಕುಂದಾಪುರ ಕಾರ್ಟೂನ್ ಬಳಗ ಆಶ್ರಯದಲ್ಲಿ ಕುಂದಾಪುರದ ಕಲಾ ಮಂದಿರದಲ್ಲಿ ಭಾನುವಾರ ನಡೆದ ಕಾರ್ಟೂನ್ ಹಬ್ಬದ ಎರಡನೇ ದಿನ ಮಾಸ್ಟರ್ ಸ್ಟ್ರೋಕ್ ಉದ್ಘಾಟಿಸಿ ಮಾತನಾಡಿ, ಭಯೋತ್ದಾದನೆ, ಕೋಮು ಸಂಘರ್ಷ, ಜಾಗತೀಕರಣದ ಪ್ರಭಾವದಿಂದ ಸಮಾಜದ ಮೇಲಾಗುತ್ತಿರುವ ಪರಿಣಾಮವನ್ನು ಎದುರಿಸುವ ಕಾರ್ಯ ವ್ಯಂಗ್ಯಚಿತ್ರಕಾರಿಂದ ಆಗುತ್ತಿದೆ ಎಂದರು.
ಸಾಹಿತ್ಯ ನಿಲ್ಲಿಸಿದ್ದ ವರ್ತಮಾನದ ಸಂವೇದನೆಗೆ ಸ್ಪಂದಿಸುವ ಕಾರ್ಯವನ್ನು ವ್ಯಂಗ್ಯಚಿತ್ರಕಾರರು ಮುಂದುವರಿಸಿಕೊಂಡು ಹೋಗುತ್ತಿದ್ದಾರೆ. ಸಾಹಿತ್ಯ ಹಾಗೂ ಸಿನೆಮಾ ಮಾಡಬೇಕಾದ್ದನ್ನು ಕಾರ್ಟೂನುಗಳ ಮಾಡುತ್ತಿದೆ ಎಂದವರು ಹೇಳಿದರು.
ಕಾರ್ಯಕ್ರಮದಲ್ಲಿ ಖ್ಯಾತ ವ್ಯಂಗ್ಯಚಿತ್ರಗಾರ ಹರಣಿ (ಹರಿಶ್ಚಂದ್ರ ಶೆಟ್ಟ) ಅವರನ್ನು ಕಾರ್ಟೂನು ಕುಂದಾಪ್ರ ಬಳಗದಿಂದ ಸನ್ಮಾನಿಸಲಾಯಿತು. ವ್ಯಂಗ್ಯ ಚಿತ್ರ ಕಲಾವಿದರಾದ ಪಂಜು ಗಂಗೊಳ್ಳಿ, ದಿನೇಶ್ ಕುಕ್ಕುಜಡ್ಕ, ಜೇಮ್ಸ್ ವಾಜ್, ಜಯರಾಮ, ಕುಂದಾಪುರ ಸಮುದಾಯದ ಉದಯ ಗಾಂವ್ಕರ್, ಪತ್ರಕರ್ತ ರಾಜಾರಾಂ ತಲ್ಲೂರು, ಬೆಂಗಳೂರು ಟಿಎನ್ಎಸ್ ಗ್ರೂಪ್ನ ತ್ಯಾಗರಾಜ ಶೆಟ್ಟಿ, ಇದ್ದರು. ಕಾರ್ಟೂನ್ ಹಬ್ಬ ಸಂಘಟಕ ಸತೀಶ್ ಆಚಾರ್ಯ ಸ್ವಾಗತಿಸಿದರು. ರವಿಕುಮಾರ್ ಗಂಗೊಳ್ಳಿ ನಿರೂಪಿಸಿದರು. ಕಾರ್ಟೂನ್ ಕುಂದಾಪ್ರ ಬಳಗದ ಸದಸ್ಯರಾದ ಚಂದ್ರಶೇಖರ ಶೆಟ್ಟಿ ಹಾಗೂ ಕೇಶವ ಸಸಿಹಿತ್ಲು ಅತಿಥಿಗಳ ಗೌರವಿಸಿದರು.
► ಕಾರ್ಟೂನು ಹಬ್ಬದ ವಿಶೇಷ ಪುಟ kundapraa.com/cartoonuhabba/