ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಕ್ರೀಯಾತ್ಮಕ ಹಾಗೂ ರಚನಾತ್ಮಕ ಸಾಂಸ್ಕೃತಿಕ ಮನಸ್ಸು ನಿರಂತರವಾಗಿ ಒಂದಿಲ್ಲೊಂದು ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವುದರಿಂದ ಸುಂದರ ವಾತಾವರಣ ನಿರ್ಮಾಣವಾಗುತ್ತದೆ. ಯಕ್ಷಗಾನ, ರಂಗಭೂಮಿ,ಕಲೆ ಸಾಹಿತ್ಯ ಕ್ಷೇತ್ರದಲ್ಲಿ ಹತ್ತಾರು ದಿಗ್ಗಜರುಗಳು ಹುಟ್ಟಿದ ಕರಾವಳಿಯ ಮಣ್ಣಲ್ಲಿ ಸಾಂಸ್ಕೃತಿಕ ಚಟುವಟಿಕೆಗಳಿಗೆ ವಿಪುಲ ಅವಕಾಶಗಳಿವೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವೆ ಉಮಾಶ್ರೀ ಹೇಳಿದರು.
ಅವರು ಸುರಭಿ ರಿ. ಬೈಂದೂರು ಸಂಸ್ಥೆಯು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದೊಂದಿಗೆ ಆಯೋಜಿಸಿದ ರಂಗಸುರಭಿ – ೨೦೧೬ರ ನಾಟಕ ಸಪ್ತಾಹದಲ್ಲಿ ಪಡುವರಿ ಗ್ರಾಮದ ಮಾವಿನಕುಳಿಯಲ್ಲಿ ಸುರಭಿ ಕಲಾಗ್ರಾಮಕ್ಕೆ ಶಿಲನ್ಯಾಸಗೈದ ಬಳಿಕ ಶಾರದಾ ವೇದಿಕೆಯಲ್ಲಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಕಲಾ ರಸಿಕರು ಕಲಾ ಪ್ರೋತ್ಸಾಹಕರು ಇಲ್ಲದೇ ಇದ್ದರೇ ಏನನ್ನೂ ಮಾಡಲು ಸಾಧ್ಯವಿಲ್ಲ. ಎಲ್ಲರ ಬೆಂಬಲದಿಂದ ಮಾತ್ರ ಉತ್ತಮ ಕಾರ್ಯಕ್ರಮಗಳ ಆಯೋಜನೆ ಸಾಧ್ಯ. ಸುರಭಿ ಸಂಸ್ಥೆಯ ನಿರಂತರವಾಗಿ ವಿದ್ಯಾರ್ಥಿಗಳಿಗೆ ಸಂಗೀತ, ಕಲೆಗಳ ತರಬೇತಿ ನೀಡುತ್ತಾ, ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಸಾಂಸ್ಕೃತಿಕ ಜಾಗೃತಿ ಮೂಡಿಸುತ್ತಿದ್ದು, ಸರಕಾರದ ಮಟ್ಟದಲ್ಲಿ ಅಗತ್ಯ ನೆರವು ನೀಡಲು ಬದ್ದ ಎಂದವರು ಭರವಸೆಯಿತ್ತರು.
ಕನ್ನಡ ಮತ್ತು ಸಂಸ್ಕತಿ ಇಲಾಖೆಯಲ್ಲಿ ಹಲವು ಗುಣಾತ್ಮಕ ಬದಲಾವಣೆಗಳನ್ನು ತರಲಾಗಿದೆ. ಆಡಳಿತ ಸುಧಾರಣೆಗಾಗಿ ತಂತ್ರಜ್ಞಾನವನ್ನು ಸಮರ್ಥವಾಗಿ ಬಳಸಿಕೊಂಡಿದ್ದು, ರಾಜ್ಯದಲ್ಲಿ ಜಿಲ್ಲಾ ಮಟ್ಟದ ತನಕ ಇಲಾಖೆಯಲ್ಲಿ ಕಾಗದರಹಿತ ಆಡಳಿತವನ್ನು ಮೊದಲು ಅಳವಡಿಸಿಕೊಂಡ ಹೆಗ್ಗಳಿಗೆ ನಮ್ಮದು. ಸರಕಾರದಿಂದ ಸಾಂಸ್ಕೃತಿಕ ಸಂಘ ಸಂಸ್ಥೆಗಳು ಹಾಗೂ ಕಲಾವಿದರಿಗೆ ನೀಡಲಾಗುತ್ತಿರುವ ಅನುದಾನದ ಸಮರ್ಪಕವಾದ ಬಳಕೆಯಾಗಬೇಕೆಂಬ ನಿಟ್ಟಿನಲ್ಲಿ ಆನ್ಲೈನ್ ಅರ್ಜಿ, ಖಾತೆಗಳಿಗೆ ನೇರ ಹಣ ವರ್ಗಾವಣೆ, ವೆಬ್ಸೈಟ್ಗಳಲ್ಲಿ ಕನ್ನಡ ಪುಸ್ತಕ, ಪಠ್ಯ ಅಳವಡಿಕೆ ಮುಂತಾದವುಗಳನ್ನು ಇಲಾಖೆಯಿಂದ ಮಾಡಲಾಗಿದೆ ಎಂದವರು ಹೇಳಿದರು.
ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ವಾಸುದೇವ ರಾವ್. ಪಿ ಉಡುಪಿ ಅವರನ್ನು ಸನ್ಮಾನಿಸಲಾಯಿತು. ಬೈಂದೂರು ಶಾಸಕ ಕೆ. ಗೋಪಾಲ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ನಾಟಕ ಅಕಾಡೆಮಿ ಸದಸ್ಯ ಉಮೇಶ್ ಸಾಲಿಯಾನ್, ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರವಿಕುಮಾರ್, ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಳದ ಮಾಜಿ ಆಡಳಿತ ಧರ್ಮದರ್ಶೀ ಜಯಾನಂದ ಹೋಬಳಿದಾರ್, ಪ್ರಥಮ ದರ್ಜೆ ಗುತ್ತಿಗೆದಾರರಾದ ಗೋಕುಲ್ ಶೆಟ್ಟಿ, ಶ್ರೀಧರ್ ಬೆಲೆಮನೆ, ಉದ್ಯಮಿಗಳಾದ ಅಶೋಕ್ ಕುಮಾರ್ ಬಾಡಾ, ಪ್ರಸಾದ್ ಪ್ರಭು, ಡಾ. ಪ್ರವೀಣ್ ಶೆಟ್ಟಿ, ಮಣೆಗಾರ್ ಅಬ್ದುಲ್ ರೆಹಮಾನ್, ಮೋಹನ್ ರೇವಣ್ಕರ್, ಸುರಭಿ ಸಂಸ್ಥೆಯ ಅಧ್ಯಕ್ಷ ಶಿವರಾಮ ಕೊಠಾರಿ ಉಪಸ್ಥಿತರಿದ್ದರು.
ಸುರಭಿ ಸಂಸ್ಥೆಯ ನಿರ್ದೇಶಕ ಸುಧಾಕರ ಪಿ. ಬೈಂದೂರು ಪ್ತಾಸ್ತಾವಿಕ ಮಾತುಗಳನ್ನಾಡಿದರು. ಗಣಪತಿ ಹೋಬಳಿದಾರ್ ಸನ್ಮಾನಿತರ ಪರಿಚಯ ಪತ್ರ ವಾಚಿಸಿದರು. ವ್ಯವಸ್ಥಾಪಕ ಕೃಷ್ಣಮೂರ್ತಿ ಉಡುಪ ಸ್ವಾಗತಿಸಿ, ಕಾರ್ಯದರ್ಶಿ ಲಕ್ಷ್ಮಣ ವೈ ಕೊರಗ ಧನ್ಯವಾದಗೈದರು. ಸ್ವಾತಿ ಶೇರುಗಾರ್ ಹಾಗೂ ಅಬ್ದುಲ್ ರವೂಫ್ ಕಾರ್ಯಕ್ರಮ ನಿರೂಪಿಸಿದರು.