ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ರಂಗಭೂಮಿಗೆ ವಿಶಿಷ್ಟವಾದ ಕಲ್ಪನಾಶಕ್ತಿಯಿದೆ. ಓದುವುದು ಹಾಗೂ ಕೇಳುವುದರ ಜೊತೆಗೆ ಶೋತ್ರುಗಳೊಂದಿಗೆ ಅನುಸಂಧಾನ ನಡೆಸಲು ನಾಟಕದಿಂದ ಮಾತ್ರವೇ ಸಾಧ್ಯವಿದೆ ಎಂದು ಟೀಚರ್ಸ್ ಕೋ-ಆಪರೇಟಿವ್ ಬ್ಯಾಂಕ್ ನಿರ್ದೇಶಕ ಕೆ.ಸಿ ರಾಜೇಶ್ ಹೇಳಿದರು.
ಅವರು ಸುರಭಿ ರಿ. ಬೈಂದೂರು ಹಾಗೂ ಯಸ್ಕೋರ್ಡ್ ಟ್ರಸ್ಟ್ ರಿ. ಆಶ್ರಯದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಕಾರದೊಂದಿಗೆ ಆಯೋಜಿಸಲಾಗಿದ್ದ ’ರಂಗಸುರಭಿ 2016’ ನಾಟಕ ಸಪ್ತಾಹದಲ್ಲಿ ದಿನದ ನುಡಿಗಳನ್ನಾಡುತ್ತಿದ್ದರು. ಕಲೆಯ ವಿವಿಧ ಪ್ರಕಾರಗಳ ಬದಲಾವಣೆಗಳನ್ನು ಕಂಡುಕೊಂಡಿದ್ದರೂ ರಂಗದ ಕಲಾವಿದರ ಕಲಾಶಕ್ತಿ ಹಾಗೂ ಸೃಜನಶೀಲತೆ ಇಂದಿಗೂ ಬದಲಾಗಿಲ್ಲ. ರಂಗದ ಕಲಾವಿದ ನೈಜತೆಯೊಂದಿಗೆ ಹತ್ತಿರವಾಗುತ್ತಾನೆ. ರಂಗಭೂಮಿಗೆ ಸುಧೀರ್ಘವಾದ ಹಿನ್ನಲೆ ಹಾಗೂ ಶಕ್ತಿಯಿದೆ. ಕನ್ನಡ ರಂಗಭೂಮಿಯ ಶಕ್ತಿಯೂ ದೊಡ್ಡದಿದ್ದು ಹಲವು ದಿಗ್ಗಜರು ತೊಡಗಿಸಿಕೊಂಡಿದ್ದಾರೆ ಎಂದವರು ವ್ಯಾಖ್ಯಾನಿಸಿದರು.
ರಾಷ್ಟ್ರೀಯ ಸಂತ ಕವಿ ಕನಕದಾಸ ಅಧ್ಯಯನ ಮತ್ತು ಸಂಶೋಧನಾ ಕೇಂದ್ರದ ಸಂಯೋಜಕ ಕಾ.ತ.ಚಿಕ್ಕಣ್ಣ ಮಾತನಾಡಿ ಮನುಷ್ಯನ ಸ್ವಭಾವವನ್ನು ನೇರವಾಗಿ ನೋಡುಗರಿಗೆ ಮುಟ್ಟಿಸುವ ಶಕ್ತಿ ಇರುವುದು ರಂಗಭೂಮಿಗೆ. ಇದು ಮನಷ್ಯನನ್ನು ತಿದ್ದುವುದಲ್ಲದೇ, ನಮ್ಮನ್ನು ನಾವು ಅರಿಯಲು ಸಾಧ್ಯವಾಗುತ್ತದೆ ಎಂದರು.
ರಂಗಭೂಮಿ ಹಾಗೂ ಕಿರುತೆರೆ ನಿರ್ದೇಶಕ ಎಸ್. ಎನ್. ಸೇತೂರಾಂ ಅವರನ್ನು ಸನ್ಮಾನಿಸಲಾಯಿತು. ಪಡುವರಿ ಗ್ರಾಪಂ ಅಧ್ಯಕ್ಷೆ ದೀಪಾ ಶೆಟ್ಟಿ, ಪ್ರಥಮದರ್ಜೆ ಗುತ್ತಿಗೆದಾರ ಜಗನ್ನಾಥ ಶೆಟ್ಟಿ ಎನ್., ಉದ್ಯಮಿ ಆನಂದ ಶೆಟ್ಟಿ, ಸುರಭಿಯ ನಿರ್ದೇಶಕರಾದ ಸುಧಾಕರ ಪಿ. ಬೈಂದೂರು, ಗಣಪತಿ ಹೋಬಳಿದಾರ್, ಕಾರ್ಯದರ್ಶಿ ಲಕ್ಷ್ಮಣ್ ವೈ ಕೊರಗ ಉಪಸ್ಥಿತರಿದ್ದರು. ಸುರಭಿ ರಿ. ಬೈಂದೂರು ಅಧ್ಯಕ್ಷ ಶಿವರಾಮ ಕೊಠಾರಿ ಯಡ್ತರೆ ಸ್ವಾಗತಿಸಿದರು. ಯಸ್ಕೋರ್ಡ್ ಟ್ರಸ್ಟ್ನ ಕೃಷ್ಣಮೂರ್ತಿ ಉಡುಪ ಕಬ್ಸೆ ವಂದಿಸಿದರು. ಶಿಕ್ಷಕ ವೆಂಕಟರಮಣ ಕಾರ್ಯಕ್ರಮ ನಿರೂಪಿಸಿದರು. ಅನನ್ಯ ಬೆಂಗಳೂರು ರಂತತಂಡ ಅಭಿನಯಿಸಿದ ಎಸ್.ಎನ್ ಸೇತೂರಾಂ ನಿರ್ದೇಶನದ ಅತೀತ ನಾಟಕ ಪ್ರದರ್ಶನಗೊಂಡಿತು.