ಕುಂದಾಪ್ರ ಡಾಟ್ ಕಾಂ ವಿಶೇಷ ವರದಿ.
ಬೈಂದೂರು: ಬೈಂದೂರು ಗ್ರಾಮೀಣ ಹಾಗೂ ಹಿಂದೂಳಿದ ಪ್ರದೇಶವೆಂಬ ಹಣೆಪಟ್ಟಿ ಕಟ್ಟಿಕೊಂಡಿದ್ದ ಕಾಲಘಟ್ಟದಲ್ಲಿ ಅಲ್ಲಿನ ಸಾಂಸ್ಕೃತಿಕ ಶ್ರಿಮಂತಿಕೆಯನ್ನು ಪ್ರದರ್ಶಿಸಲು ಎಪ್ಪತ್ತರ ದಶಕದಲ್ಲಿ ಬೈಂದೂರಿನ ಪ್ರಾತಿನಿಧಿಕ ಕಲಾಸಂಸ್ಥೆಯಾಗಿ ಜನ್ಮತಳೆದ ಲಾವಣ್ಯ, ಕಲೆಗಾಗಿ ಕಲೆ ಎಂಬ ಸಿದ್ಧಾಂತಕ್ಕೆ ಬದ್ಧರಾಗಿ, ನಿರಂತರವಾಗಿ ರಂಗಪ್ರಜ್ಞೆಯನ್ನು ಮೂಡಿಸುತ್ತಾ ಬೆಳೆದು ನಲವತ್ತನೇ ವಸಂತಕ್ಕೆ ಕಾಲಿರಿಸಿದೆ.
1977ರಲ್ಲಿ ಹವ್ಯಾಸಿ ಯುವ ಕಲಾವಿದರಾಗಿದ್ದ ಬಿ. ಗಣೇಶ್ ಕಾರಂತ್, ಯು. ಶ್ರೀನಿವಾಸ ಪ್ರಭು, ಬಿ. ಕೃಷ್ಣ ಅಡಿಗ, ರಾಮ ಟೈಲರ್, ಅನಿಲ್ ಕುಮಾರ್, ಆರ್.ಡಿ. ಟೈಲರ್, ವಿ. ಆರ್ ಬಾಲಚಂದ್ರ, ಉಮೇಶ್ ಕುಮಾರ್, ದಿ ಮೋಹನ್ ನಾಯಕ್, ದಿ. ರತ್ನಾಕರ್ ಆಚಾರ್ ಮುಂತಾದವರು ಸೇರಿ ಆರಂಭಿಸಿದ ’ಲಾವಣ್ಯ’ ಎಂಬ ಕಲಾಸಂಸ್ಥೆ ನಿರಂತರವಾಗಿ ಚಟುವಟಿಕೆಯಲ್ಲಿ ತೊಡಗಿಕೊಂಡು ರಂಗಭೂಮಿಯ ಕಂಪು ಪಸರಿಸುತ್ತಿದೆ.
ಆರಂಭದ ದಿನಗಳಲ್ಲಿಯೇ ಬೈಂದೂರಿನ ಇತಿಹಾಸದಲ್ಲೇ ಪ್ರಥಮ ಬಾರಿಗೆ ರಾಜ್ಯಮಟ್ಟದ ನಾಟಕ ಸ್ಪರ್ಧೆಯಲ್ಲಿ ’ರೊಟ್ಟಿ ಋಣ’ ನಾಟಕವನ್ನು ಪ್ರದರ್ಶಿಸಿ ಪ್ರಥಮ ಸ್ಥಾನದ ಪಾರಿತೋಷಕ ಹಾಗೂ ಇತರ ಮೂರು ಪಾರಿತೋಷಕ ಪಡೆದ ಹೆಗ್ಗಳಿಕೆ ಸಂಸ್ಥೆಯದ್ದು. ಮುಂದೆ ಅದು ’ಲಾವಣ್ಯ(ರಿ). ಬೈಂದೂರು’ ಎಂಬ ಹೆಸರಿನೊಂದಿಗೆ ನೊಂದಾಯಿಸಲ್ಪಟ್ಟಿತು.
ರಂಗತಂಡದ ಶಕ್ತಿಯಾಗಿ ಸಂಸ್ಥೆಯಲ್ಲಿ ಸೀತಾರಾಮ್ ಶೆಟ್ಟಿ ಕೂರಾಡಿ, ಸುರೇಶ್ ಆನಗಳ್ಳಿ, ರಾಜೇಂದ್ರ ಕಾರಂತ್ ಸೇರಿದಂತೆ ಹಲವು ಖ್ಯಾತ ರಂಗ ನಿರ್ದೇಶಕರಿಂದ 80ಕ್ಕೂ ಅಧಿಕ ನಾಟಕ ನಿರ್ದೇಶನ ಹಾಗೂ ಪ್ರಸ್ತುತಿ, 800ಕ್ಕೂ ಅಧಿಕ ಪ್ರದರ್ಶನ, ಆರ್ಥಿಕ ಶಿಸ್ತಿನ ಫಲವಾಗಿ ಸುಸಜ್ಜಿತ ರಂಗಮನೆ ಹಾಗೂ ರಂಗ ಪರಿಕರ, ಕಲಾ ಶ್ರೀಮಂತಿಗೆ ಪಾರಿತೋಷಕವಾಗಿ ರಾಜ್ಯ ಮಟ್ಟದ 23ಕ್ಕೂ ಹೆಚ್ಚು ನಾಟಕ ಸ್ವರ್ಧೆಗಳಲ್ಲಿ ಭಾಗವಹಿಸಿ 125ಕ್ಕೂ ಹೆಚ್ಚು ಬಹುಮಾನ, ಹಲವು ನಾಟಕೋತ್ಸವ, ನಾಟಕ ಸ್ವರ್ಧೆ, ಮಕ್ಕಳ ನಾಟಕ ಪ್ರಸ್ತುತಿ, ರಂಗ ತರಬೇತಿ, ಎಲ್ಲವೂ ಲಾವಣ್ಯದ ರಂಗ ಪಯಣ ಮೈಲುಗಲ್ಲುಗಳು. ಕುಂದಾಪ್ರ ಡಾಟ್ ಕಾಂ ವರದಿ.
ದಶಮಾನೋತ್ಸವದ ಸಂಭ್ರಮ, ವಿಶಂತಿ ಉತ್ಸವ ಸಂದರ್ಭದಲ್ಲಿ ಬೈಂದೂರಿನಲ್ಲೇ ಪ್ರಪ್ರಥಮ ಬಾರಿಗೆ ರಾಜ್ಯ ಮಟ್ಟದ ನಾಟಕ ಸ್ಪರ್ಧೆ ಆಯೋಜನೆ. 30ನೇ ವರ್ಷ ಪೂರೈಸಿದಾಗ “ರಂಗ ಲಾವಣ್ಯ-೩೦” ಸಂಭ್ರಮದ ಸಂದರ್ಭದಲ್ಲಿ ಕರ್ನಾಟಕ ನಾಟಕ ಅಕಾಡೆಮಿಯ ಸಹಯೋಗದೊಂದಿಗೆ ರಾಜ್ಯ ಮಟ್ಟದ ನಾಟಕೋತ್ಸವ. ’ರಂಗಶ್ರೀ’ 10 ದಿನಗಳ ರಾಜ್ಯಮಟ್ಟದ ನಾಟಕ ಸ್ಪರ್ಧೆಯ ಆಯೋಜನೆ, ಪಂಚರಂಗಿ ನಾಟಕೋತ್ಸವ ಹೀಗೆ ಹೆಸರಾಂತ ನಿರ್ದೇಶಕರುಗಳ ಪ್ರಸಿದ್ಧ ನಾಟಕಗಳನ್ನು ಬೈಂದೂರಿನಲ್ಲಿ ನೋಡುವ ಅವಕಾಶ ಒದಗಿಸಿದ್ದು ಲಾವಣ್ಯ.
ಕರ್ನಾಟಕ ನಾಟಕ ಅಕಾಡೆಮಿಯಿಂದ ‘ಸುವರ್ಣ ಕರ್ನಾಟಕ ರಂಗ ಸಾಧಕ ರಾಜ್ಯ ಪ್ರಶಸ್ತಿ’ ಪುರಸ್ಕೃತ ಗಣೇಶ ಕಾರಂತ್ ಹಾಗೂ ಮತ್ತವರ ತಂಡ ಸತತವಾಗಿ ಲಾವಣ್ಯವನ್ನು ಮುನ್ನಡೆಸಿಕೊಂಡು ಬಂದಿದ್ದರೇ, ಯು. ಶ್ರೀನಿವಾಸ ಪ್ರಭು ಅವರಿಗೆ ಜೊತೆಯಾಗಿ ನಿಂತಿದ್ದಾರೆ. ಪ್ರತಿ ಎರಡು ವರ್ಷಕ್ಕೊಮ್ಮೆ ಕಾರ್ಯಕಾರಿ ಸಮಿತಿಯನ್ನು ಬದಲಿಸುತ್ತಾ ಹೊಸಬರಿಗೆ ಅವಕಾಶ ನೀಡಲಾಗುತ್ತಿದೆ. ಪ್ರಸಕ್ತ ವರ್ಷದಲ್ಲಿ ಲಾವಣ್ಯ ಕಾರ್ಯಕಾರಿ ಸಮಿತಿ ಅಧ್ಯಕ್ಷರಾಗಿ ಗಿರೀಶ್ ಬೈಂದೂರು, ಪ್ರಧಾನ ಕಾರ್ಯದರ್ಶಿಯಾಗಿ ಬಿ. ಮೋಹನ ಕಾರಂತ್ ಇದ್ದರೇ, ಉತ್ಸವ ಸಮಿತಿ ಅಧ್ಯಕ್ಷರಾಗಿ ಸದಾಶಿವ ಡಿ., ಕಾರ್ಯದರ್ಶಿಯಾಗಿ ನಾರಾಯಣ ಕೆ ಕಾರ್ಯನಿರ್ವಹಿಸುತ್ತಿದ್ದಾರೆ.
ಲಾವಣ್ಯ ಯುವ ಪಡೆ:
ಬೈಂದೂರಿನ ರಂಗ ಚಟುವಟಿಕೆಗಳನ್ನು ಸವಿಯುತ್ತಲೇ ಲಾವಣ್ಯದ ಯುವ ಪಡೆಯೊಂದು ಸೃಷ್ಟಿಯಾಗಿದೆ. ಯುವಕರು ಸೃಜನಶೀಲ ಅಭಿವ್ಯಕ್ತಿ ಮಾಧ್ಯಮಗಳಿಂದ ವಿಮುಖರಾಗುತ್ತಿದ್ದಾರೆಂಬ ಮಾತಿಗೆ ಆರೋಪವೆಂಬಂತೆ ಲಾವಣ್ಯದ ರಂಗ ಚಟುವಟಿಕೆಗಳಲ್ಲಿ ಸಕ್ರೀಯವಾಗಿ ತೊಡಗಿಸಿಕೊಂಡು ಭವಿಷ್ಯದ ಭರವಸೆಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ.
ಲಾವಣ್ಯದ ಪ್ರಮುಖ ನಾಟಕಗಳು:
ರೊಟ್ಟಿರುಣ, ನಾವಿಲ್ಲದಾಗ, ಟಿಂಗರ ಬುಡ್ಡಣ್ಣ, ಮಾವ ಮಾವ ಕತೆ ಹೇಳು, ಸಾಮ್ರಾಟ ಅಶೋಕ್, ಉದ್ಭವ, ಚೋರ ಚರಣದಾಸ, ಏಕಲವ್ಯ, ಬೇಲಿ ಮತ್ತು ಹೊಲ, ನಾಯೀಕಥೆ, ಕತ್ತಲೆದಾರಿ ದೂರ, ಪರಿಹಾರ, ದೃಷ್ಠಿ, ಆಲಿಬಾಬ ಮತ್ತು ನಲವತ್ತು ಕಳ್ಳರು, ಬಾವಿ ಕಳೆದಿದೆ, ನೆರೆ ಕೆರೆ, ತಂದೆ, ಪೊಲೀಸ್, ಮಹಾನಿರ್ವಾಣ, ತಂತಿ, ಬದಕಿಲ್ಲದವನ ಭಾವಗೀತೆ, ಶಿವಭೂತಿ, ನಾವೆಲ್ಹೋಗ್ಬೇಕು, ಲಚ್ಚಿ, ಮಳೆಹುಚ್ಚ, ಕುಹೂ ಕುಹೂ ಕೋಗಿಲೆ, ಢಾಣಾ ಢಂಗುರ, ಅಜ್ಜೀಕತೆ, ಹೂವಿ, ನಾಣಿಭಟ್ಟನ ಸ್ವರ್ಗದ ಕನಸು, ಮೃರಣ ಮೃದಂಗ, ಮುದ್ದಣ್ಣನ ಪ್ರಮೋಷನ್ ಪ್ರಸಂಗ, ಗಾಂಧಿಗೆ ಸಾವಿಲ್ಲ.
ನಲವತ್ತರ ನೆನಪಿಗೆ ರಂಗಮನೆಯ ಮೇಲಂತಸ್ತು ನಿರ್ಮಾಣ:
ನಿರಂತರ ರಂಗಚಟುವಟಿಕೆಯನ್ನು ನಡೆಯುವ ಲಾವಣ್ಯ ರಂಗಮನೆ ಅನುಕೂಲಕ್ಕೆ ತಕ್ಕಂತೆ ಮೇಲಂತಸ್ತು ನಿರ್ಮಾಣಕ್ಕೆ ಲಾವಣ್ಯದ ಮುಂದಾಗಿದ್ದು ಸುಮಾರು 25ಲಕ್ಷ ರೂ. ಹಣದ ಅಗತ್ಯವಿರಬಹುದು ಎಂದು ಅಂದಾಜಿಸಲಾಗಿದೆ. ರಂಗಚಟುವಟಿಕೆಯ ಮೂಲಕ ಸಾಂಸ್ಕೃತಿಕ ಪ್ರಜ್ಞೆ ಮೂಡಿಸುತ್ತಿರುವ ಲಾವಣ್ಯದ ಮೇಲಂತಸ್ತು ನಿರ್ಮಾಣಕ್ಕೆ ಕಲಾಭಿಮಾನಿಗಳ ಸಹಕಾರ ಕೋರುತ್ತಿದೆ.
ಇದನ್ನೂ ಓದಿ
► ಜ.27ರಿಂದ ಫೆ.05: ಲಾವಣ್ಯ ಬೈಂದೂರು – ಕಲಾಮಹೋತ್ಸವ – http://kundapraa.com/?p=20798