ಕುಂದಾಪುರ: ಸಮುದಾಯ ಕುಂದಾಪುರ ಸಾಂಸ್ಕೃತಿಕ ಸಂಘಟನೆ, ಜೆಸಿಐ ಕುಂದಾಪುರ ಸಿಟಿ ಇವರ ಸಹಯೋಗದೊಂದಿಗೆ ಹಮ್ಮಿಕೊಂಡಿರುವ ರಂಗರಂಗು ಮಕ್ಕಳ ಉಚಿತ ರಜಾಮೇಳ ವಡೇರಹೋಬಳಿಯ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಉದ್ಘಾಟನೆಗೊಂಡಿತು.
ಜೆ.ಸಿ.ಐ ದಶಮಾನೋತ್ಸವ ಸಮಿತಿಯ ಅಧ್ಯಕ್ಷ ಕಾರ್ತಿಕೇಯ ಮಧ್ಯಸ್ಥ ಬಣ್ಣಬಳಿದು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಈ ಮೇಳವು ನಾನು ಭಾಗವಹಿಸುತ್ತಿರುವ ಕಾರ್ಯಕ್ರಮಗಳಲ್ಲೇ ವಿನೂತನವಾದದ್ದು. ರಜಾ ಮೇಳಗಳು ವ್ಯಾಪಾರವಾಗುತ್ತಿರುವ ದಿನಗಳಲ್ಲಿ ಕುಂದಾಪುರ ಸಮುದಾಯವು ಉಚಿತ ಮೇವನ್ನು ಆಯೋಜಿಸುತ್ತಿರುವುದು ಪ್ರಶಂಸನೀಯ ಎಂದರು.
ಉದ್ಘಾಟನಾ ಸಭೆಯಲ್ಲಿ ವ್ಯಂಗ್ಯಚಿತ್ರಕಾರ ಕೇಶವ ಸಸಿಹಿತ್ಲು, ವಡೇರಹೋಬಳಿ ಸರಕಾರಿ ಶಾಲೆಯ ಮುಖ್ಯಶಿಕ್ಷಕರಾದ ಸುಧಾಕರ ಶೆಟ್ಟಿ ಉಪಸ್ಥಿತರಿದ್ದರು. ಸಮುದಾಯ ಸಂಘಟನೆಯ ಅಧ್ಯಕ್ಷ ಉದಯ ಗಾಂವಕಾರ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಕಾರ್ಯದರ್ಶಿ ಸದಾನಂದ ಬೈಂದೂರು ಸ್ವಾಗತಿಸಿ ನಿರೂಪಿಸಿದರು.
ಎಂಟುದಿನಗಳ ಕಾಲ ನಡೆಯುವ ಮೇಳದಲ್ಲಿ ಮಕ್ಕಳು ರಂಗಕರ್ಮಿ ವಾಸುದೇವ ಗಂಗೇರ ನಿರ್ದೇಶನದಲ್ಲಿ ‘ನಕ್ಕಳಾ ರಾಜಕುಮಾರಿ’ ಎಂಬ ನಾಟಕವನ್ನು ಅಭಿನಯಿಸುವರು. ಮೇಳದ ಸಮಾರೋಪದಲ್ಲಿ ನಾಟಕದ ಪ್ರದರ್ಶನವಿರುತ್ತದೆ. ಕುಂಬಾರಿಕೆಯೂ ಸೇರಿದಂತೆ ಶ್ರಮಸಂಸ್ಕೃತಿಯ ಮೂಲಕ ಒಡಮೂಡುವ ಕಲಾಪ್ರಕಾರಗಳ ಪರಿಚಯವನ್ನು ಮಕ್ಕಳಿಗೆ ಮಾಡಿಸಲಾಗುವುದು. ಉಳಿದಂತೆ, ಬಣ್ಣದ ಆಟ, ಗೆರೆಗಳ ಆಟ, ಕತ್ತರಿ ಆಟ, ನೀರಾಟ, ಸುತ್ತಾಟ ಹೀಗೆ ಮಕ್ಕಳು ವಿವಿಧ ಆಟಗಳಲ್ಲಿ ತೊಡಗಲಿದ್ದಾರೆ. ಕಲಾವಿದ ಭೋಜು ಹಾಂಡ, ಸಮುದಾಯದ ವಾಸುದೇವ ಗಂಗೇರ, ಚಿನ್ನಾ ವಾಸುದೇವ, ಬಾಲಕೃಷ್ಣ ಕೆ.ಎಂ, ಜಿ.ವಿ. ಕಾರಂತ, ನರಸಿಂಹ ಎಚ್, ಸಂದೇಶ ಮುಂತಾದವರು ಸಮಾರಂಭದಲ್ಲಿ ಉಪಸ್ಥಿತರಿದ್ದರು.