ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಸುವರ್ಣ ವರ್ಷಾಚರಣೆಯ ಸಂಭ್ರಮದಲ್ಲಿರುವ ಕುಂದಾಪುರ ವಲಯದ ಬಿದ್ಕಲ್ಕಟ್ಟೆಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ೨೦೧೬-೧೭ನೇ ಶೈಕ್ಷಣಿಕ ವರ್ಷದಲ್ಲಿ ಆರಂಭಿಸಿದ ಯಶಸ್ವೀ ಕಾರ್ಯಕ್ರಮವಾದ ತಿಂಗಳ ಕಲಿಕಾ ಪ್ರದರ್ಶನದ ೨೦೧೭-೧೮ನೇ ಸಾಲಿನ ಮೊದಲ ಕಾರ್ಯಕ್ರಮ, ೭ನೇ ತರಗತಿಯ ಸಂಪತ್ ಹುಟ್ಟು ಹಬ್ಬದ ಪ್ರಯುಕ್ತ ತಾಯಿ ತಂದೆ ಸುಜಾತ ಸಂತೋಷ್ ಅವರು ಪ್ರಾಯೋಜಿಸಿದ ಮಕ್ಕಳ ಸಾಹಿತ್ಯದೊಲವಿನ ವೇದಿಕೆಯಾದ ಚಾರಣ ಪತ್ರಿಕೆಯ ೫ನೇ ಸಂಚಿಕೆ ಅನಾವರಣ ಹಾಗೂ ಸರ್ವಪೋಷಕರ ಸಭೆಯು ಇತ್ತೀಚೆಗೆ ಶಾಲಾ ನೋಟ್ಪುಸ್ತಕದ ದಾನಿಗಳಾದ ಶ್ರೀ ಎಂ.ದಿನೇಶ ಹೆಗ್ಡೆಯವರ ಗೌರವ ಉಪಸ್ಥಿತಿಯಲ್ಲಿ ಜರುಗಿತು.
ಚಾರಣ ಸಂಚಿಕೆಯನ್ನು ಅನಾವರಣಗೊಳಿಸಿ ಮಾತನಾಡಿದ ಅವರು ಹತ್ತಾರು ಚಟುವಟಿಕೆಗಳ ಮೂಲಕ ಶಾಲೆ ಸಮುದಾಯದ ಮೆಚ್ಚುಗೆಗೆ ಪಾತ್ರವಾಗಿದ್ದು, ಈ ಎಲ್ಲಾ ಶೈಕ್ಷಣಿಕ ಚಟುವಟಿಕೆಗಳಿಂದಲೇ ಶಾಲಾ ದಾಖಲಾತಿ ಪ್ರಮಾಣದಲ್ಲಿ ಗಣನೀಯ ಏರಿಕೆಯಾಗಿದೆ ಎಂದರು.
ಸಮಾರಂಭದಲ್ಲಿ ಗ್ರಾಮ ಪಂಚಾಯತ್ ಸದಸ್ಯರಾದ ಶ್ರೀಮನೋಜ್ಕುಮಾರ್ ಶೆಟ್ಟಿ, ಎಸ್.ಡಿ.ಎಂ,ಸಿ ಅಧ್ಯಕ್ಷರಾದ ಶ್ರೀ ಶಾಂತರಾಮ, ಉಪಾಧ್ಯಕ್ಷರಾದ ಸುಧಾಕರ, ಮುಖ್ಯೋಪಾಧ್ಯಾಯರಾದ ಶ್ರೀಮತಿ ನಾಗರತ್ನ ಉಡುಪ, ಸಹಶಿಕ್ಷಕರುಗಳಾದ ಶ್ರೀ ಸತೀಶ್ ಶೆಟ್ಟಿಗಾರ್, ಶ್ರೀಮತಿ ರಮಣಿ, ಶ್ರೀಮತಿ ಜ್ಯೋತಿಲಕ್ಷ್ಮಿ, ಶ್ರೀಮತಿ ಚಿತ್ರಾ ವಿದ್ಯಾರ್ಥಿಗಳು ಹಾಗೂ ಪೋಷಕರು ಉಪಸ್ಥಿತರಿದ್ದರು.
ಪ್ರಾರಂಭದಲ್ಲಿ ಮುಖ್ಯೋಪಾಧ್ಯಾಯರಾದ ಶ್ರೀಮತಿ ನಾಗರತ್ನ ಸ್ವಾಗತಿಸಿದರೆ, ಸಹಶಿಕ್ಷಕ ಶ್ರೀ ಸತೀಶ್ ಶೆಟ್ಟಿಗಾರ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಸಹಶಿಕ್ಷಕಿ ಶ್ರೀಮತಿ ಚಿತ್ರಾ ಕುಮಾರಿ ವಂದಿಸಿದರು.