ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೊಲ್ಲೂರು: ಬೈಂದೂರು ವಿಧಾನಸಭಾ ಕ್ಷೇತ್ರದ ಶಾಸಕ ಬಿ. ಎಂ. ಸುಕುಮಾರ್ ಶೆಟ್ಟಿ ನೇತೃತ್ವದಲ್ಲಿ ಭಾರತೀಯ ಜನತಾ ಪಕ್ಷದ ನೂರಾರು ಸಂಖ್ಯೆಯ ಕಾರ್ಯಕರ್ತರು ಮಂಗಳವಾರ ಶಾಸಕರ ನಿವಾಸ ನೆಂಪುವಿನಿಂದ ಕೊಲ್ಲೂರಿಗೆ ಪಾದಯಾತ್ರೆ ಮಾಡಿದರು. ಬೆಳಿಗ್ಗೆ ೪.೪೫ಕ್ಕೆ ಶಾಸಕರನ್ನು ಕೂಡಿಕೊಂಡು ಮಳೆಯಲ್ಲಿಯೇ ಹೊರಟ ಪಾದಯಾತ್ರೆ ಸುಮಾರು ೨೫ ಕಿಮಿ ಕ್ರಮಿಸಿ ೯.೪೫ರ ಹೊತ್ತಿಗೆ ಕೊಲ್ಲೂರು ಸ್ವಾಗತ ಗೋಪುರಕ್ಕೆ ತಲುಪಿತು. ಅಲ್ಲಿಂದ ನೇರವಾಗಿ ಸೌಪರ್ಣಿಕಾ ನದಿಯಲ್ಲಿ ತೀರ್ಥಸ್ನಾನ ಮಾಡಿದ ಯಾತ್ರಿಗಳು ದೇವಸ್ಥಾನಕ್ಕೆ ತೆರಳಿ ಶ್ರೀ ಮೂಕಾಂಬಿಕೆಯ ದರ್ಶನ ಪಡೆದು ವಿಶೇಷ ಪೂಜೆ, ಪ್ರಾರ್ಥನೆ ಸಲ್ಲಿಸಿದರು.
ಬಳಿಕ ಮಾತನಾಡಿದ ಅವರು ಶಾಸಕ ಬಿ. ಎಂ. ಸುಕುಮಾರ್ ಶೆಟ್ಟಿ ಮಾತನಾಡಿ, ಈ ಮಣ್ಣಿನ ಸಂಸ್ಕಾರದಿಂದ ರಾಷ್ಟ್ರೀಯತೆ ಎದ್ದು ನಿಂತಿದೆ. ಮುಂದಿನ ೨೦೧೯ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಸಂಪೂರ್ಣ ಜನಾದೇಶ ದೊರೆತು ಇನ್ನೊಮ್ಮೆ ಮೋದಿಯವರು ಪ್ರಧಾನಿಯಾಗಬೇಕೆಂಬ ಸಂಕಲ್ವ ಹಾಗೂ ಕರ್ನಾಟಕದಲ್ಲಿ ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಸರ್ಕಾರ ಪುನಃ ಸ್ಥಾಪನೆಯಾಗಬೇಕೆಂಬ ಮೂಲ ಉದ್ದೇಶದಿಂದ ಹೇಳಿಕೊಂಡ ಹರಕೆಯನ್ನು ಮೂಕಾಂಬಿಕೆ ಸನ್ನಿಧಾನಕ್ಕೆ ಅರ್ಪಿಸಿದ್ದು, ಮುಂದಿನ ದಿನಗಳಲ್ಲಿ ಭಾರತ ದೇಶ ಇನ್ನಷ್ಟು ಬಲಿಷ್ಟಗೊಳ್ಳುವಂತಾಗಲಿ, ದೇಶದಲ್ಲಿ ಶಾಂತಿ, ಸೌಹಾರ್ದತೆ, ಸುಭಿಕ್ಷೆ ನೆಲೆಸಲಿ, ಮನುಷ್ಯ ಮನುಷ್ಯರ ನಡುವೆ ಬಾಂದ್ಯವ ವೃದ್ಧಿಸಿ ಪ್ರೀತಿ ವಿಶ್ವಾಸಗಳಿಂದ ಬಾಳುವಂತಾಗಲಿ ಎಂಬ ಸಾಮೂಹಿಕ ಪ್ರಾರ್ಥನೆಯನ್ನು ಜಗನ್ಮಾತೆಯಲ್ಲಿ ಭಿನ್ನವಿಸಿಕೊಳ್ಳಲಾಗಿದೆ ಎಂದರು.
ಬಿಜೆಪಿ ಮಂಡಲ, ವಿವಿಧ ಮೋರ್ಚಾ ಪದಾಧಿಕಾರಿಗಳು, ಜಿಲ್ಲಾ ಮುಖಂಡರು, ವಿವಿಧ ಸ್ತರದ ಜನಪ್ರತಿನಿಧಿಗಳು, ಸಾರ್ವಜನಿಕರು ಪಾದಯಾತ್ರೆಗೆ ಸಾಥ್ ನೀಡಿದರು.











