ಪರಿಸರ ಉಳಿವಿನ ಜಾಗೃತಿಗಾಗಿ ಸಿದ್ಧಗೊಂಡ ಬೀಜ ಗಣಪ

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಪರಿಸರದ ಹಸಿರು ಕ್ಷೀಣಿಸಿ ಜನರ ಬದುಕಿನ ಮೇಲೆ ಆಗುತ್ತಿರುವ ದುಷ್ಪರಿಣಾಮ ತಡೆಯಲು ಪರಿಸರ ಪ್ರೇಮಿಗಳು ನಡೆಸುತ್ತ ಬಂದಿರುವ ವಿವಿಧ ಅಭಿಯಾನಗಳ ಸಾಲಿಗೆ ಇದೀಗ ಬೀಜಗಣಪ ಸೇರ್ಪಡೆ ಆಗಲಿದೆ. ಸದ್ಯ ಮರವಂತೆ ಕೇಂದ್ರಿತವಾಗಿ ನಡೆಯುವ ಈ ಅಭಿಯಾನದ ಆರಂಭಕ್ಕೆ ಜನಪ್ರಿಯ ಹಬ್ಬವಾದ ಗಣೇಶ ಚತುರ್ಥಿಯ ಮುಹೂರ್ತ ನಿಗದಿಯಾಗಿದೆ. ಗಣೇಶ ವಿಗ್ರಹಗಳನ್ನು ನಿರ್ಮಿಸುವ ಅಲ್ಲಿನ ಕಲಾವಿದ ಸತೀಶ ಮಧ್ಯಸ್ಥ ಅದಕ್ಕಾಗಿ ಬೀಜಗಣಪತಿಯ ಮೂರ್ತಿಗಳನ್ನು ಸಿದ್ಧಪಡಿಸುವುದರಲ್ಲಿ ನಿರತರಾಗಿದ್ದಾರೆ. ಇಂತಹ ಕೆಲಸ ಆರಂಭವಾಗಿರುವ ಸುದ್ದಿ ತಿಳಿದು ಮಧ್ಯಸ್ಥರ ಮನೆಗೆ ಹೋದ ’ಪ್ರಜಾವಾಣಿ’ಗೆ ಅವರು ಬಿಡುವು ಮಾಡಿಕೊಂಡು ಅಭಿಯಾನದ ವಿವರ ನೀಡಿದರು.

Call us

Click Here

ಸಾಸ್ತಾನದ ವಿನಯಚಂದ್ರ ಈಗಾಗಲೆ ಹಲವೆಡೆ ಬೀಜದುಂಡೆಗಳ ಅಭಿಯಾನ ನಡೆಸಿ ಸುದ್ದಿ ಮಾಡಿದ್ದಾರೆ. ಒಂದೆರಡು ಕಡೆ ಸತೀಶ ಮಧ್ಯಸ್ಥ ಅವರ ಜತೆಯಾಗಿದ್ದರು. ಆಗ ಅವರಿಗೆ ಬೀಜಗಣಪ ಅಥವಾ ಜೀವಗಣಪ ಯೋಜನೆ ಹೊಳೆಯಿತು. ಅವರ ’ಮಿಶನ್ ಅರ್ಥ್’ ಸಂಸ್ಥೆಯ ಗೆಳೆಯರು ಈಗ ಅದರ ಅನುಷ್ಠಾನಕ್ಕೆ ಮುಂದಾಗಿದ್ದಾರೆ.

ಬೀಜ ಗಣಪ ತಯಾರಿ ಹೇಗೆ? : ಆವೆ ಮಣ್ಣನ್ನು ಮಾತ್ರ ಬಳಸಿ ಪುಟ್ಟಪುಟ್ಟ ಪರಿಸರ ಸ್ನೇಹಿ ಗಣೇಶ ಮೂರ್ತಿಗಳನ್ನು ಮಾಡಿ ಅದರ ಟೊಳ್ಳುಭಾಗದಲ್ಲಿ ವಿವಿಧ ಜಾತಿಯ ಮೂರುನಾಲ್ಕು ಬೀಜಗಳನ್ನು ಹುದುಗಿಸಿದ ಬೀಜದುಂಡೆಗಳನ್ನು ಇಡಲಾಗುತ್ತದೆ. ಸದ್ಯ ಶ್ರೀಗಂಧ, ಹುಣಿಸೆ, ಗೋಲ್ಡನ್ ಬ್ಯಾಂಬೂ, ಸೀಗೆ ಬೀಜಗಳನ್ನು ಬಳಸಲಾಗುತ್ತಿದೆ. ಮುಂದೆ ಕಾಡು ಮರಗಳ ಬೀಜಗಳನ್ನೂ ಬಳಸಲಾಗುವುದು. ಬೀಜಗಣಪತಿಯನ್ನು ಶಾಲಾ ಮಕ್ಕಳಿಗೆ ವಿತರಿಸಲಾಗುತ್ತದೆ. ಮೂರ್ತಿಯನ್ನು ಒಯ್ಯುವ ಮಕ್ಕಳು ಅದನ್ನು ಒಂದು ಪುಟ್ಟ ಹೂಕುಂಡದಲ್ಲಿ ಇರಿಸಿ ಅದರ ತಲೆಭಾಗಕ್ಕೆ ಪ್ರತಿದಿನವೂ ಸ್ವಲ್ಪ ನೀರೆಯಬೇಕಾಗುತ್ತದೆ. ಅದರಿಂದ ಒಂದೆಡೆ ಮೂರ್ತಿಯ ಶಿರೋಭಾಗ ಕರಗುತ್ತದೆ. ನೀರು ಬೀಜದುಂಡೆಯನ್ನು ಒದ್ದೆ ಮಾಡಿ ಹದಿನೈದು ಇಪ್ಪತ್ತು ದಿನಗಳೊಳಗೆ ಬೀಜ ಮೊಳೆಯುವಂತೆ ಮಾಡುತ್ತದೆ. ಗಿಡ ಸಾಕಷ್ಟು ಬಲಿತ ಬಳಿಕ ಮಕ್ಕಳು ಅದನ್ನು ತಮ್ಮ ಸ್ಥಳದಲ್ಲಿ ನೆಡುತ್ತಾರೆ. ಗಣಪ ಮಕ್ಕಳ ಮೆಚ್ಚಿನ ದೇವರಾಗಿರುವುದರಿಂದ ಈ ಕೆಲಸವನ್ನು ಅವರು ಆಸಕ್ತಿಯಿಂದ ಮಾಡುತ್ತಾರೆ ಎನ್ನುವುದು ವಿನಯಚಂದ್ರ ಅವರ ಅಭಿಮತ. ಪ್ರಸಕ್ತ ಗಣೇಶ ಚತುರ್ಥಿ ವೇಳೆ ಇದರ ಪ್ರಯೋಗ ನಡೆಯುತ್ತದೆ. ಯಶಸ್ವಿಯಾದರೆ ಅದನ್ನು ಹಬ್ಬದ ಸಂದರ್ಭಕ್ಕೆ ಸೀಮಿತಗೊಳಿಸದೆ ನಿರಂತರ ನಡೆಸುವ ಉದ್ದೇಶ ಹೊಂದಲಾಗಿದೆ. ಬೀಜದುಂಡೆಗಳ ತಯಾರಿಯಲ್ಲಿ ಶಾಲಾ ಮಕ್ಕಳನ್ನು ತೊಡಗಿಸಿ, ಯಶಸ್ಸು ಪಡೆಯಲಾಗಿತ್ತು. ಬೀಜಗಣಪ ಯಶಸ್ವಿಯಾದರೆ ಈ ಅಭಿಯಾನವನ್ನೂ ಮಕ್ಕಳ ಕೈಗೊಪ್ಪಿಸಲಾಗುವುದು ಎಂದು ಇಬ್ಬರೂ ಹೇಳಿದರು.

ಬೀಜಗಣಪ ನಿರ್ಮಾಣದ ಹೊಣೆ ಹೊತ್ತಿರುವ ಸತೀಶ ಮಧ್ಯಸ್ಥ ಕಲಾವಿದ. ಕೆಲವು ಮಹತ್ವದ ಕನ್ನಡ ಧಾರಾವಾಹಿಗಳಲ್ಲೂ ನಟಿಸಿದ್ದ ಅವರು ಈಗ ನಾವುಂದ ಶುಭದಾ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಕಲಾಶಿಕ್ಷಕರಾಗಿ ದುಡಿಯುತ್ತಿದ್ದಾರೆ. ಚಿತ್ರ ರಚನೆಯ ಜತೆಗೆ ರಂಗಭೂಮಿ ಚಟುವಟಿಕೆಯಲ್ಲೂ ಅವರು ಸಕ್ರಿಯರಾಗಿದ್ದಾರೆ. ತಮ್ಮ ಬಿಡುವಿನ ವೇಳೆಯಲ್ಲಿ ಪರಿಸರಪರವಾದ ಈ ಕಾರ್ಯದಲ್ಲಿ ದುಡಿಯು ಹಂಬಲ ಹೊಂದಿದ್ದಾರೆ.

ಪ್ರಾಣಿಪಕ್ಷಿಗಳು ಸಹಜ ಕ್ರಿಯೆಯ ಮೂಲಕ ಬೀಜಪ್ರಸಾರ ಮಾಡಿ ಪರಿಸರ ವೃದ್ಧಿಗೆ ಕೊಡುಗೆ ನೀಡುತ್ತವೆ. ಮನುಷ್ಯ ಅದನ್ನು ನಾಶ ಮಾಡುತ್ತಾನೆ. ಬೀಜಗಣಪ ಅಭಿಯಾನವು ಮಕ್ಕಳಲ್ಲಿ ಬೀಜಪ್ರಸಾರದ ಅಗತ್ಯದ ಅರಿವು ಮೂಡಿಸುತ್ತದೆ – ವಿನಯಚಂದ್ರ ಸಾಸ್ತಾನ, ’ಮಿಶನ್ ಅರ್ಥ್’ ಸಂಸ್ಥೆಯ ಅಧ್ಯಕ್ಷ

Click here

Click here

Click here

Click Here

Call us

Call us

Leave a Reply