ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಬಿಗ್ ಬಾಸ್ ಸೀಸನ್ 7 ವಿಜೇತ ಶೈನ್ ಶೆಟ್ಟಿ ತಮ್ಮ ಗೆಲುವಿನ ಬಳಿಕ ಹುಟ್ಟೂರು ಆರ್ಡಿಯಲ್ಲಿರುವ ಚಿಕ್ಕಪ್ಪ ಗುಣಕರ ಶೆಟ್ಟಿ ನಿವಾಸಕ್ಕೆ ಮೊದಲ ಬಾರಿಗೆ ಆಗಮಿಸಿ, ಕುಟುಂಬಿಕರು ಹಾಗೂ ಸ್ಥಳೀಯರೊಂದಿಗೆ ಗೆಲುವಿನ ಖುಷಿಯನ್ನು ಹಂಚಿಕೊಂಡರು.
ಈ ಸಂದರ್ಭ ಶೈನ್ ಮಾತನಾಡಿ, ಪ್ರತಿಭೆಗೆ ಗ್ರಾಮೀಣ, ನಗರ ಎಂಬ ಭೇದವಿಲ್ಲ. ಎಲ್ಲರೂ ಒಂದೇ. ಆದರೆ ಪರಿಶ್ರಮ ಅಗತ್ಯ. ಬಿಗ್ಬಾಸ್ ಗೆಲುವಿನ ಹಿಂದೆ ಒಂಬತ್ತು ವರ್ಷಗಳ ಪರಿಶ್ರವಿದೆ. ಜೊತೆಗೆ ಜನರ ಪ್ರೀತಿ ದೊರೆತಿದ್ದರಿಂದ ಗೆಲುವು ಸಾಧ್ಯವಾಯಿತು.
ಬದುಕಿನಲ್ಲಿ ಉತ್ತಮ ವ್ಯಕ್ತಿತ್ವ ಹೊಂದಿದ್ದರೆ ಜನರ ಖಂಡಿತ ಗುರುತಿಸುತ್ತಾರೆ. ಕರಾವಳಿಯ ಹೆಮ್ಮೆ ಎಂದು ಪ್ರೀತಿಯಿಂದ ಹೇಳುತ್ತಿದ್ದವರಿಗೆ ಹೆಮ್ಮ ಪಡುವ ಕೆಲಸವನ್ನು ಮಾಡಿ ತೋರಿಸಿದ್ದೇನೆ. ನಮ್ಮವರಿಗೆ ಸ್ವಲ್ಪ ಗತ್ತು ಜಾಸ್ತಿ. ಗತ್ತಿರಲಿ ಆದರೆ ಗತ್ತು ನಮ್ಮನ್ನು ನುಂಗದಿರಲಿ ಎಂದರು.
ಶೈನ್ ಶೆಟ್ಟಿ ಅವರೊಂದಿಗೆ ಯುವಕರು ಸೆಲ್ಪಿ ತೆಗೆದುಕೊಂಡು, ಆಟೋಗ್ರಾಫ್ ಪಡೆದು ಖುಷಿಪಟ್ಟರು. ಹಿಲಿಯಾಣದ ಶ್ರೀ ಬ್ರಹ್ಮ ಬೈದರ್ಕಳ ಗರೋಡಿ ಅಧ್ಯಕ್ಷ ಕರುಣಾಕರ ಶೆಟ್ಟಿ ಯರುಕೋಣೆ ಮೊದಲಾದವರು ಶೈನ್ ಅವರನ್ನು ಸನ್ಮಾನಿಸಿ ಶುಭ ಹಾರೈಸಿದರು. ಶೈನ್ ಶೆಟ್ಟಿ ತಂದೆ ಶರಶ್ಚಂದ್ರ ಶೆಟ್ಟಿ ಹಾಗೂ ತಾಯಿ ಇಂದಿರಾ, ನ್ಯಾಯವಾದಿ ಉದಯ ಕುಮಾರ್ ಶೆಟ್ಟಿ ಕಾಳಾವರ, ತಾಲೂಕು ಪಂಚಾಯತ್ ಸದಸ್ಯ ಚಂದ್ರಶೇಖರ್ ಶೆಟ್ಟಿ ಸುರ್ಗೋಳಿ, ಮಾಜಿ ತಾ.ಪಂ ಅಧ್ಯಕ್ಷೆ ದೀಪಿಕಾ ಸಂತೋಷ್ ಶೆಟ್ಟಿ, ಗ್ರಾಮಪಂಚಾಯತ್ ಅಧ್ಯಕ್ಷೆ ಶೋಭಾ ಶೆಟ್ಟಿ, ಗ್ರಾ.ಪಂ ಸದಸ್ಯ ಸಂತೋಷ್ ಹೆಗ್ಡೆ, ಸತೀಶ್ ಕುಮಾರ್ ಶೆಟ್ಟಿ, ವಿಶ್ವ ಹಿಂದೂ ಪರಿಷತ್ ಕುಂದಾಪುರ ಪ್ರಖಂಡ ಅಧ್ಯಕ್ಷ ವಿಜಯಕುಮಾರ್ ಶೆಟ್ಟಿ, ನಿವೃತ್ತ ಶಿಕ್ಷಕ ರಾಜೀವ ಶೆಟ್ಟಿ ಬೆಪ್ಡೆ, ಸಾಮಾಜಿಕ ಹೋರಾಟಗಾರ ಸಂತೋಷ್ ಕುಮಾರ್ ಶೆಟ್ಟಿ, ನಿಶಾಂತ್, ಸುಶಾಂತ್ ಮೊದಲಾದವರಿದ್ದರು. ಗಣೇಶ್ ಅರಸಮ್ಮನಕಾನು ಕಾರ್ಯಕ್ರಮ ನಿರೂಪಿಸಿದರು.