ರೈಲ್ವೆ ಖಾಸಗೀಕರಣ ವಿರೋಧಿಸಿ ಸಿಐಟಿಯು ಪ್ರತಿಭಟನೆ

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ರೈಲ್ವೆ ಸಾರಿಗೆ ವ್ಯವಸ್ಥೆಯನ್ನು ಜಗತ್ತಿನ ಯಾವ ದೇಶದಲ್ಲೂ ಲಾಭದಾಯಕ ಉದ್ಯಮ ಎಂದು ನಡೆಸಲಾಗುತ್ತಿಲ್ಲ. ಅದು ಸಾರ್ವಜನಿಕ ಸೇವಾ ವಲಯ ಎಂದೇ ಪರಿಗಣಿತವಾಗಿದೆ. ಆದರೆ ನಮ್ಮ ಕೇಂದ್ರದ ಮೋದಿ ಸರ್ಕಾರ ಅದನ್ನು ತನ್ನ ಖಾಸಗೀಕರಣದ ಸರಣಿಗೆ ಸೇರಿಸಿಕೊಂಡು ಮಾರಾಟಕ್ಕೆ ಹೊರಟಿದೆ. ಇದನ್ನು ಸಿಐಟಿಯು ಬಲವಾಗಿ ವಿರೋಧಿಸುತ್ತದೆ ಎಂದು ಕೃಷಿಕೂಲಿ ಕಾರ್ಮಿಕರ ಮುಖಂಡ ವೆಂಕಟೇಶ ಕೋಣಿ ಹೇಳಿದರು.

Call us

Click Here

ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್ ನೀಡಿದ ದೇಶವ್ಯಾಪಿ ಪ್ರತಿಭಟನೆ ಕರೆಯನ್ವಯ ಅದರ ಬೈಂದೂರು ತಾಲ್ಲೂಕು ಘಟಕ ಶುಕ್ರವಾರ ಇಲ್ಲಿನ ಮೂಕಾಂಬಿಕಾ ರೋಡ್ ರೈಲ್ವೆ ಸ್ಟೇಷನ್ ಎದುರು ನಡೆಸಿದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.

ಭಾರತೀಯ ರೈಲ್ವೆ ದೇಶದ ಜನತೆಯ ಅಮೂಲ್ಯ ಆಸ್ತಿ. ಇದನ್ನು ಖಾಸಗಿಯವರಿಗೆ ಮಾರಾಟ ಮಾಡುವುದು ದೇಶ ಮತ್ತು ಜನ ವಿರೋಧಿ ಕೃತ್ಯ. ದೇಶ ಎದುರಿಸುತ್ತಿರುವ ಕೋವಿಡ್-೧೯ ಸಂಕಷ್ಟದ ಕಾಲವನ್ನು ಕೇಂದ್ರ ಸರ್ಕಾರ ದುರುಪಯೋಗಪಡಿಸಿಕೊಂಡು ಈ ವ್ಯವಹಾರಕ್ಕೆ ಮುಂದಾಗಿದೆ. ಕಾರ್ಮಿಕ ಸಂಘಟನೆಗಳು ಮಾತ್ರವಲ್ಲ; ದೇಶದ ಎಲ್ಲ ಪ್ರಜ್ಞಾವಂತ ಪ್ರಜೆಗಳು ಕೇಂದ್ರ ಸರ್ಕಾರದ ಖಾಸಗೀಕರಣ ನೀತಿಯನ್ನು ವಿರೋಧಿಸಬೇಕು ಎಂದು ಅವರು ಹೇಳಿದರು.

ಬೈಂದೂರು ತಾಲ್ಲೂಕು ಸಿಐಟಿಯು ಸಂಚಾಲಕ ರೊನಾಲ್ಡ್ ರಾಜೇಶ್ ಕ್ವಾಡ್ರಸ್ ಬಿಜೂರು ಸಂಘಟನೆಯ ವತಿಯಿಂದ ಪ್ರಧಾನ ಮಂತ್ರಿಗಳಿಗೆ ಸಲ್ಲಿಸುವ ಮನವಿ ಪತ್ರ ಓದಿ, ರೈಲು ನಿಲ್ದಾಣದ ಅಧಿಕಾರಿಗಳಿಗೆ ಹಸ್ತಾಂತರಿಸಿದರು. ಸಿಐಟಿಯು ಮುಖಂಡರಾದ ಗಣೇಶ ತೊಂಡೆಮಕ್ಕಿ, ಉದಯ ಗಾಣಿಗ ಮೊಗೇರಿ, ಮಾಧವ ದೇವಾಡಿಗ ಉಪ್ಪುಂದ, ಶ್ರೀಧರ ಉಪ್ಪುಂದ, ನಾಗರತ್ನಾ ನಾಡ, ಶೀಲಾವತಿ ಹಡವು, ಶಾರದಾ ಬೈಂದೂರು, ರಾಘವೇಂದ್ರ ಉಪ್ಪುಂದ ಪ್ರತಿಭಟನೆಯ ನೇತೃತ್ವ ವಹಿಸಿದ್ದರು. ಗಣೇಶ ದೇವಾಡಿಗ ವಂದಿಸಿದರು.

Leave a Reply