ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ತಾಲೂಕಿನ ನೇರಂಬಳ್ಳಿ ಗ್ರಾಮದ ವಯೋವೃದ್ಧರೋರ್ವರು ಉಡುಪಿಯ ಕೋವಿಡ್ ಆಸ್ಪತ್ರೆಯಲ್ಲಿ ಕರೊನಾದಿಂದ ಮೃತಪಟ್ಟಿದ್ದು ಅವರ ಅಂತಿಮ ಸಂಸ್ಕಾರಕ್ಕಾಗಿ ಕುಂದಾಪುರ ಹಳೆಕೋಟೆ ಸ್ಮಶಾನಕ್ಕೆ ಮೃತದೇಹವನ್ನು ತಂದಾಗ ಕುಟುಂಬಿಕರಿಗೊಂದು ಶಾಕ್ ಕಾದಿತ್ತು. ಅಂತಿಮ ಸಂಸ್ಕಾರಕ್ಕೂ ಮುನ್ನ ಅನುಮಾನಗೊಂಡು ಮೃತದೇಹದ ಪ್ಯಾಕ್ ಬಿಡಿಸಿದಾಗ ಅದರಲ್ಲಿ ಬೇರೊಬ್ಬ ವ್ಯಕ್ತಿಯ ಶವ ಕಂಡು ಕುಟುಂಬಸ್ಥರು ಕಂಗಾಲಾಗಿದ್ದಾರೆ.
ನೇರಂಬಳ್ಳಿ ಮೂಲಕ 65 ವರ್ಷದ ವೃದ್ಧರು ಕರೊನಾ ಸೋಂಕಿನಿಂದಾಗಿ ಉಡುಪಿಯ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದರು ಎನ್ನಲಾಗಿದೆ. ಭಾನುವಾರ ಬೆಳಿಗ್ಗೆ ಶವವನ್ನು ಅಂಬುಲೆನ್ಸ್ನಲ್ಲಿ ಕುಂದಾಪುರಕ್ಕೆ ತರಲಾಗಿತ್ತು. ಮೃತದೇಹ ಸಂಪೂರ್ಣ ಪ್ಯಾಕ್ ಮಾಡಿದ್ದರಿಂದ ಒಳಗಿರುವ ಶವ ಯಾರದ್ದೆಂದು ಮೊದಲಿಗೆ ಸಂಬಂಧಿಕರಿಗೆ ತಿಳಿಯಲಿಲ್ಲ. ಹಳೆಕೋಟೆ ಸ್ಮಶಾನಕ್ಕೆ ಅಂತ್ಯ ಸಂಸ್ಕಾರಕ್ಕೆ ತಂದಾಗ ಅನುಮಾನಗೊಂಡು, ಓಪನ್ ಮಾಡಬಾರದು ಎಂಬ ಒತ್ತಡದ ನಡುವೆಯೂ ಶವ ಪರೀಕ್ಷಿಸುವಾಗ ಅದರಲ್ಲಿ ವೃದ್ಧರ ಬದಲಿಗೆ ಬೇರೊಬ್ಬ ಯುವಕನ ಶವವಿತ್ತು. ಇದು ನಮ್ಮ ಮೃತದೇಹ ಅಲ್ಲವೆನ್ನುತ್ತಿದ್ದಂತೆ ಅಂಬುಲೆನ್ಸ್ ಸಿಬ್ಬಂದಿಗಳು ಶವ ಕೊಂಡುಹೋಗಲು ಯತ್ನಿಸಿದ್ದರು. ತಕ್ಷಣ ಸ್ಮಶಾನದ ಗೇಟ್ ಹಾಕಿದ ಜನರು ‘ಯಾರದ್ದೋ ಶವ ಕಳುಹಿಸುವ ಈ ರೀತಿಯ ಯಡವಟ್ಟು ಕೆಲಸ ಮಾಡಿದ ಆಧಿಕಾರಿಗಳ ಅಜಾಗ್ರತೆ ಸರಿಯಲ್ಲ, ನಮ್ಮ ಮೃತದೇಹ ತಂದು ಕೊಡುವವರೆಗೆ ಈ ದೇಹವನ್ನು ಹೊರ ಹೋಗಲು ಬಿಡಲ್ಲ ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡು ಪ್ರತಿಭಟನೆ ಆರಂಭಿಸಿದರು. ಕುಂದಾಪ್ರ ಡಾಟ್ ಕಾಂ ಸುದ್ದಿ.
ಜನ ಸ್ಮಶಾನದಲ್ಲಿ ಸೇರಿ ಪ್ರತಿಭಟನೆ ನಡೆಸುತ್ತಿದ್ದು, ಸ್ಥಳಕ್ಕೆ ಪೊಲೀಸರು ಆಗಮಿಸಿ, ಘಟನೆಯ ಮಾಹಿತಿ ಪಡೆದುಕೊಂಡಿದ್ದಾರೆ. ಕೊನೆಗೆ ಆಸ್ಪತ್ರೆಯವರು ತಮ್ಮಿಂದಾದ ತಪ್ಪನ್ನು ಒಪ್ಪಿಕೊಂಡು ಮತ್ತೊಂದು ಅಂಬುಲೆನ್ಸ್ನಲ್ಲಿ ಮೃತ ವ್ಯಕ್ತಿಯ ಶವ ಕಳುಹಿಸಿದರು. ನಂತರ ಜನರು ಮೊದಲು ಬಂದಿದ್ದ ಅಂಬುಲೆನ್ಸ್ ಗೆ ತೆರಳಲು ಅವಕಾಶ ನೀಡಿದರು. ಕೊನೆಗೆ ನೇರಂಬಳ್ಳಿ ವ್ಯಕ್ತಿಯ ಶವದ ಅಂತ್ಯಕ್ರಿಯೆ ನಡಸಲಾಯಿತು/ಕುಂದಾಪ್ರ ಡಾಟ್ ಕಾಂ ಸುದ್ದಿ/