ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಇಲ್ಲಿನ ಮರವಂತೆ ಮೀನುಗಾರರ ಸಹಕಾರಿ ಸಂಘದ ನೂತನ ಕಟ್ಟಡ ಕಾಮಗಾರಿಗೆ ಶಂಕು ಸ್ಥಾಪನೆ ಇತ್ತಿಚೆಗೆ ನಡೆಯಿತು.
ಶಂಕು ಸ್ಥಾಪನೆ ಮಾಡಿ ಮಾತನಾಡಿದ ಶಾಸಕ ಬಿ. ಎಂ. ಸುಕುಮಾರ ಶೆಟ್ಟಿ, ಕರಾವಳಿಯ ಆರ್ಥಿಕ ಜೀವನಾಡಿಯಾಗಿರುವ ಮೀನುಗಾರಿಕೆಗೆ ಮೀನುಗಾರರ ಸಹಕಾರ ಸಂಘಗಳು ದೀರ್ಘ ಕಾಲದಿಂದ ಹಣಕಾಸಿನ ಹಾಗೂ ಅಗತ್ಯ ಪರಿಕರಗಳನ್ನು ಪೂರೈಸುವ ಮೂಲಕ ಬೆಂಬಲ ನೀಡುತ್ತ ಬಂದಿವೆ ಎಂದು ಹೇಳಿದರು.
ಮರವಂತೆಯ ಸಂಘವು ಜಿಲ್ಲೆಯ ಅತ್ಯಂತ ಹಳೆಯ ಸಂಸ್ಥೆಗಳಲ್ಲಿ ಒಂದು. ಅದರಿಂದ ಪರಿಸರದ ಮೀನುಗಾರರು ಹೆಚ್ಚಿನ ಸೇವೆ ನಿರೀಕ್ಷಿಸುತ್ತಾರೆ. ಅದಕ್ಕೆ ಅನುಗುಣವಾಗಿ ಸಂಘ ತನ್ನ ವ್ಯವಹಾರವನ್ನು ವಿಸ್ತರಿಸಿಕೊಳ್ಳಬೇಕು. ಅದರ ನೂತನ ಕಟ್ಟಡ ಮತ್ತು ಅನ್ಯ ಚಟುವಟಿಕೆಗಳಿಗೆ ಸರ್ಕಾರದಿಂದ ಸಿಗುವ ಎಲ್ಲ ನೆರವನ್ನು ಒದಗಿಸಿಕೊಡಲಾಗುವುದು ಎಂದು ಭರವಸೆ ನೀಡಿದರು.
ಸಂಘದ ಅಧ್ಯಕ್ಷ ಪ್ರವೀಣ ಖಾರ್ವಿ ಸ್ವಾಗತಿಸಿದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಚೈತ್ರಾ ವಂದಿಸಿದರು. ಸಂಘದ ಮಾಜಿ ಅಧ್ಯಕ್ಷರಾದ ಅಣ್ಣಪ್ಪ ಖಾರ್ವಿ, ಭಾಗ್ಯಾ, ನಿರ್ದೇಶಕ ಮಂಡಳಿಯ ಸದಸ್ಯರು, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷೆ ಅನಿತಾ ಆರ್. ಕೆ, ಮರವಂತೆ ಮೀನುಗಾರರ ಸೇವಾ ಸಮಿತಿಯ ಅಧ್ಯಕ್ಷ ಮೋಹನ ಖಾರ್ವಿ, ಗುತ್ತಿಗೆದಾರ ಚಂದ್ರ ಖಾರ್ವಿ, ಮೀನುಗಾರ ಮುಖಂಡರಾದ ಜಿ. ಆನಂದ ಖಾರ್ವಿ, ಚಂದ್ರ ಖಾರ್ವಿ ಇದ್ದರು.