ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ತಾಲೂಕಿನ ಯಡ್ತರೆ ಫ್ರೆಂಡ್ಸ್ ಎರಡು ದಿನಗಳ ಕಾಲ ಯಡ್ತರೆ ಕ್ರೀಡಾಂಗಣದಲ್ಲಿ ಆಯೋಜಿಸಿದ 30 ಗಜಗಳ ಕ್ರಿಕೆಟ್ ಪಂದ್ಯಾಟದಲ್ಲಿ ಉಪ್ಪುಂದ ವಿವೇಕಾನಂದ ತಂಡ ಯಡ್ತರೆ ಟ್ರೋಫಿ – 2021ನ್ನು ಮುಡಿಗೇರಿಸಿಕೊಂಡಿದ್ದು, ಸೋಮಲಿಂಗೇಶ್ವರ ಫ್ರೆಂಡ್ಸ್ ಚಂದನ ತಂಡವು ರನ್ನರ್ಅಪ್ ಆಗಿದೆ.
ಸಮಾರೋಪ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಪಂಚಾಯತ್ ಸದಸ್ಯ ಶಂಕರ ಪೂಜಾರಿ ಮಾತನಾಡಿ, ಕ್ರೀಡೆಯಿಂದ ಸಮರಸ್ಯ ಸಾಧ್ಯವಿದ್ದು, ಜಾತಿ, ಧರ್ಮಗಳ ಭೇದವಿಲ್ಲದೇ ಎಲ್ಲರೂ ಪಾಲ್ಗೊಳ್ಳುತ್ತಾರೆ. ಆಟದಲ್ಲಿ ಸೋಲು ಗೆಲುವು ಸಹಜವಾದರೂ ಕ್ರೀಡಾಳುಗಳ ಸಂಘಟನಾತ್ಮಕ ಪ್ರಯತ್ನ ಇನ್ನೊಂದು ಯಶಸ್ಸಿಗೆ ದಾರಿಮಾಡಿಕೊಡುತ್ತದೆ ಎಂದ ಅವರು ಯಡ್ತರೆ ಕ್ರೀಡಾಂಗಣದಲ್ಲಿ ಕಳೆದ ಇಪ್ಪತ್ತೈದು ವರ್ಷಗಳಿಂದ ಕ್ರಿಕೆಟ್ ಪಂದ್ಯಾಟ ನಡೆಯುತ್ತಿದೆ. ನೂರಾರು ಕ್ರೀಡಾ ಪಟುಗಳು ಇಲ್ಲಿ ತಯಾರಾಗಿದ್ದಾರೆ. ಆದರೆ ಅವರು ಜಿಲ್ಲೆ, ರಾಜ್ಯ ಮಟ್ಟದಲ್ಲಿ ಮುಂದುವರಿಯದಿರುವುದು ವಿಷಾದದ ಸಂಗತಿಯಾಗಿದ್ದು, ಕ್ರೀಡಾಪಟುಗಳನ್ನು ಪ್ರೋತ್ಸಾಹಿಸುವ ಕೆಲಸವಾಗಬೇಕಿದೆ ಎಂದರು.
ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಚಿನ್ನದ ಪದಕ ವಿಜೇತ ಅರಣ್ಯ ಪಾಲಕ ತಿಮ್ಮಪ್ಪ ದೇವಾಡಿಗ ಅವರನ್ನು ಸನ್ಮಾನಿಸಲಾಯಿತು. ಲಕ್ಕಿ ಡ್ರಾ ವಿಜೇತ ಐವರು ಅದೃಷ್ಟಶಾಲಿಗಳು ಬಹುಮಾನ ತನ್ನದಾಗಿಸಿಕೊಂಡರು. ಉತ್ತಮ ದಾಂಡಿಗ ಗೌರವಕ್ಕೆ ಸೋಮಲಿಂಗೇಶ್ವರ ತಂಡದ ಗೋವಿಂದ, ವಿವೇಕಾನಂದ ತಂಡದ ಲೋಕೇಶ್ ಪಾತ್ರರಾದರು. ಕ್ರಿಕೆಟ್ ಪಂದ್ಯಾಟಕ್ಕೆ ಸಹಕರಿಸಿದವರನ್ನು ಅಭಿನಂದಿಸಲಾಯಿತು.
ಈ ಸಂದರ್ಭ ಎಪಿಎಂಸಿ ಮಾಜಿ ಅಧ್ಯಕ್ಷ ದೀಪಕ್ಕುಮಾರ್ ಶೆಟ್ಟಿ, ಕ್ಷೇತ್ರ ಶಿಕ್ಷಣ ಸಂಪನ್ಮೂಲ ವ್ಯಕ್ತಿ ಕರುಣಾಕರ ಶೆಟ್ಟಿ ಯಡ್ತರೆ ಗ್ರಾಮ ಪಂಚಾಯತ್ ಮಾಜಿ ಸದಸ್ಯ ಸುಧಾಕರ ದೇವಾಡಿಗ ಯಡ್ತರೆ, ಉದ್ಯಮಿಗಳಾದ ಅಣ್ಣಪ್ಪ ಪೂಜಾರಿ, ಚಂದ್ರ ದೇವಾಡಿಗ, ಸೇನೇಶ್ವರ ಕಲಾ & ಕ್ರೀಡಾ ಸಂಘದ ಅಧ್ಯಕ್ಷ ಸಂತೋಷ ಜೆ.ಡಿ, ಕುಂದಾಪ್ರ ಡಾಟ್ ಕಾಂ ಸಂಪಾದಕ ಸುನಿಲ್ ಹೆಚ್. ಜಿ. ಮೊದಲಾದವರು ಉಪಸ್ಥಿತರಿದ್ದರು. ಯಡ್ತರೆ ಫ್ರೆಂಡ್ಸ್ನ ರಾಘವೇಂದ್ರ ಆರ್.ಡಿ ಸ್ವಾಗತಿಸಿ, ವಿಘ್ನೇಶ್ ಕಾರ್ಯಕ್ರಮ ನಿರೂಪಿಸಿದರು.