ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಪುರಸಭೆ ವಿರೋಧ ಪಕ್ಷದ ಸದಸ್ಯರನ್ನು ಆಹ್ವಾನಿಸದೆ ಒಳಚರಂಡಿ ಮಂಡಳಿ ನಿರ್ದೇಶಕರ ಜತೆ ಸಭೆ ನಡೆದಿದ್ದು, ಈ ಕುರಿತು ತಪ್ಪೊಪ್ಪಿಕೊಳ್ಳಬೇಕು ಎಂದು ವಿರೋಧ ಪಕ್ಷದವರ ಆಗ್ರಹಿಸಿದರು. ತಪ್ಪೊಪ್ಪಿಕೊಳ್ಳುವ ಪ್ರಸಂಗವೇ ನಡೆದಿಲ್ಲ ಎಂದು ಆಡಳಿತ ಪಕ್ಷದವರು ಸಮರ್ಥನೆ ಮಾಡಿದ ಘಟನೆ ಇಲ್ಲಿನ ಪುರಸಭೆಯ ಸಾಮಾನ್ಯ ಸಭೆಯಲ್ಲಿ ನಡೆಯಿತು.
ಈಚೆಗೆ ಒಳಚರಂಡಿ ಅಭಿವೃದ್ಧಿ ಮಂಡಳಿ ನಿರ್ದೇಶಕರು ಕುಂದಾಪುರಕ್ಕೆ ಬಂದಿದ್ದ ವೇಳೆ ಅಧ್ಯಕ್ಷರು ಮತ್ತು ಆಡಳಿತ ಪಕ್ಷದ ಸದಸ್ಯರು ಅವರೊಂದಿಗೆ ನಡೆಸಿದ ಸಭೆಯಲ್ಲಿ ಬಿಜೆಪಿ ಮುಖಂಡರೂ ಪಾಲ್ಗೊಂಡಿದ್ದರು. ಆದರೆ ವಿರೋಧ ಪಕ್ಷದ ಸದಸ್ಯರಿಗೂ ಮಾಹಿತಿ ನೀಡದೆ ಕಡೆಗಣಿಸಲಾಗಿದೆ. ಈ ಬಗ್ಗೆ ತಪ್ಪೊಪ್ಪಿಕೊಳ್ಳಬೇಕು, ಇಲ್ಲದಿದ್ದರೆ ಸಭೆಯನ್ನು ಬಹಿಷ್ಕರಿಸುವುದಾಗಿ ವಿರೋಧ ಪಕ್ಷದ ನಾಯಕ ಚಂದ್ರಶೇಖರ ಖಾರ್ವಿ ಹೇಳಿದರು. ಶ್ರೀಧರ ಶೇರೆಗಾರ್, ದೇವಕಿ ಸಣ್ಣಯ್ಯ, ಕೆ. ಜಿ. ನಿತ್ಯಾನಂದ ಬೆಂಬಲಿಸಿದರು. ಹಿರಿಯ ಸದಸ್ಯ ಮೋಹನದಾಸ್ ಶೆಣೈ ಈ ಕುರಿತು ಮಾಹಿತಿ ನೀಡಲು ಮುಂದಾದಾಗ, ಆಕ್ಷೇಪಿಸಿದ ಚಂದ್ರಶೇಖರ ಖಾರ್ವಿ, ಅಧ್ಯಕ್ಷರೇ ಉತ್ತರಿಸುವಂತೆ ಒತ್ತಾಯಿಸಿದರು.
ಆಡಳಿತ ಪಕ್ಷದ ಸಂತೋಷ ಶೆಟ್ಟಿ, ಪ್ರಭಾಕರ, ಜಿ. ಕೆ. ಗಿರೀಶ್ ದೇವಾಡಿಗ, ಶೇಖರ್ , ಯಾವುದೇ ಅಧಿಕೃತ ಸಭೆ ನಡೆಸಿಲ್ಲ , ಅಧ್ಯಕ್ಷರು ಸಭೆ ಕರೆಯದೇ ಇರೋದರಿಂದ ತಪ್ಪೊಪ್ಪಿಕೊಳ್ಳುವ ಪ್ರಶ್ನೆಯೇ ಇಲ್ಲ ಎಂದರು.
ಮೋಹನದಾಸ್ ಶೆಣೈ ಮಾತನಾಡಿ, ‘ಸಭೆ ಅನಧಿಕೃತ ಎಂದು ಉಪ ವಿಭಾಗಾಧಿಕಾರಿ ಹೇಳಿದ್ದಾರೆ. ಒಳಚರಂಡಿ ಮಂಡಳಿ ನಿರ್ದೇಶಕರು ಭೇಟಿ ನೀಡಿದ ಸಂದರ್ಭದಲ್ಲಿ ಅನೌಪಚಾರಿಕವಾಗಿ ಯುಜಿಡಿ ಬಗ್ಗೆ ಕೇಳಿದ್ದರಿಂದ ಮಾಹಿತಿ ನೀಡಲಾಗಿದೆ. ಇನ್ನೂ 15 ದಿನದಲ್ಲಿ ಮಂಡಳಿ ನಿರ್ದೇಶಕರ ಜೊತೆ ಸಭೆ ನಡೆಸಿ, ಯುಜಿಡಿ ಬಗ್ಗೆ ವಿಸ್ತೃತ ಚರ್ಚೆ ನಡೆಸಲಾಗುತ್ತದೆ. ಇನ್ನೂ ಮುಂದೆ ಹೀಗಾಗದಂತೆ ನೋಡಿಕೊಳ್ಳಲಾಗುತ್ತದೆ ಎಂದು ಸಮಜಾಯಿಷಿ ನೀಡಿದರು. ವಿರೋಧ ಪಕ್ಷದ ಸದಸ್ಯರು ಅಧ್ಯಕ್ಷರೇ ಮಾತನಾಡುವಂತೆ ಒತ್ತಾಯಿಸಿದರು.
ಇದಕ್ಕೆ ಪ್ರತಿ ಸ್ಪಂದಿಸಿದ ಅಧ್ಯಕ್ಷೆ ವೀಣಾ ಭಾಸ್ಕರ್ ಮೆಂಡನ್, ಸಭೆ ನಡೆಸಿಲ್ಲ. ಪಕ್ಷದ ಕಾರ್ಯಕರ್ತರು ಅವರನ್ನು ಅಭಿನಂದಿಸಲು ಬಂದಿದ್ದರು ಅಷ್ಟೇ’ ಎಂದು ಪರಿಸ್ಥಿತಿ ತಿಳಿಗೊಳಿಸಿದರು. ಮಂಡಳಿ ನಿರ್ದೇಶಕರ ಸಭೆಯಲ್ಲಿ ಪಾಲ್ಗೊಂಡಿರುವ ಮುಖ್ಯಾಧಿಕಾರಿ ಅವರ ವಿರುದ್ಧ ಹಕ್ಕುಚ್ಯುತಿ ಹಾಗೂ ಶಿಸ್ತುಕ್ರಮಕ್ಕೆ ದೂರು ನೀಡುತ್ತೇವೆ ಎಂದು ಚಂದ್ರಶೇಖರ ಖಾರ್ವಿ ಹೇಳಿದರು.
ಮುಖ್ಯಾಧಿಕಾರಿ ಗೋಪಾಲಕೃಷ್ಣ ಶೆಟ್ಟಿ, ನಾನು ಯಾವುದೇ ಕ್ರಮಕ್ಕೂ ಸಿದ್ದನಿದ್ದೇನೆ ಎಂದರು. ಸಭೆಯಲ್ಲಿ ಕುಡಿಯುವ ನೀರು, ವಿದ್ಯುತ್, ಬೀದಿ ದೀಪ ಕುರಿತು ಚರ್ಚೆ ನಡೆಯಿತು. ಸಭೆಯ ಅಧ್ಯಕ್ಷತೆಯನ್ನು ಪುರಸಭೆ ಅಧ್ಯಕ್ಷೆ ವೀಣಾ ಭಾಸ್ಕರ್ ಮೆಂಡನ್ ವಹಿಸಿದ್ದರು. ಯುಜಿಡಿ ಅಧಿಕಾರಿ ಚಂದ್ರಶೇಖರ ಹೇಳಿದರು. ಉಪಾಧ್ಯಕ್ಷ ಸಂದೀಪ ಖಾರ್ವಿ, ಮುಖ್ಯಾಧಿಕಾರಿ ಗೋಪಾಲಕೃಷ್ಣ ಶೆಟ್ಟಿ ಇದ್ದರು.