ಕುಂದಾಪ್ರ ಡಾಟ್ ಕಾಂ ಸುದ್ದಿ
ಉಡುಪಿ: ಸೇನೆಯ ಬಗ್ಗೆ ಉತ್ತಮ ಅನುಭವ ಕಟ್ಟಿಕೊಡುವ ‘ಸೇನಾನುಭವ’ ಕೃತಿ ಭಾರತೀಯ ಸೇನೆಯ ಬಗೆಗಿನ ಹಲವು ತಪ್ಪು ಕಲ್ಪನೆಯನ್ನು ತೊಡೆದುಹಾಕುತ್ತದೆ. ಸೇನೆಯ ಬಗೆಗೆ ಉತ್ತಮ ಅಂಶಗಳನ್ನು ಒಳಗೊಂಡಿರುವ ಕೃತಿಯು ಪದವಿ ವಿದ್ಯಾರ್ಥಿಗಳಿಗೆ ಪಠ್ಯವಾಗಬಲ್ಲ ಮೌಲ್ಯ ಹೊಂದಿದೆ ಎಂದು ಹಿರಿಯ ಸಾಹಿತಿ ಡಾ. ನಾ. ಮೊಗಸಾಲೆ ಹೇಳಿದರು.
ಅವರು ಶನಿವಾರ ಉಡುಪಿ ಸುಹಾಸಂ ನೇತೃತ್ವದಲ್ಲಿ ಹೊಟೆಲ್ ಕಿದಿಯೂರಿನ ರೂಪ್ ಟಾಪ್ ಹಾಲಿನಲ್ಲಿ ಆಯೋಜನೆಗೊಂಡ ಸಮಾರಂಭದಲ್ಲಿ ಬೈಂದೂರು ಚಂದ್ರಶೇಖರ ನಾವಡರ ಸೇನಾನುಭವ ಕೃತಿ ಬಿಡುಗಡೆಗೊಳಿಸಿ ಮಾತನಾಡಿ ಈ ಕೃತಿಯು ಸೇನಾನುಭವ, ಸೇವಾನುಭವ ಮತ್ತು ಸೇವಾನುಭಾವದ ಮೂರು ಆಯಾಮವನ್ನು ಒಳಗೊಂಡಿದ್ದು, ಪರಿಪೂರ್ಣತೆಯೆಡೆಗೆ ಸಾಗಿದೆ. ಚಂದ್ರಶೇಖರ ನಾವುಡರಲ್ಲಿ ಪತ್ರಕರ್ತನಲ್ಲಿರಬೇಕಾದ ನಿರೂಪಣಾ ಶೈಲಿ, ಸಾಹಿತ್ಯಿಕ ಪಟುತ್ವ ಕರಗತವಾಗಿರುವುದರಿಂದ ತಮ್ಮ ಕೃತಿಯಲ್ಲಿ ಹಲವು ವಿಚಾರಗಳನ್ನು ಸೊಗಸಾಗಿ ವಿವರಿಸಿದ್ದಾರೆ ಎಂದರು.
ಲೇಖಕರ ಹಿತರಕ್ಷಣಾ ವೇದಿಕೆಯ ಅಧ್ಯಕ್ಷರಾದ ಚಿತ್ರಪಾಡಿ ಉಪೇಂದ್ರ ಸೋಮಯಾಜಿ ಕೃತಿ ಪರಿಚಯ ಮಾಡಿದರು. ಕುಂದಪ್ರಭ ಸಂಪಾದಕರಾದ ಯು. ಎಸ್. ಶೆಣೈ ಉಪಸ್ಥಿತರಿದ್ದರು.
ಲೇಖಕ ಬೈಂದೂರು ಚಂದ್ರಶೇಖರ ನಾವಡ ಅವರು ಮಾತನಾಡಿ ಭಾರತದಂತಹ ದೇಶದಲ್ಲಿ ಪ್ರಜಾಸತ್ತಾತ್ಮಕ ವ್ಯವಸ್ಥೆ ಬಲವಾಗಿರಲು ಸೇನೆಯೇ ಪ್ರಮುಖ ಕಾರಣ. ಅಲ್ಲಿನ ವ್ಯವಸ್ಥೆ ಹಾಗೂ ರೀತಿನೀತಿಗಳ ಬಗೆಗೆ ಹಲವು ತಪ್ಪು ಕಲ್ಪನೆ ಇರುವುದರಿಂದ ಕೆಲವರು ಆಗಾಗ್ಗೆ ಟೀಕಿಸುತ್ತಲೇ ಇರುತ್ತಾರೆ. ಆದರೆ ವ್ಯವಸ್ಥೆಯ ಒಳಗಿದ್ದು ನೋಡಿದವರಿಗೆ ಮಾತ್ರವೇ ವಾಸ್ತವ ಅರಿವಾಗಿರುತ್ತದೆ. ನನ್ನ ಸೇನಾ ಬದುಕಿನ ಅನುಭವಗಳನ್ನು ತೆರೆದಿಡುವ ಮೂಲಕ ಸೇನೆಯ ಬಗೆಗೆ ಇರಲೇಬೇಕಾದ ಗೌರವ ಭಾವನೆ ಹೆಚ್ಚಿಸುವ ಪ್ರಯತ್ನ ಮಾಡಿದ್ದೇನೆ ಎಂದರು.
ಉಡುಪಿ ಸುಹಾಸಂ ಅಧ್ಯಕ್ಷರಾದ ಎಚ್. ಶಾಂತರಾಜ ಐತಾಳ್ ಸ್ವಾಗತಿಸಿದರು. ಲಾವಣ್ಯ ಅಧ್ಯಕ್ಷರಾದ ಉದಯ ಆಚಾರ್ ವಂದಿಸಿದರು. ಉಡುಪಿಯ ಶ್ರೀನಿವಾಸ ಉಪಾಧ್ಯ ಕಾರ್ಯಕ್ರಮ ನಿರೂಪಿಸಿದರು.
ಚಿತ್ರಗಳು: ಶಶಾಂಕ್ ಕಾರಂತ್