ಜನಪದ ಲೋಕದ ವಿಶೇಷ ಆಚರಣೆ – ಹೋಳಿ ಹಬ್ಬ

Call us

Call us

Call us

ಪ್ರಶಾಂತ್ ಸೂರ್ಯ ಸಾಬ್ರಕಟ್ಟೆ | ಕುಂದಾಪ್ರ ಡಾಟ್ ಕಾಂ
ದ.ಕ ಮತ್ತು ಉಡುಪಿ ಜಿಲ್ಲೆಯ ಕುಡುಬಿ ಮತ್ತು ಮರಾಠಿ ಜನಾಂಗದವರ ವಿಶಿಷ್ಠ ಜನಪದ ಆಚರಣೆ ಹೋಳಿ ಹಬ್ಬ. ಅಮಾವಾಸ್ಯೆಯ ಮೊದಲು ಗೋವಾದಿಂದ ಮೂಲ ದೇವರ (ಮಲ್ಲಿಕಾರ್ಜುನ) ಉತ್ಸವ ಮೂರ್ತಿಯನ್ನು ತಂದು ಕೂಡುಕಟ್ಟಿನ ಹಿರಿಯ ಮನೆಗಳಲ್ಲಿ ಪೂಜೆ ಸಲ್ಲಿಸಿದ ಬಳಿಕ ಹಬ್ಬಕ್ಕೆ ಚಾಲನೆ ದೊರೆಯುತ್ತದೆ.

Call us

Click Here

ಆಕರ್ಷಕ ವೇಷಭೂಷಣ
ಹೋಳಿ ಹಬ್ಬದ ಸಮಯದಲ್ಲಿ ಕುಡುಬಿ ಜನಾಂಗದ ವೇಷಭೂಷಣ ನೋಡುವುದೇ ಒಂದು ಹಬ್ಬ. ತಲೆಗೆ ‘ಅಬ್ಬಲಿ ಹೂವಿನಿಂದ’ ಮಾಡಿದ ಮುಂಡಾಸು ಅವರ ಎದುರು ಕಡೆ ಹಟ್ಟಿಮುದ್ದ ಹಕ್ಕಿಯ ಚೆಂದದ ಗರಿ; ಹಾಗೆಯೇ ವಿಶೇಷವಾದ ಉಡುಪುಗಳು, ಮೈ ಮೇಲೆ ಬಿಳಿಯ ನಿಲುವಂಗಿ, ಅಂಗಿಯ ಮೇಲೆ ಬಣ್ಣ ಬಣ್ಣದ ಪಟ್ಟೆಯ ದಾರ ಕಾಲಿಗೆ ಗೆಜ್ಜೆ, ಕೈಯಲ್ಲಿ ಬಾರಿಸುವ ಗುಮ್ಮಟೆ ಇದರ ಧ್ವನಿ ವಿಶೇಷವಾಗಿರುತ್ತದೆ. ಅವರ ಹಾದಿಯಲ್ಲಿ ಸಾಗುತ್ತಿದ್ದರೆ ಮಕ್ಕಳಿಂದ ಹಿಡಿದು ವಯೋವೃದ್ಧರಿಗೆ ಕಣ್ಣಿಗೆ ಹಬ್ಬ.

ಕುಣಿತ – ಕೋಲಾಟ ಕಣ್ಣಿಗೆ ತಂಪು
ಹೋಳಿ ಹಬ್ಬವು ವರ್ಷದ 5 ದಿನ ಕುಡುಬಿ ಜನಾಂಗದವರು ಸಂಭ್ರಮಿಸುವ ಹಬ್ಬವಾಗಿದ್ದು, ಗೋವಾದ ಶ್ರೀ ಮಲ್ಲಿಕಾರ್ಜುನ ದೇವರು ಇವರ ಆರಾಧ್ಯ ದೇವರಾಗಿದ್ದು, ಹಬ್ಬದ ಸಮಯದಲ್ಲಿ ಮಲ್ಲಿಕಾರ್ಜುನನನ್ನು ಸ್ಮರಿಸಿ ಹಾಡಿ ಕುಣಿದು ವಿಶಿಷ್ಠ ರೀತಿಯಲ್ಲಿ ಆಚರಿಸುತ್ತಾರೆ. ಕುಡುಬಿ ಜನಾಂಗದಲ್ಲಿ ಹೋಳಿ ಹಬ್ಬವು ಕೂಡುಕಟ್ಟಿನ ಮನೆಯಿಂದ ಆರಂಭವಾಗುತ್ತದೆ.ಇದರ ಯಜಮಾನರನ್ನು ಗುರಿಕಾರನೆಂದು ಕರೆಯುವುದು ವಾಡಿಕೆ. ತಮ್ಮ ಕೂಡುಕಟ್ಟಿನ ತಂಡಗಳನ್ನು ರಚಿಸಿಕೊಂಡು ವೇಷಭೂಷಣದೊಂದಿಗೆ ಗ್ರಾಮ ದೇವರ ಸನ್ನಿಧಿಗೆ ಬಂದು ಸೇವೆ ಪ್ರಾರಂಭಿಸಿ, ತಂಡ ತಂಡವಾಗಿ ಬರೀ ಕಾಲ್ನಡಿಗೆಯಲ್ಲಿ ತಮ್ಮ ಜನಾಂಗದ ಮನೆಗಳಿಗೆ ಹಾಗೂ ಆಹ್ವಾನಿತರ ಮನೆಗಳಲ್ಲಿ ತೆರಳಿ ತಮ್ಮ ಆಡು ಭಾಷೆಯಾದ ಕುಡುಬಿ ಭಾಷೆಯಲ್ಲಿ ಕುಲ ದೇವರನ್ನು ಪ್ರಾರ್ಥಿಸುತ್ತಾ ಹಾಗೂ ಆಯ್ದ ರಾಮಾಯಣ, ಮಹಾಭಾರತದ ಸನ್ನಿವೇಶಗಳನ್ನು ತಮ್ಮ ಭಾಷೆಯಲ್ಲಿ ಹಾಡುತ್ತಾ ಕುಣಿಯುತ್ತಾರೆ. ಅಲ್ಲದೇ ಕೋಲಾಟ ಇದರ ಜೊತೆಗೆ ಆಕರ್ಷಣೀಯ. ಅವರು ಅಲ್ಲಿ ಹಾಡಿ ಕುಣಿದಕ್ಕೆ ಮನೆಯಿಂದ ಅಕ್ಕಿ, ಕಾಯಿ, ಕಾಣಿಕೆಯನ್ನು ಪಡೆಯುವುದು ರೂಢಿ.

ಕೊನೆಯ ದಿನ ಹೋಳಿ ಹುಣ್ಣಿಮೆಯ ದಿನದಂದು ಕೂಡುಕಟ್ಟಿನ ಮನೆಯಲ್ಲಿ ಅಂತಿಮ ಕುಣಿತವನ್ನು ಮಾಡಿ, ಸಾಮೂಹಿಕ ಸ್ನಾನದ ನಂತರ ಕಾಮದಹನ (ಬೆಂಕಿ ಹಾಯುವುದು) ಮಾಡಿ ನಂತರ ಎಲ್ಲರೂ ಜೊತೆಯಾಗಿ ಹಬ್ಬದ ಊಟ ಸವಿದು ತಾವು ಬೇರೆ ಕಡೆ ಪಡೆದ ಅಕ್ಕಿ,ಕಾಯಿ ಸಮಾನವಾಗಿ ಹಂಚಿಕೊಂಡು ತಮ್ಮ ತಮ್ಮ ಮನೆಗಳಿಗೆ ತೆರಳುತ್ತಾರೆ.
ಉಡುಪಿ ಜಿಲ್ಲೆಯ ಕೊಕ್ಕರ್ಣೆ, ನಾಲ್ಕೂರು, ಗೋಳಿಯಂಗಡಿ, ಬೆಳ್ವೆ, ಹಾಲಾಡಿ, ಯಡ್ತಾಡಿ, ಅಲ್ತಾರು,ಮಂದಾರ್ತಿ, ನಡೂರು ಈ ಭಾಗದಲ್ಲಿ ಹೆಚ್ಚಾಗಿ ಕುಡುಬಿ ಜನಾಂಗದ ಜನಸಂಖ್ಯೆ ಜಾಸ್ತಿಯಾಗಿದ್ದು, ಹೋಳಿ ಹುಣ್ಣಿಮೆ ಸಮಯದಲ್ಲಿ ಈ ಪ್ರದೇಶದಲ್ಲಿ ಕಂಡು ಬರುತ್ತದೆ.

ವಿಶ್ವ ಸಂಸ್ಕೃತಿಯಲ್ಲಿ ಭಾರತೀಯ ಸಂಸ್ಕೃತಿಗೆ ತನ್ನದೇ ಆದ ವಿಶೇಷ ಸ್ಥಾನಮಾನವಿದೆ. ನಮ್ಮಲ್ಲಿರುವ ಜನಪದ ಕಲೆಗೆ ಆಚರಣೆಗಳಿಗೆ ವಿದೇಶಿಗರೂ ಮಾರು ಹೋಗುತ್ತಿದ್ದಾರೆ. ಅಲ್ಲದೇ ಕರಾವಳಿಯಲ್ಲಿ ನಡೆಯುವ ಕೆಲವೊಂದು ವಿಶೇಷ ಜಾನಪದ ಆಚರಣೆಗಳು ನಮ್ಮ ಸಂಸ್ಕೃತಿಯನ್ನು ಎತ್ತಿ ಹಿಡಿಯುತ್ತದೆ ಅಲ್ಲದೇ ನಮ್ಮ ಸಂಸ್ಕೃತಿಯನ್ನು ಮುಂದಿನ ಜನಾಂಗಕ್ಕೆ ತಲುಪಿಸಲು ಇಂತಹ ಆಚರಣೆಗಳು ಸಹಕಾರಿಯಾಗುತ್ತದೆ. ಇಂದಿನ ಕಾಲಘಟ್ಟದಲ್ಲಿ ರಿಯಾಲಿಟಿ ಶೋ ನಂತಹ ಟಿ.ವಿ ಮಾಧ್ಯಮಗಳು ಟಿ.ಆರ್.ಪಿ ವ್ಯಾಮೋಹಕ್ಕೆ ಸಿಲುಕಿ ನಮ್ಮ ಆಚರಣೆಗಳನ್ನು ಬಳಸಿಕೊಳ್ಳುವುದು ವಿಷಾದನೀಯ. ತಮ್ಮ ಪೂರ್ವಜರು ನಮಗೆ ಧಾರೆ ಎರೆದ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಜವಾಬ್ದಾರಿ ನಮ್ಮ ಮೇಲಿದೆ. ನಮ್ಮ ಜಾನಪದ ಆಚರಣೆಗಳು ಹೀಗೆ ನಡೆದು ಹೋಳಿ ಹಬ್ಬ ದಂತಹ ವಿಶೇಷ ಆಕರ್ಷಣೆಯ ಜಾನಪದ ಹಬ್ಬಗಳು ನಮ್ಮ ಕಣ್ಣ ಮುಂದೆ ಶಾಶ್ವತವಾಗಿ ರಾರಾಜಿಸಲಿ ಎಂಬುವುದು ನಮ್ಮ ಆಶಯ

Click here

Click here

Click here

Click Here

Call us

Call us

ಹೋಳಿ ಹಬ್ಬ ನಮ್ಮ ಜನಾಂಗದ ಒಂದು ಸಂಪ್ರದಾಯ,ತತಲಾಂತರದಿಂದ ನಮ್ಮ ಪೂರ್ವಜರು ಆಚರಿಸಿಕೊಂಡು ಬಂದಿದ್ದಾರೆ.ಐದು ದಿನಗಳ ಕಾಲ ನಾವು ಕೂಡುಕಟ್ಟಿನವರು ಜೊತೆಯಾಗಿ ಆಚರಿಸುತ್ತೇವೆ.ಒಂದು ಸಂಭ್ರಮದ ವಾತವರಣ,ಗುರಿಕಾರರು,ಹಿರಿಯರು ನಮಗೆ ಮಾರ್ಗದರ್ಶನ ನೀಡಿ ಸಹಕರಿಸುತ್ತಾರೆ. – ಸಂತೋಷ್ ನಾಯ್ಕ, ಸಾಬ್ರಕಟ್ಟೆ

ಜನಪದ ಆಚರಣೆಯೊಂದಿಗೆ ದೇವತಾ ಆಧಾರನೆ ಮೂಲಕ ಹೋಳಿ ಹಬ್ಬ ಆಚರಿಸುತ್ತೇವೆ.ಇದರಲ್ಲಿ ಹಾಡು ಕುಣಿತದೊಂದಿಗೆ ಕೋಲಾಟ ನೃತ್ಯ ವಿಶೇಷ.ನಮ್ಮ ಈ ಸಂಸ್ಕೃತಿ ಉಳಿವು-ಬೆಳೆಯುವ ಬಗ್ಗೆ ಸರಕಾರ ಮುತುವರ್ಜಿ ತೆಗೆದುಕೊಂಡು ಸೂಕ್ತ ಪ್ರೋತ್ಸಾಹ ನೀಡಬೇಕು. –  ಬಾಬಣ್ಣ ನಾಯ್ಕ, ಸದಸ್ಯರು ಹೋಳಿ ಕೂಡುಕಟ್ಟು ಕ್ಯಾದಿಕೇರಿ ಅಲ್ತಾರು

Leave a Reply