ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಹೊಟೇಲೊಂದರ ಪಾರ್ಕಿಂಗ್ ಸ್ಥಳದಲ್ಲಿ ಬಿದ್ದಿದ್ದ ಸುಮಾರು 40 ಸಾವಿರ ಹಣವನ್ನು ಸಂಬಂಧಪಟ್ಟವರಿಗೆ ಮರಳಿಸುವ ಮೂಲಕ ಶಾಲಾ ವಿದ್ಯಾರ್ಥಿಯೋರ್ವ ಪ್ರಾಮಾಣಿಕತೆ ಮೆರೆದು ಎಲ್ಲರ ಮೆಚ್ಚುಗೆಗೆ ಪಾತ್ರನಾಗಿದ್ದಾನೆ.
ಕುಂದಾಪುರ ಹೊಟೇಲ್ ಶೆರೋನ್ನ ಪಾರ್ಕಿಂಗ್ ಸ್ಥಳದಲ್ಲಿ ಬಿದ್ದಿದ್ದ 40 ಸಾವಿರ ರೂ. ನಗದನ್ನು ನೋಡಿದ ಕುಂದಾಪುರದ ಶ್ರೀ ವೆಂಕಟರಮಣ ಆಂಗ್ಲ ಮಾಧ್ಯಮ ಶಾಲೆಯ 6ನೇ ತರಗತಿ ವಿದ್ಯಾರ್ಥಿ, ದಿನೇಶ ಗೋಡೆ ಅವರ ಪುತ್ರ ದಿಶನ್ ಗೋಡೆ, ಆ ಹಣವನ್ನು ಹೋಟೆಲ್ ಮಾಲೀಕರಿಗೆ ತಲುಪಿಸಿ ಸಂಬಂಧಪಟ್ಟವರಿಗೆ ಹಿಂದಿರುಗಿಸುವಂತೆ ಮನವಿ ಮಾಡಿದ್ದರು. ಇದೇ ಸಂದರ್ಭ ಕಳೆದು ಹೋದ ಹಣಕ್ಕಾಗಿ ಹುಡುಕಾಡುತ್ತ ಹೊಟೇಲ್ಗೆ ಬಂದ ಮೂಲತ: ಗಂಗೊಳ್ಳಿ ನಿವಾಸಿ ಬಿ. ನಾಗರಾಜ ಶೆಣೈ ಎಂಬುವರು ಕಳೆದು ಹೋದ ಹಣದ ಬಗ್ಗೆ ಹೊಟೇಲ್ ಮಾಲೀಕರಲ್ಲಿ ವಿಚಾರಿಸಿದಾಗ ಹಣವನ್ನು ಶಾಲಾ ವಿದ್ಯಾರ್ಥಿಯೋರ್ವ ವಾಪಾಸು ನೀಡಿರುವುದು ತಿಳಿದು ಬಂದಿತು.
ಹಣವನ್ನು ಮರುಕಳಿಸುವ ಮೂಲಕ ಪ್ರಾಮಾಣಿಕತೆ ಮೆರೆದ ವಿದ್ಯಾರ್ಥಿ ದಿಶನ್ ಗೋಡೆ ಅವರಿಗೆ ನಾಗರಾಜ ಶೆಣೈ ಬಹುಮಾನ ನೀಡಿ ಪ್ರಶಂಸಿಸಿದರು. ನಾಗರಾಜ ಶೆಣೈ ಕುಂದಾಪುರದ ಹೊಟೇಲ್ನಲ್ಲಿ ಉಪಹಾರ ಮುಗಿಸಿ ಮನೆಗೆ ತೆರಳುವ ಸಂದರ್ಭ ಪ್ಯಾಂಟ್ ಕಿಸೆಯಲ್ಲಿದ್ದ ಹಣ ಬಿದ್ದು ಹೋಗಿತ್ತು. ಬಿ.ಪ್ರಕಾಶ ಶೆಣೈ ಗಂಗೊಳ್ಳಿ ಮತ್ತು ದಿನೇಶ ಗೋಡೆ ಈ ಸಂದರ್ಭ ಉಪಸ್ಥಿತರಿದ್ದರು.